ನದಿ ದಂಡೆಯ ರೈತರ ಸ್ಥಿತಿ ಅತಂತ್ರ
ಪೂರ್ತಿ ಬತ್ತಿ ಹೋದ ತುಂಗಾಭದ್ರಾ ನದಿ•ಕೆಲಸ ಅರಸಿ ಗುಳೆ ಹೊರಟ ರೈತರು
Team Udayavani, Aug 7, 2019, 11:36 AM IST
ಕುರುಗೋಡು: ಮಣ್ಣೂರು-ಸೂಗೂರು ಗ್ರಾಮ ಬಳಿಯ ತುಂಗಾಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿರುವುದು.
ಸುಧಾಕರ್ ಮಣ್ಣೂರು
ಕುರುಗೋಡು: ಜೀವನದಿ ತುಂಗಾಭದ್ರಾ ನದಿ ಸಂಪೂರ್ಣ ಬತ್ತಿರುವುದರಿಂದ ನದಿ ದಂಡೆಯ ರೈತರು ಮುಂಗಾರು ಬೆಳೆಗೆ ಅವಕಾಶ ಇಲ್ಲದಂತಾಗಿದೆ.
ಮುಂಗಾರು ಬೆಳೆಗೆ ಹಾಕಿದ ಸಸಿ ಮಡಿಗಳು ಜಾನುವಾರುಗಳ ಪಾಲಾಗಿವೆ. ಇನ್ನೊಂದು ಕಡೆ ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ನೀರಿಗಾಗಿ ಖಾಸಗಿ ಘಟಕಗಳಿಗೆ ಮೊರೆ ಹೋಗುವಂತಾಗಿದೆ. ಈಗಾಗಲೇ ನದಿಗೆ ನೀರು ಬರುತ್ತೆ ಎಂಬ ಆಶಾಭಾವ ಹೊಂದಿದ್ದ ರೈತರು ಸಸಿ ಮಡಿ ಹಾಕಿದ್ದರು. ಆದರೆ ನೀರು ಇಲ್ಲದೇ ಒಣಗಿ ಜಾನುವಾರು ಪಾಲಾಗಿವೆ.
ಸತತ 5 ವರ್ಷಗಳಿಂದ ರೈತರಿಗೆ ಸರಿಯಾಗಿ ಉತ್ತಮ ಬೆಳೆ ಸಿಗದೆ ತೀವ್ರ ನಷ್ಟದಲ್ಲಿ ಸಿಲುಕಿದ್ದಾರೆ. ಈ ಬಾರಿ ಕೂಡ ಸಾಕಷ್ಟು ಖರ್ಚು ಮಾಡಿ ಸಸಿ ಮಾಡಿದ್ದ ರೈತರಿಗೆ ಮತ್ತೆ ನಷ್ಟ ಭೀತಿ ಎದುರಾಗಿದೆ. 2008-09 ಮತ್ತು 2016-17ನೇ ವರ್ಷಗಳಲ್ಲಿ ತುಂಗಾಭದ್ರಾ ನದಿ ಪೂರ್ತಿ ಬತ್ತಿ ಹೋಗಿತ್ತು. ಮತ್ತೆ ಪ್ರಸಕ್ತ 2019-20ನೇ ಸಾಲಿನ ಸಹ ಅದೇ ಪರಿಸ್ಥಿತಿ ಮುಂದುವರಿದಿದೆ.
