ಚುರುಕಾಗದ ಮುಂಗಾರು ಕೃಷಿ ಚಟುವಟಿಕೆ
ಮುಂಗಾರು ವಾಡಿಕೆ ಮಳೆ ಕ್ಷೀಣ | ಮಳೆಯಾದ ಪ್ರದೇಶದಲ್ಲಿ ಬಿತ್ತನೆ ಕಾರ್ಯ | ಅಧಿಕಾರಿಗಳಿಂದ ಬೀಜ ದಾಸ್ತಾನು
Team Udayavani, May 30, 2019, 3:22 PM IST
ಮುಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತ.
ಮಾಗಡಿ: ಪ್ರತಿ ವರ್ಷದಂತೆ ಸುರಿಯಬೇಕಿದ್ದ ವಾಡಿಕೆ ಮಳೆ ಕ್ಷೀಣಿಸಿದ್ದರಿಂದ ತಾಲೂಕಿನಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕಾಗಿಲ್ಲ. ಆದರೆ ಮುಂಜಾಗ್ರತೆ ಕ್ರಮವಾಗಿ ಕೃಷಿ ಇಲಾಖೆ ಸಂಬಂಧಿಸಿದ ಬಿತ್ತನೆ ಬೀಜದ ದಾಸ್ತಾನು ಮತ್ತು ರಸಗೊಬ್ಬರಗಳ ವಿತರಣೆಗೆ ಸಿದ್ಧವಾಗಿದೆ. ಆದರೆ ಮಳೆಯಾಗಿರುವ ಕಡೆಯಲ್ಲೆಲ್ಲ, ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹಿಂದೆ ಹೆಚ್ಚು ಭೂಮಿಯಿತ್ತು. ಆಧುನಿಕ ಯಂತ್ರಗಳಿರಲಿಲ್ಲ, ಮನೆ ಮಂದಿಯೆಲ್ಲ. ಕೃಷಿ ಚಟುವಟಿಕೆಯಲ್ಲಿ ನಿರತರಾಗುತ್ತಿದ್ದರು. ಈಗ ಭೂಮಿ ಕಡಿಮೆ ಎಲ್ಲವೂ ಯಂತ್ರಮಯವಾಗಿದೆ. ಆದರೂ ರೈತ ಮಕ್ಕಳು ಕೃಷಿಯತ್ತ ಆಸಕ್ತಿ ತೋರುತ್ತಿಲ್ಲ. ರೈತರು ಬೆಳೆದ ಬೆಳೆಗೆ ಸರ್ಕಾರ ಬೆಂಬಲ ಕೊಡುತ್ತಿಲ್ಲ. ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಇದರಿಂದಾಗಿ ರೈತರ ಬದುಕು ಕಷ್ಟಕರವಾಗಿದೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮಗಳು ಕೃಷಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ರೈತ ಮಕ್ಕಳಿಗೆ ಹೆಣ್ಣು ಕೊಡುವವರ ಸಂಖ್ಯೆ ಗಣನೀಯ ವಾಗಿ ಕಡಿಮೆಯಾಗುತ್ತಿದೆ ಎಂದು ಪ್ರಗತಿಪರ ರೈತ ರಂಗಸ್ವಾಮಯ್ಯ ಬೇಸರ ವ್ಯಕ್ತಪಡಿಸಿದರು.
ಬಿತ್ತನೆ ಬೀಜ ದಾಸ್ತಾನು: ಮುಂಗಾರು ಮಳೆ ಆರಂಭ ವಾಗತ್ತಿದ್ದಂತೆ ರೈತರ ಕೃಷಿ ಚಟುವಟಿಕೆ ಚುರುಕು ಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ತೊಡ ಕುಂಟಾಗಬಾರದು ಎಂಬ ಕಾರಣಕ್ಕೆ ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಮುಂಗಾರು ಬಿತ್ತನೆಗೆ ತೊಗರಿ, ಅವರೆ, ಅಲಸಂಧೆ, ನೆಲಗಡಲೆ ಸೇರಿದಂತೆ ಇತರೆ ದ್ವಿದಳ ಧಾನ್ಯಗಳ ಜೊತೆಗೆ ಲಘು ಪೋಷಕಾಂಶಗಳನ್ನು ಸಂಗ್ರಹಿಸಿ ಇಡ ಲಾಗಿದೆ. ಹೋಬಳಿ ವ್ಯಾಪ್ತಿಯ ಆರ್ಎಸ್ಕೆಯಲ್ಲಿ ಯೂ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಬಿತ್ತನೆಗೆ ಅನುಗುಣವಾಗಿ ಬಿತ್ತನೆ ಬೀಜವನ್ನು ಸಹಾಯ ಧನದಲ್ಲಿ ಖರೀದಿಸಿ, ಬಿತ್ತನೆಗೆ ಮುಂದಾಗಿದ್ದಾರೆ.
ಮಾಗಡಿ ತಾಲೂಕಿನ ಕಸಬಾ ತಗ್ಗಿಕುಪ್ಪೆ , ಮಾಡ ಬಾಳ್, ತಿಪ್ಪಸಂದ್ರ, ಕುದೂರು, ಸೋಲೂರು ಹೋಬ ಳಿ ಕೇಂದ್ರದಲ್ಲಿ ಯೂ ಸಹ ಬಿತ್ತನೆ ಬೀಜ ಖರೀದಿಗೆ ರೈತರಿಗೆ ಅಗತ್ಯ ಅನುಕೂಲ ಮಾಡಿಕೊಡಲಾಗಿದೆ. ಆದರೆ ಮಳೆ ಪ್ರಮಾಣ ಕಡಿಮೆ ಬಿದ್ದಿರುವುದರಿಂದ ರೈತರು ಬಿತ್ತನೆ ಬೀಜ ಖರೀದಿಗೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಅಧಿಕಾರಿಗಳಿಂದ ಕೇಳುತ್ತಿವೆ.
