ಜಲಪ್ರವಾಹ ಜಲಭಾಗ್ಯವಾಗೋದು ಯಾವಾಗ?
Team Udayavani, Aug 12, 2019, 3:29 PM IST
ಮಂಡ್ಯ ಮಂಜುನಾಥ್
ಮಂಡ್ಯ: ವಾರದ ಹಿಂದಷ್ಟೇ ನೀರಿಲ್ಲದೆ ಜಿಲ್ಲೆಯ ಎಲ್ಲೆಡೆ ಹಾಹಾಕಾರ ಎದುರಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಸಿಗದಂತಹ ಕಠೊರ ಸನ್ನಿವೇಶ ಸೃಷ್ಟಿಯಾಗಿತ್ತು. ವಾರ ಕಳೆಯುವುದರೊಳಗೆ ಪ್ರವಾಹದಂತೆ ನೀರು ಹರಿದುಬಂದಿದೆ. ಕೆಆರ್ಎಸ್ ಅಣೆಕಟ್ಟು ಭರ್ತಿಯಾಗಿದೆ. 1 ಲಕ್ಷ ಕ್ಯೂಸೆಕ್ಗೂ ನೀರನ್ನು ಜಲಾಶಯದಿಂದ ಹೊರಬಿಡುತ್ತಿದ್ದು, ನೀರು ಸಂಗ್ರಹಣೆಗೆ ನಾವು ಮಾಡಿಕೊಂಡಿರುವ ಪರ್ಯಾಯ ವ್ಯವಸ್ಥೆಗಳೇನು ಎಂಬ ಪ್ರಶ್ನೆ ಎದುರಾದಾಗ ಶೂನ್ಯ ಆವರಿಸುತ್ತಿದೆ.
ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಗಿ 80 ವರ್ಷಗಳಾಗಿವೆ. ಇನ್ನೂ ಮಂಡ್ಯ ಜಿಲ್ಲೆ ಸಮಗ್ರ ನೀರಾವರಿಗೆ ಒಳಪಟ್ಟಿಲ್ಲ. ಇಚ್ಛಾಶಕ್ತಿಯ ಕೊರತೆಯೂ ಇದಕ್ಕೆ ಕಾರಣ. ಕಳೆದ ವರ್ಷ ಕೇರಳ, ಕೊಡಗಿನಲ್ಲಿ ಕುಂಭದ್ರೋಣ ಮಳೆಯಾಗಿ ಅವಧಿಗೆ ಮುನ್ನವೇ ಕೆಆರ್ಎಸ್ ಭರ್ತಿಯಾಯಿತು. ನೂರಾರು ಟಿಎಂಸಿ ನೀರು ತಮಿಳುನಾಡಿಗೆ ವ್ಯರ್ಥವಾಗಿ ಹರಿಯಿತು. ಆ ಸಮಯದಲ್ಲಿ ನೀರನ್ನು ಸಂಗ್ರಹಣೆ ಮಾಡುವ ಮಾರ್ಗಗಳ ಬಗ್ಗೆ ಯಾರೂ ಆಲೋಚನೆಗಳನ್ನೇ ನಡೆಸಲಿಲ್ಲ.
ಜಿಲ್ಲೆಯ ದೌರ್ಭಾಗ್ಯ: ನೀರಿಲ್ಲದ ಸಂದರ್ಭದಲ್ಲಿ ಜನರಿಗೆ ಎದುರಾಗುವ ಸಂಕಷ್ಟ ಪರಿಸ್ಥಿತಿಯನ್ನು ಕಂಡು ಮರುಗುವುದಕ್ಕೆ ಹಾಗೂ ಪ್ರವಾಹ ಬಂದ ಸಮಯದಲ್ಲಿ ಹರಿದುಹೋಗುವ ನೀರನ್ನು ಕಂಡು ಮೌನವಾಗಿ ಉಳಿಯುವುದಕ್ಕಷ್ಟೇ ರಾಜಕಾರಣಿಗಳು ಮತ್ತು ಆಳುವ ಸರ್ಕಾರಗಳು ಸೀಮಿತವಾಗಿವೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ಹರಿದುಬರುವ ಹೆಚ್ಚುವರಿ ನೀರನ್ನು ಶೇಖರಿಸಿಡುವ ಸಂಕಷ್ಟ ಕಾಲದಲ್ಲಿ ಬಳಕೆಗೆ ಕೊಡುವ ಸಣ್ಣ ಪ್ರಯತ್ನಗಳೂ ನಡೆಯದಿರುವುದು ಜಿಲ್ಲೆಯ ದೌರ್ಭಾಗ್ಯ.
ದೂರದೃಷ್ಟಿ ಕೊರತೆ: ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು, ಹೂಳೆತ್ತುವುದು, ಕೆರೆಗಳನ್ನು ತುಂಬಿಸುವ ವಿಚಾರ ಬಂದಾಗಲೆಲ್ಲಾ ಕಾವೇರಿ ನೀರು ನಿರ್ವಹಣಾ ಮಂಡಳಿಯತ್ತ ಬೊಟ್ಟು ಮಾಡಿ ಜನರನ್ನು ದಿಕ್ಕುತಪ್ಪಿಸುವುದನ್ನು ರಾಜಕಾರಣಿಗಳು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಪ್ರವಾಹ ರೂಪದಲ್ಲಿ ಸಿಗುವ ನೀರನ್ನು ಕೃಷಿ ಚಟುವಟಿಕೆಗೆ ಫಲಪ್ರದವಾಗಿ ಬಳಸುವ ದೂರದೃಷ್ಟಿಯ ಎಲ್ಲರಲ್ಲೂ ಕೊರತೆ ಎದ್ದು ಕಾಣುತ್ತದೆ.