ತುಂಗಾಭದ್ರಾ ನದಿಯಲ್ಲಿ ನೀರಿಲ್ಲದ ದಿನಗಳು ಬಲು ವಿರಳ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮಗಳ ಜನರು ನದಿಯಲ್ಲಿ ಕಾಲ್ನಡಿಗೆ ಮತ್ತು ಬೈಕ್ ಹಾಗೂ ಟ್ರ್ಯಾಕ್ಟರ್ ಮೂಲಕ ಸಂಚಾರಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಕೇವಲ ದೋಣಿ ಮೂಲಕ ದಡ ಸೇರಬೇಕಿತ್ತು. ಕಳೆದ ಮೂರು ವರ್ಷಗಳಿಂದ ನದಿ ನೀರು ಇಲ್ಲದೇ ಬತ್ತಿ ಹೋಗಿದ್ದು, ಇದರಿಂದ ರೈತರ ಕೈಗೆ ಕೆಲಸವಿಲ್ಲದೆ ವ್ಯಾಪಾರ-ವಹಿವಾಟು ನಿಂತು ಹೋಗಿವೆ. ಕುಟುಂಬದ ನಿರ್ವಹಣೆಗಾಗಿ ರೈತರು ಚಿಂತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನದಿಯಲ್ಲಿ ನೀರಿಲ್ಲದೇ ರೈತ ಕುಟುಂಬಗಳು ಕೆಲಸ ಅರಿಸಿ ಬೇರೆಡೆಗೆ ಗುಳೆ ಹೋಗುವ ಸ್ಥಿತಿ ಉದ್ಬವಿಸಿದೆ.
ನದಿಯಲ್ಲಿ ನೀರು ಇಲ್ಲದ ಪರಿಣಾಮ ಜಲಚರಗಳು ಸತ್ತು ನದಿ ದಂಡೆಯಲ್ಲಿ ಬಿದ್ದಿದ್ದು, ಪ್ರಾಣಿ-ಪಕ್ಷಿಗಳು ಆಹಾರ ಆಗುತ್ತಿವೆ. ಸತ್ತ ಮೀನುಗಳ ದುರ್ವಾಸನೆಯಿಂದ ನದಿ ದಡಕ್ಕೆ ತೆರಳುವ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮೀನುಗಾರಿಕೆ ನಂಬಿ ಜೀವನ ಸಾಗಿಸುವ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಸದ್ಯ ನದಿಯಲ್ಲಿ ನೀರು ಇಲ್ಲದೆ ಸುಮಾರು 2 ರಿಂದ 3 ತಿಂಗಳಾದರೂ ಮೀನುಗಾರರ ಬಲೆ ಮತ್ತು ದೋಣಿಗಳು ನದಿ ದಡವನ್ನು ಕಾಯುತ್ತಿವೆ.
ಎರಡ್ಮೂರು ತಿಂಗಳು ನದಿಯಲ್ಲಿ ನೀರಿಲ್ಲದೇ ಕೆಲಸ ಇಲ್ಲದಂತಾಗಿದೆ. ಜೀವನ ಸಾಗಿಸೋದು ಕಷ್ಟಕರವಾಗಿದೆ. ಮೀನುಗಾರಿಕೆಯನ್ನೇ ನಂಬಿದವರು ಈಗ ಏನು ಮಾಡಬೇಕು ತೋಚುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ನಮ್ ಕೈ ಹಿಡಿಯಬೇಕು.
•ಹುಲೇಪ್ಪ, ಶರಣಪ್ಪ,
ಮೀನುಗಾರರು
ಕಳೆದ ವರ್ಷ ಈ ಸಮಯದಲ್ಲಿ ಭತ್ತ ನಾಟಿ ಮಾಡಿ ಉತ್ತಮ ಬೆಳೆ ಕಂಡುಕೊಂಡಿದ್ದೇವು. ಸದ್ಯದ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಅಲ್ಲಲ್ಲಿ ಕೆಲ ರೈತರು ಬೋರ್ವೆಲ್ ನೀರು ಬಳಸಿ ಬೆಳೆ ನಾಟಿ ಮಾಡಿದ್ದಾರೆ. ಇನ್ನೂ ಕೆಲವರು ಹಾಕಿದ್ದ ಸಸಿ ಮಡಿ ಜಾನುವಾರು ಪಾಲಾಗಿವೆ. ಹೀಗಾಗಿ ಹಲವಾರು ಕುಟುಂಬಗಳು ಜೀವನ ಸಾಗಿಸಲು ಗುಳೆ ಹೋಗುತ್ತಿದ್ದಾರೆ.
•ಈರಣ್ಣ, ಫಕ್ಕಿರಪ್ಪ,
ನದಿ ದಂಡೆಯ ರೈತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು