ಹಸಿರನ್ನೇ ಉಸಿರಾಗಿಸಿಕೊಂಡ ಶಾಲೆ
Team Udayavani, Dec 10, 2018, 3:36 PM IST
ಯಲಬುರ್ಗಾ: ಸುತ್ತಲೂ ಮರ-ಗಿಡಗಳಿಂದ ಕೂಡಿದ ವಾತಾವರಣ, ಹಲವು ಬಗೆಯ ಹೂವು, ಹಣ್ಣುಗಳ ಸಸ್ಯ ರಾಶಿ, ಇಲ್ಲಿ ಪ್ರವೇಶಿಸಿದರೆ ಮೈ ಮನಸ್ಸಿಗೆ ತಂಪಿನ ಅನುಭವ! ತಾಲೂಕಿನ ಹಗೇದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣವಿದು. ಈ ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಪರಿಸರ ಪ್ರೀತಿಗೆ ಸಾಕ್ಷಿಯಾಗಿ ಇಲ್ಲಿನ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಮಕ್ಕಳ ಕಲಿಕೆಗೆ ಹೇಳಿ ಮಾಡಿಸಿದ ತಾಣವಿದು. ಮಕ್ಕಳಲ್ಲಿ ವಿದ್ಯೆಯೊಂದಿಗೆ ಪರಿಸರ ಕಾಳಜಿ ಬೆಳಸುವುದು ಕಷ್ಟದ ಕೆಲಸವಲ್ಲ ಎಂಬುದಕ್ಕೆ ಈ ವಸತಿ ಶಾಲೆ ಸಾಕ್ಷಿಯಾಗಿದೆ.
ಉತ್ತಮ ಪರಿಸರ, ಹಸಿರು ಪರಿಸರ ಆರೋಗ್ಯದ ಮೂಲ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಈ ಶಾಲೆ ಹಸಿರುನಿಂದ ಕಂಗೊಳಿಸುತ್ತಿದ್ದು, ಒಳ ಪ್ರವೇಶಿಸಿದರೆ ಅಹ್ಲಾದಕರ ವಾತಾವರಣ ಸಿಗುತ್ತದೆ. ಆವರಣದೊಳಗಿನ ವಿಧ ವಿಧದ ಮರಗಳು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿವೆ. ಮರಗಳ ನೆರಳ ಕೆಳಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿಯುವ ಇಲ್ಲಿನ ವಿದ್ಯಾರ್ಥಿಗಳಲ್ಲಿ ಧನ್ಯತಾಭಾವ ಮೂಡಿದೆ.
ಶಾಲೆಯ ಒಳ ಆವರಣದಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಪೇರಲ, ಚಿಕ್ಕು, ಮಾವು, ತೆಂಗು, ಕರಿಬೇವು, ಲಿಂಬು, ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಬಗೆಯ ಅಲಂಕಾರಿಕ ಸಸ್ಯಗಳಿವೆ. ಶಾಲೆಯಲ್ಲಿ 173 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 8 ಜನ ಶಿಕ್ಷಕರಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಾಲಾ ಬಿಡುವಿನ ವೇಳೆ ಪರಿಸರ ರಕ್ಷಣೆ ಕುರಿತು ಪಾಠ ಮಾಡಲಾಗುತ್ತದೆ.
ಪಾಲಕರ ಸಹಕಾರ: ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆ ಎಂದರೆ ಪಾಲಕರು ತಮ್ಮ ಮಕ್ಕಳನ್ನು ವೈಯಕ್ತಿಕವಾಗಿ ಶಾಲೆ ಬಿಡಿಸುವುದು ಹೆಚ್ಚು. ಆದರೆ ಈ ಗ್ರಾಮದಲ್ಲಿ ಶಾಲೆಯ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಒಬ್ಬ ವಿದ್ಯಾಥಿಯೂ ಗೈರು ಹಾಜರಿದ್ದ ಉದಾಹರಣೆಗಳು ಇಲ್ಲ. ಹಾಗೊಂದು ವೇಳೆ ವಿದ್ಯಾರ್ಥಿಗಳು ಶಾಲೆಗೆ ಬರದೇ ಹೋದರೆ ಸ್ವತಃ ಶಿಕ್ಷಕರೇ ಮನೆಗೆ ತೆರಳಿ ಕರೆತರುತ್ತಾರೆ. ಅದಕ್ಕೆ ಪಾಲಕರ ಸಹಕಾರವೂ ಇದೆ.
ಪಕ್ಷಿಗಳಿಗೆ ನೀರು: ಶಾಲೆಯ ಆವರಣದಲ್ಲಿರುವ ಗಿಡಗಳಿಗೆ ವೈಜ್ಞಾನಿಕ ಹೆಸರನ್ನು ಬರೆಯಿಸಲಾಗಿದೆ. ಶಾಲಾ ಆವರಣದೊಳಗೆ ಸುಂದರ ಪರಿಸರ ಹಿನ್ನೆಲೆಯಲ್ಲಿ ಅನೇಕ ತರಹದ ಪಕ್ಷಿಗಳು ಗಿಡಗಳಲ್ಲಿ ಗೂಡು ಕಟ್ಟಿ ವಾಸಿಸುತ್ತಿದ್ದು, ಇವುಗಳ ದಾಹ ತೀರಿಸಲು ಗಿಡಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಿರುವುದು ಇಲ್ಲಿಯ ಇನ್ನೊಂದು ವಿಶೇಷವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಗೃಹಗಳು ಇವೆ. ಗಿಡಮರಗಳಿಗೆ ನಿತ್ಯ ನೀರು ಹರಿಸುವುದು ಸೇರಿದಂತೆ ಇತರೆ ಕೆಲಸಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಮಾಡುತ್ತಾರೆ.
ಶಾಲೆಗೆ 2013-14ರಲ್ಲಿ ಕೊಪ್ಪಳ ಜಿಲ್ಲಾ ಹಸಿರು ಶಾಲಾ ಪ್ರಶಸ್ತಿ, 2017-18ನೇ ಸಾಲಿನ ಸ್ವಚ್ಚ ಭಾರತ ಮಿಷನ್ನ ಸ್ವತ್ಛ ಸರ್ವೇಕ್ಷಣ ಪ್ರಶಸ್ತಿಯೂ ಲಭಿಸಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಬಂಧ ಸೇರಿ ವಾರಕೊಮ್ಮೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಶಾಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಹಸಿರಿನಿಂದ ಕಂಗೊಳಿಸಲು ಶಾಲೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯಮನೂರಪ್ಪ ಪ್ರಭಣ್ಣನವರ, ವೀರಣ್ಣ ಬಂಡಿಹಾಳ ಶ್ರಮಿಸಿದ್ದಾರೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.
ಇಲ್ಲಿನ ಮಕ್ಕಳ ಇಂಗ್ಲಿಷ್ ಕಲಿಕೆಯನ್ನು ಗಮನಿಸಿದರೇ ಎಂತಹವರೂ ಬೆರಗಾಗುತ್ತಾರೆ. ಆಂಗ್ಲ ಭಾಷೆಯ ಪದ್ಯ, ಕತೆಗಳನ್ನು ಶಿಕ್ಷಕರು ಹೇಳಿಕೊಡುವತ್ತ ಹೆಚ್ಚಿನ ಕಾಳಜಿ ಹೊಂದಿದ್ದರಿಂದ ಈ ಶಾಲೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಬಲ್ಲದು ಎಂಬಷ್ಟರ,ಮಟ್ಟಿಗಿದೆ. ಶಾಲೆಯಲ್ಲಿ ಶಾಲಾ ಸಂಸತ್ತು ರಚನೆಯಾಗಿದೆ. ತೋಟಗಾರಿಕೆ ಮಂತ್ರಿಯಾಗಿರುವ ವಿದ್ಯಾರ್ಥಿ ಶಶಿಕುಮಾರ ಮಂಡಲಗೇರಿ, ಯಾರೇ ಶಾಲೆಗೆ ಬಂದರೂ ಅವರಿಗೆ ಆವರಣದಲ್ಲಿರುವ ಸಸಿಗಳನ್ನು ತೋರಿಸಿ ಅದರ ಬಗ್ಗೆ ವಿವರಿಸುವ ಮೂಲಕ ಉಪಯೋಗ ಕುರಿತು ತಿಳಿಸುತ್ತಾನೆ. ಆತನ ಪರಿಸರ ಕಾಳಜಿ ಎಲ್ಲರಿಗೂ ಮೆಚ್ಚುಗೆ ಗಳಿಸಿದೆ.
ಶಾಲೆಯ ಆವರಣದಲ್ಲಿ ಗಿಡಗಳನ್ನು ಪೋಷಿಸಲಾಗುತ್ತಿದೆ. ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರವೂ ಇದೆ. ಸ್ವಚ್ಚಂದ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಇದರಿಂದ ನೆಮ್ಮದಿಯ ವಾತಾವರಣ ಲಭಿಸುತ್ತದೆ.
ಎಸ್.ಎ. ಕೋಡಿ, ಮುಖ್ಯಶಿಕ್ಷಕ
ಮಲ್ಲಪ್ಪ ಮಾಟರಂಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