ಸಿಎಂ ಕೃಪೆಯಿಂದಾದರೂ ಕುಷ್ಟಗಿ ಮುಖ್ಯ ರಸ್ತೆ ಅಭಿವೃದ್ಧಿ ಹೊಂದುವುದೇ?
Team Udayavani, Oct 6, 2022, 10:04 PM IST
ಕುಷ್ಟಗಿ: ಸಿಎಂ ಬಸವರಾಜ ಬೊಮ್ಮಾಯಿ ಅವರ ಕೃಪೆಯಿಂದಾದರೂ ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಹೊಂದುವುದೇ? ಎಂಬ ನಿರೀಕ್ಷೆ ಇದೀಗ ಮುನ್ನೆಲೆಗೆ ಬಂದಿದೆ.
2014ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕನಕ ಭವನಕ್ಕೆ ಅಡಿಗಲ್ಲು ಕಾರ್ಯಕ್ರಮಕ್ಕೆ ಆಗಮಿಸುವ ಸಂಧರ್ಭದಲ್ಲಿ ಪಟ್ಟಣದ ಮುಖ್ಯ ರಸ್ತೆ ಅರೆ-ಬರೆ ಅಭಿವೃಧ್ಧಿಯಾಗಿತ್ತು. ಆಗ ಅಭಿವೃದ್ಧಿಗೊಂಡ ರಸ್ತೆ ಮತ್ತೆ ಅಭಿವೃದ್ದಿಯಾಗಿರಲಿಲ್ಲ. ಕಲ್ಯಾಣ ಕರ್ನಾಟಕ ಜನೋತ್ಸವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬಪಮ್ಮಾಯಿ ಅವರು, ಅ.12ಕ್ಕೆ ಕುಷ್ಟಗಿಗೆ ಆಗಮಿಸುವ ದಿನಾಂಕ ನಿಗದಿಯಾಗಿದ್ದು ಈ ಕಾರಣದಿಂದಾರೂ ರಸ್ತೆಯ ಅಭಿವೃದ್ಧಿಯಾದೀತೆ? ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.
ಕುಷ್ಟಗಿ ಪಟ್ಟಣದ ಹಳೆ ಪೋಲಿಸ್ ಠಾಣೆಯಿಂದ ಬಸವೇಶ್ವರ ವೃತ್ತ, ಮಾರುತಿ ವೃತ್ತದವರೆಗೆ ರಸ್ತೆ ಎಷ್ಟು ಹದಗೆಡಬೇಕೋ ಅಷ್ಟು ಹದಗೆಟ್ಟಿದೆ. ಮಳೆಯ ಪೂರ್ವದಲ್ಲಿ ದೂಳಿನ ರಸ್ತೆ, ಮಳೆಯ ನಂತರ ಕೆಸರಿನ ರಸ್ತೆಯಾಗಿ ಬದಲಾಗುವ ಈ ರಸ್ತೆ ಡಾಂಬರ್ ಕಾಣುವುದು ಯಾವಾಗ? ಈ ರಸ್ತೆಯಲ್ಲಿ ಬಾಯ್ತೆರೆದುಕೊಂಡಿರುವ ಗುಂಡಿಗಳನ್ನು ಮುಚ್ಚುವುದು ಯಾವಾಗ? ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ.
ಈ ರಸ್ತೆಯಲ್ಲಿ ಬಾಯ್ತೆರೆದ ಗುಂಡಿಗಳಿಗೆ ಅದೆಷ್ಟೋ ಬಾರಿ ಮಣ್ಣು ತುಂಬಿದ್ದಾರೆಯೋ ಗೊತ್ತಿಲ್ಲ ಈ ರಸ್ತೆಯ ದುಸ್ಥಿತಿಗೆ ದುರಸ್ಥಿಯ ವೆಚ್ಚವೇ ಜಾಸ್ತಿಯಾಗಿದೆ.
ಪಟ್ಟಣದ ಸರಹದ್ದಿನವರೆಗೆ ಮುಖ್ಯ ರಸ್ತೆಯ ನಿರ್ವಹಣೆ ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕೋ? ಅಥವಾ ಪುರಸಭೆ ನಿರ್ವಹಿಸಬೇಕೋ? ಗೊಂದಲ ಇನ್ನೂ ನಿವಾರಣೆಯಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಅಣಕ
ಈ ಪರಿಸ್ಥಿತಿಯಲ್ಲಿ ಮುಖ್ಯ ರಸ್ತೆಯ ದುಸ್ಥಿತಿಯನ್ನು ಯಾರೂ ಕೇಳದಂತಾಗಿದೆ. ಈ ರಸ್ತೆಯ ದುಸ್ಥಿತಿಯ ಬಗ್ಗೆ ಸಂಘ ಸಂಸ್ಥೆಗಳು ರಸ್ತೆಗೆ ಇಳಿದು ಪ್ರತಿಭಟಿಸಿವೆ ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆಯ ಅವಸ್ಥೆಯ ಬಗ್ಗೆ ಪ್ರಶ್ನಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಶಿವಕುಮಾರ ಅರಾಳಗೌಡ್ರು ಎಂಬುವರು ಕುಷ್ಟಗಿ ನಾಗರೀಕರು ಕೃಷ್ಣಗಿರಿ ಕಾಲೋನಿಗೆ ಹೋಗುವವರು ಅಂಡರಪಾಸ್ ನಲ್ಲಿ ಜಲಮಾರ್ಗದ ಮೂಲಕ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತಕ್ಕೆ ವಾಯು ಮಾರ್ಗದ ಮೂಲಕ ಸಂಚರಿಸುವ (ಕರ್ಮ) ಸೌಭಾಗ್ಯ ಎಂದು ಪೋಸ್ಟ್ ಮಾಡಿ ಪ್ರಸ್ತುತ ರಸ್ತೆಯ ಅವ್ಯವಸ್ಥೆಯ ಅಣಕವಾಡಿರುವುದು ಚರ್ಚೆಗೆ ಗ್ರಾಸವಾಗಿದೆ.