ಪ್ರವಾಹಕ್ಕೆ ಪ್ರತಿರೋಧವಾಗಿ ನಿಂತು ನೀರು ಸಂಗ್ರಹಿಸುವ ಮಾರ್ಗಗಳನ್ನು ಹುಡುಕುವ ಪ್ರಯತ್ನಗಳೇ ನಮ್ಮಲ್ಲಿ ನಡೆಯುತ್ತಿಲ್ಲ. ಕೆಆರ್ಎಸ್ ಕಾವಲು ಕಾಯುವ ಕಾವಲುಗಾರರ ಕೆಲಸವನ್ನು ರಾಜ್ಯಸರ್ಕಾರ ಮತ್ತು ಸ್ಥಳೀಯ ರಾಜಕಾರಣಿಗಳು ಹಲವು ದಶಕಗಳಿಂದ ಮಾಡುತ್ತಾ ಬಂದಿದ್ದಾರೆ.
ನಮ್ಮ ಪಾಲಿನ ನೀರನ್ನು ಉಳಿಸಿಕೊಂಡು ರೈತರ ಕೃಷಿ ಚಟುವಟಿಕೆಗೆ ನೀಡುವ, ಪ್ರವಾಹ ಸೃಷ್ಟಿಯಾದ ಸಂದರ್ಭದಲ್ಲಿ ಆ ನೀರನ್ನು ವಿವಿಧ ಮಾರ್ಗಗಳಲ್ಲಿ ಹಿಡಿದಿಟ್ಟು ಬಳಸುವ ವೈಜ್ಞಾನಿಕ ದೃಷ್ಟಿಕೋನ ಅಗತ್ಯ. ಇಲ್ಲದಿದ್ದರೆ, ಪ್ರವಾಹವಾದಾಗ ನೀರು ಹೊರರಾಜ್ಯಗಳ ಪಾಲಗುತ್ತಿದೆ.
ಜಿಲ್ಲೆಯಲ್ಲಿನ ಕೆರೆಗಳ ಪುನಶ್ಚೇತನ ಅಗತ್ಯ
ಜಿಲ್ಲೆಯೊಳಗೆ ಪ್ರತಿ ನಾಲ್ಕೈದು ಕಿ.ಮೀ.ಗೆ ಒಂದರಂತೆ ಕೆರೆ ಸಿಗುತ್ತದೆ. ತಮಿಳುನಾಡಿಗೆ ವಾರ್ಷಿಕವಾಗಿ ಹರಿಸಬೇಕಾದ 274 ಟಿಎಂಸಿ ಅಡಿ ನೀರನ್ನು ಹರಿಸಿದ ಬಳಿಕವೂ ಉಳಿಯುವ ನೀರನ್ನು ಸಮರ್ಥವಾಗಿ ಸಂಗ್ರಹಿಸಿಡುತ್ತಿಲ್ಲ. ಜಿಲ್ಲೆಯಲ್ಲಿ ಹೆಸರಿಗಷ್ಟೇ 350ಕ್ಕೂ ಹೆಚ್ಚು ಕೆರೆಗಳಿವೆ. ಇದರಲ್ಲಿ ಬಹುತೇಕ ಕೆರೆಗಳು ಒತ್ತುವರಿ ಆಗಿವೆ. ಕೆಲವು ಕೆರೆಗಳು ಭರ್ತಿ ಭಾಗ್ಯ ಕಂಡು ದಶಕಗಳೇ ಕಳೆದಿವೆ. ಹಲವಾರು ಕೆರೆಗಳಲ್ಲಿ ಜೊಂಡು, ಮುಳ್ಳಿನ ಗಿಡಗಳು ಬೆಳೆದುಕೊಂಡಿವೆ. ಅನೇಕ ಕೆರೆಗಳು ನೀರಿಲ್ಲದೆ ಬರಡಾಗಿ ನಿಂತಿವೆ. ಈ ಕೆರೆಗಳನ್ನು ಪುನಶ್ಚೇತನಗೊಳಿಸಿ ಪೈಪ್ಲೈನ್ ಮೂಲಕ ನೀರು ತುಂಬಿಸಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಪಾತಾಳಕ್ಕಿಳಿದಿರುವ ಅಂತರ್ಜಲ ಪುನಶ್ಚೇತನವಾಗುತ್ತದೆ. ಮಳೆಗಾಲಕ್ಕೂ ಮುನ್ನವೇ ನೀರು ಹರಿಯುವ ಪ್ರದೇಶಗಳನ್ನು ಗುರುತಿಸಿ ಅಲ್ಲಲ್ಲೇ ನೀರು ಸಂಗ್ರಹಣೆ ಮಾಡುವ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಒಂದು ಕೆರೆ ಭರ್ತಿಯಾದ ಕೂಡಲೇ ಮತ್ತೂಂದು ಕೆರೆಗೆ ನೀರು ಹರಿಯುವಂತೆ ವ್ಯವಸ್ಥೆ ಮಾಡುವುದರಿಂದ ಪ್ರವಾಹದ ವೇಳೆ ಸಂಭವಿಸಬಹುದಾದ ಬೆಳೆ ಹಾನಿಯನ್ನು ತಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