ಜಲಾಶಯ ಹೂಳೆತ್ತಿದರೆ ರೈತರಿಗೆ ಲಾಭ
ತುಂಗಭದ್ರಾ ನೀರಾವರಿ ಮಂಡಳಿ ಅಧಿಕಾರಿಗಳು ಸಹಕಾರ ನೀಡಲಿ: ರಾಘವೇಂದ್ರ ಹಿಟ್ನಾಳ
Team Udayavani, Jun 5, 2019, 1:24 PM IST
ಕೊಪ್ಪಳ: ಶಿವಪುರ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ರೈತರ ಕ್ರಿಯಾ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ತುಂಗಭದ್ರಾ ಜಲಾಶಯ ಹೂಳೆತ್ತುವ ಕಾರ್ಯಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು
ಕೊಪ್ಪಳ: ಜಲಾಶಯಗಳ ಹೂಳೆತ್ತುವಿನಿಂದ ರೈತರಿಗೆ ಲಾಭವಾಗಲಿದೆ ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಶಿವಪುರ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ರೈತರ ಕ್ರಿಯಾ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ತುಂಗಭದ್ರಾ ಜಲಾಶಯ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಲಾಶಯದ ಹೂಳೆತ್ತುವಿನಿಂದ ರೈತರಿಗೆ ಲಾಭವಾಗುವುದರ ಜೊತೆ ಹೆಚ್ಚಿನ ನೀರು ಸಂಗ್ರಹವಾಗಲಿದೆ. 30 ಟಿಎಂಸಿ ಅಡಿ ಹೂಳು ತುಂಬಿರುವುದರ ಹಿನ್ನೆಲೆಯಲ್ಲಿ ಬಳ್ಳಾರಿ-ಕೊಪ್ಪಳ-ರಾಯಚೂರು ಜಿಲ್ಲೆಗಳ ರೈತರು ಹೂಳೆತ್ತುವುದಕ್ಕೆ ಕೈ ಜೋಡಿಸಿದ್ದಾರೆ. ರೈತರಿಗೆ ನೆರವಾಗಲು ತುಂಗಭದ್ರಾ ನೀರಾವರಿ ಮಂಡಳಿ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಮುಂದಿನ ದಿನಗಳಲ್ಲಿ ಜಲಾಶಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರತಿಯೊಬ್ಬರೂ ಈ ಕಾರ್ಯಕ್ಕೆ ಕೈ ಜೋಡಿಸಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ತುಂಗಭದ್ರಾ ಜಲಾಶಯ ಕೇವಲ ಕುಡಿವ ನೀರಿಗೆ ಮಾತ್ರ ಸೀಮಿತವಾಗಲಿದೆ. ಈಗಾಗಲೇ ಜಲಾಶಯದಲ್ಲಿ ಹೂಳು ತುಂಬಿದ ಕಾರಣ ನಮ್ಮ ರೈತರು ಕೇವಲ ಒಂದೇ ಬೆಳೆ ಬೆಳೆಯುವಂತಾಗಿದೆ. ಹಾಗಾಗಿ ಈಗಿನಿಂದಲೇ ನಾವು ಜಾಗೃತರಾಗಬೇಕು ಎಂದು ಹೇಳಿದರು.
ಹೂಳೆತ್ತುವ ಕಾರ್ಯಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಬೇಕು. ಜಲಾಶಯದ ಹೂಳೆತ್ತುವ ಬಗ್ಗೆ ಜನರಲ್ಲಿ ಆಸಕ್ತಿ ಹಾಗೂ ಜಾಗೃತಿ ಮೂಡಿದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂದರು.
ಜಿಪಂ ಮಾಜಿ ಅಧ್ಯಕ್ಷ ಟಿ. ಜರ್ನಾದನ ಹುಲಗಿ ಮಾತನಾಡಿ, 2017 ಪ್ರಾರಂಭವಾದ ಈ ತುಂಗಭದ್ರಾ ಜಲಾಶಯ ಹೂಳೆತ್ತುವ ಕಾರ್ಯವೂ ಕಳೆದ ವರ್ಷ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಹೂಳೆತ್ತುವ ಕಾರ್ಯ ಮುಂದುವರಿಸಲು ಆಗಲಿಲ್ಲ. ಆದರೆ, ಈ ವರ್ಷ ರೈತರಿಂದ ಹೂಳೆತ್ತಲು ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಅಣಿ ಮಾಡಲಾಗಿದೆ. ಎಂದು ಹೇಳಿದರು.
ಹೂಳೆತ್ತುವುದರಿಂದ ನಮ್ಮ ಭಾಗದ ರೈತರ ಸುದೀರ್ಘವಾಗಿ ವರ್ಷದಲ್ಲಿ ಎರಡು ಬಾರಿ ಬೆಳೆಯನ್ನು ಬೆಳೆಯಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿರುವ ಅನೇಕ ರೈತರು ಈ ಕಾರ್ಯಕ್ಕೆ ತಮ್ಮ ಕೈಲಾದ ಸಹಾಯ ಮಾಡತ್ತಿರುವುದು ನಿಜಕ್ಕೂ ಹರ್ಷ ತಂದಿದೆ ಎಂದರು.
ಅಭಿಯಂತರ ರಾಮಣ್ಣ, ತುಂಗಭದ್ರಾ ನೀರಾವರಿ ಮಂಡಳಿ ಇಒ ಮಧುಸೂದನ್, ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ, ರಾಜಶೇಖರ ಹಿಟ್ನಾಳ್ ಸೇರಿದಂತೆ ಹಲವು ಗಣ್ಯರು, ರೈತರು ಉಪಸ್ಥಿತರಿದ್ದರು.