ತುಂಗಭದ್ರಾ ತಟದಲ್ಲಿ ಮನೆಗೆ ನುಗ್ಗಿದ ನೀರು
Team Udayavani, Aug 11, 2019, 5:42 PM IST
ಕೊಪ್ಪಳ: ವಿವಿಧೆಡೆ ಮಳೆಯ ಆರ್ಭಟದ ತುಂಗಭದ್ರಾ ಜಲಾಶಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ತಟದಲ್ಲಿರುವ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಸಮೀಪದಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು ಕುಟುಂಬಗಳನ್ನು ಅಲ್ಲಿಂದ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಹುಲಿಗೆಮ್ಮ ದೇವಸ್ಥಾನವು ನದಿ ತಟದಲ್ಲಿಯೇ ಇದ್ದು, ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುವ ಕುಟುಂಬಗಳು ನದಿಯ ತಟದಲ್ಲಿ ವಾಸ ಮಾಡುತ್ತಿದ್ದವು. ಡ್ಯಾಂಗೆ ಒಳ ಹರಿವು 2 ಲಕ್ಷ ಕ್ಯೂಸೆಕ್ ನಷ್ಟಿದ್ದ ಹಿನ್ನೆಲೆಯಲ್ಲಿ ತಡರಾತ್ರಿಯೇ ಹೆಚ್ಚಿನ ಪ್ರಮಾಣದ ನೀರನ್ನು ನದಿ ಪಾತ್ರಗಳಿಗೆ ಹರಿ ಬಿಡಲಾಗಿದೆ.
ಹೀಗಾಗಿ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಮನೆಗಳಿಗೆ ನೀರು ನುಗ್ಗಿದೆ. ಅವರೆಲ್ಲರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ನದಿತಟಗಳತ್ತ ಯಾರೂ ತೆರಳದಂತೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ತಹಸೀಲ್ದಾರ್ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.