ಕೊಡಗಿನಲ್ಲಿ ಮಳೆ: ಭಾಗಮಂಡಲ ಜಲಾವೃತ
Team Udayavani, Aug 5, 2019, 1:28 PM IST
ಮಡಿಕೇರಿ: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಭಾಗಮಂಡಲದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಯೊಂದಿಗೆ ಗಾಳಿ ಕೂಡ ಇದ್ದು, ನಾಪೋಕ್ಲು – ಭಾಗಮಂಡಲ ರಸ್ತೆಯ ನೆಲಜಿ ಜಂಕ್ಷನ್ ಬಳಿ ರಸ್ತೆಗೆ ಮರ ಉರುಳಿ ಸಂಚಾರಕ್ಕೆ ತಡೆಯಾಗಿತ್ತು.
12 ಮನೆಗಳಿಗೆ ನುಗ್ಗಿದ ಹೊಳೆ ನೀರು
ವೀರಾಜಪೇಟೆಯಲ್ಲೂ ಭಾರೀ ಮಳೆಯಾಗಿದ್ದು, ನಾಂಗಾಲ ಗ್ರಾಮದಲ್ಲಿ ಭೂಕುಸಿತವಾಗಿ ಮನೆಗೆ ಹಾನಿಯಾಗಿದೆ. ಗೋಣಿಕೊಪ್ಪದ ವೆಂಕಟಪ್ಪ ಬಡಾವಣೆಯ ಪಕ್ಕದ ಕೀರೆ ಹೊಳೆ ಉಕ್ಕಿ ಹರಿದು 12ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ವ್ಯಾಪ್ತಿಯಲ್ಲಿಯೂ ಭಾರೀ ಮಳೆಯಾಗುತ್ತಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿ ಭತ್ತದ ಗದ್ದೆಗಳು ಪ್ರವಾಹಕ್ಕೆ ಸಿಲುಕಿವೆ. ಶ್ರೀಮಂಗಲ, ಹುದಿಕೇರಿ, ಪರಕಟಗೇರಿ ಸೇರಿದಂತೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿಯೂ 2 ದಿನಗಳಿಂದ ಭಾರೀ ಮಳೆಯಾಗುತ್ತಿದೆ.