ಮಾಜಿ ಸಚಿವ ತಂಗಡಗಿಗೆ ದಢೇಸುಗೂರು ಸವಾಲ್
ಸೋತರೂ ಬುದ್ಧಿ ಕಲಿಯದ ತಂಗಡಗಿ
Team Udayavani, Apr 18, 2019, 5:50 PM IST
ಕನಕಗಿರಿ: ನಮ್ಮ ಆರು ತಿಂಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಕ್ಕೂ ಹಾಗೂ ಮಾಜಿ ಶಾಸಕ ಶಿವರಾಜ ತಂಗಡಗಿ ನೂತನವಾಗಿ ಪ್ರಥಮ ಬಾರಿ ಆಯ್ಕೆಯಾದ ಆರು ತಿಂಗಳ ಅವಧಿಯಲ್ಲಿ ಮಾಡಿರುವ ಕೆಲಸದ ಬಗ್ಗೆ ದಾಖಲೆ ಸಮೇತ ಬಹಿರಂಗವಾಗಿ ಚರ್ಚಿಸಲು ಕನಕಾಚಲಪತಿ ದೇವಸ್ಥಾನಕ್ಕೆ ಬನ್ನಿ ಎಂದು ಮಾಜಿ ಶಾಸಕ ಶಿವರಾಜ ತಂಗಡಗಿ ಅವರಿಗೆ ಶಾಸಕ ಬಸವರಾಜ ದಢೇಸುಗೂರು ಸವಾಲ್ ಹಾಕಿದರು.
ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ರೋಡ್ ಶೋದಲ್ಲಿ ಅವರು ಮಾತನಾಡಿದರು. ಮೂರು ಸಾವಿರ ಕೋಟಿ ಅನುದಾನವನ್ನು ತಂದಿರುವುದಾಗಿ ಹೇಳುತ್ತಿರುವ ಮಾಜಿ ಶಾಸಕ ತಂಗಡಗಿ, ಆ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಲೂಟಿ ಮಾಡಿರುವುದೇ ಹೆಚ್ಚು. ಕ್ಷೇತ್ರದ ಜನತೆಯನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ಬದಲು, ಹಣದ ದರ್ಪದಿಂದ, ಕುಡಿದ ಅಮಲಿನಲ್ಲಿ ಮನಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದ ಬೇಸತ್ತು ಜನರು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದರೂ ಇನ್ನೂ ಬುದ್ಧಿ ಬಂದಿಲ್ಲ. ಕನಕಗಿರಿ ವಿಧಾನನಸಭಾ ಕ್ಷೇತ್ರದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಜನರು ಮಾಜಿ ಸಚಿವ ತಂಗಡಗಿ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ದಿನಮಾನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಹಲವಾರು ಅಭಿವೃದ್ಧಿ ಕಾರ್ಯ ನಡೆದಿವೆ. ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಮೊತ್ತೂಮ್ಮೆ ಮೋದಿ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ಮತ ಹಾಕಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಪ್ರಮುಖರಾದ ವೀರೇಶ ಸಾಲೋಣಿ, ನಾಗರಾಜ ಬಿಲ್ಗಾರ್, ಡಾ| ದೊಡ್ಡಯ್ಯ ಅರವಟಗಿಮಠ, ಶ್ರೀಧರ ಕೇಸರಹಟ್ಟಿ, ಅಮರಗುಂಡಪ್ಪ, ಡಾ|
ದೇವರಾಜ, ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್, ಸಣ್ಣ ನಕಪ್ಪ, ಹುಲಿಗೆಮ್ಮ ನಾಯಕ, ರತ್ನ ಕುಮಾರಿ ಇತರರಿದ್ದರು.