ವಾಡಿಕೆ ಗಿಂತ ಕಡಿಮೆ ಮಳೆ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಾಡಿಕೆಯಂತೆ ಸರಾಸರಿ 163.1 ಮಿಮೀ ಪ್ರಮಾಣದ ಮಳೆಯಾಗಬೇಕಿತ್ತು. ಆದರೆ 124.8 ಮಿಮೀ. ಮಳೆಯಾಗಿದೆ. ಕಳೆದ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಅಧಿಕವಾಗಿ ಸುರಿದಿತ್ತು. ಈ ಬಾರಿ ಕಡಿಮೆ ಮಳೆಯಾಗಿರುವುದರಿಂದ ಸಹಜವಾಗಿ ರೈತರು ಕೃಷಿ ಚಟುವಟಿಕೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ.
ಬಿತ್ತನೆ ಗುರಿ: 2019-20ನೇ ಸಾಲಿಗೆ 5 ಹೋಬಳಿ ಸೇರಿದಂತೆ ಒಟ್ಟು 4,524 ಹೆಕ್ಟೇರ್ನಷ್ಟು ಮುಂಗಾರು ತೊಗರಿ, ಅವರೆ, ಅಲಸಂಧೆ, ನೆಲಗಡಲೆ ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 176 ಹೆಕ್ಟೇರ್ ಮಾತ್ರ ಇಲ್ಲಿವರೆಗೆ ಬಿತ್ತನೆಯಾಗಿದೆ. ಮುಂಗಾರು ಮಳೆ ಕೊರತೆಯೇ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಆಧುನಿಕ ಯಂತ್ರಗಳು: ತಂತ್ರಜ್ಞಾನ ಮುಂದುವರೆ ದಂತೆಲ್ಲ. ಆಧುನಿಕ ಕೃಷಿ ಯಂತ್ರಗಳ ಭರಾಟೆ ಜೋರಾ ಗಿದೆ. ಬಹುತೇಕ ಪೂರ್ವಿಕರು ದನಗಳ ಸಹಾಯದಿಂದ ಕೃಷಿ ಚುಟುವಟಿಕೆ ಆರಂಭಿಸುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆಲ್ಲ ಆಧುನಿಕ ಯಂತ್ರಗಳ ಖರೀದಿ ಯಲ್ಲಿ ರೈತರು ಹೆಚ್ಚು ಆಸಕ್ತಿ ತೋರಿದ್ದಾರೆ. ಉಳಿಮೆ ಯಿಂದ ಹಿಡಿದು, ಕಳೆ ತೆಗೆಯುವುದು, ಔಷಧ ಸಿಂಪಡಣೆ, ಕಟಾವು, ಹೊಕ್ಕಾಣೆ, ನೀರಾವರಿಯಲ್ಲಿ ಸ್ಪ್ರಿಂಕ್ಲರ್ ಬಳಕೆ, ಹೀಗೆ ರೈತರು ಆಧುನಿಕ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಇನ್ನೂ ಸಹ ಪೂರ್ವಿಕರ ಕೃಷಿ ಚಟುವಟಿಕೆ ಪದ್ಧತಿ ಯನ್ನು ಈಗಲೂ ಕೆಲ ರೈತರು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಅಧುನಿಕ ತಂತ್ರಜ್ಞಾನ ಕೃಷಿ ಪದ್ಧತಿ: ಆಧುನಿಕ ತಂತ್ರ ಜ್ಞಾನದ ಕೃಷಿ ಪದ್ಧತಿಯಿಂದ ಸಮಯ ಉಳಿತಾ ಯದ ಜೊತೆಗೆ ಕೂಲಿ ಆಳುಗಳ ಉಳಿತಾಯವೂ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಣದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಆಧುನಿಕ ಯಂತ್ರಗಳ ಬಳಕೆಯೇ ಕೃಷಿ ಚಟುವಟಿಕೆಯಲ್ಲಿ ಪ್ರಧಾನವಾಗಿದೆ. ಅಧುನಿಕ ಯಂತ್ರಗಳು ಈಗ ರೈತರ ಮಿತ್ರಗಳಾಗಿವೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕೃಷಿ ಇಲಾಖೆಯಲ್ಲಿ ಈಗಾಗಲೇ ರಾಗಿ, ತೊಗರಿ, ಅಲಸಂಧೆ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರಾಗಿ-151.80 ಕ್ವಿಂಟಾಲ್, ಬಿಆರ್ಜಿ-1 ತಳಿಯ ತೊಗರಿ -43 ಕ್ವಿಂಟಾಲ್, ಬಿಆರ್ಜಿ-5 ತಳಿಯ ತೊಗರಿ 1.20 ಕ್ವಿಂಟಾಲ್ ಮತ್ತು ಅಲಸಂಧೆ-15.60 ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಅಷ್ಟಾಗಿ ಭತ್ತ ಬಿತ್ತನೆ ಮಾಡದ ಕಾರಣ ದಾಸ್ತಾನು ಮಾಡಲಾಗಿಲ್ಲ. ಜೂನ್ 10 ರ ನಂತರ ಭತ್ತ ದಾಸ್ತಾನು ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಮಾಹಿತಿ ನೀಡಿದ್ದಾರೆ.