ಅನುಮಾನಕ್ಕೆಡೆಯಾದ ಭೂ ವಿಜ್ಞಾನಿ ಗಣಿಗಾರಿಕೆ ವರದಿ
2018ರ ವರದಿ ಕಡೆಗಣಿಸಿ 2009ರ ವರದಿಗೆ ಮನ್ನಣೆ ನೀಡಿದ ಅಧಿಕಾರಿ • ಅಧಿಕಾರಿ ನಡೆ ಬಗ್ಗೆ ಹಲವು ಅನುಮಾನ
Team Udayavani, Apr 24, 2019, 12:22 PM IST
ಮಂಡ್ಯ: ಕಲ್ಲು ಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಅಪಾಯವಿರುವುದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಲ್ಲಿಸಿರುವ ವರದಿಯನ್ನು ಕಡೆಗಣಿಸಿ ಹತ್ತು ವರ್ಷಗಳ ಹಿಂದಿನ ವರದಿಯನ್ನೇ ಮುಂದಿಟ್ಟುಕೊಂಡು ಕೆಆರ್ಎಸ್ಗೆ ಗಣಿಗಾರಿಕೆಯಿಂದ ಅಪಾಯವಿಲ್ಲ ಎಂದು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ್ ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಕೆಆರ್ಎಸ್ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಸುತ್ತಲಿನ 15 ರಿಂದ 20 ಕಿ.ಮೀ. ವ್ಯಾಪ್ತಿಯೊಳಗೆ ಗಣಿಗಾರಿಕೆ ನಿಷೇಧಿಸುವಂತೆ ಕೃಷ್ಣರಾಜಸಾಗರ ಸಮೀಪವಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 25 ಸೆಪ್ಟೆಂಬರ್ 2018ರಂದು ವರದಿ ನೀಡಿತ್ತು. ಈ ವರದಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಹಿರಿಯ ಭೂ ವಿಜ್ಞಾನಿ ಕೆ.ಎಂ.ನಾಗಭೂಷಣ್, 24 ಏಪ್ರಿಲ್ 2009ರಂದು ಕೋಲಾರದ ಕೆಜಿಎಫ್ನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್ ನೀಡಿರುವ ವರದಿಯನ್ವಯ ಕೆಆರ್ಎಸ್ ಅಣೆಕಟ್ಟೆಗೆ ಬೇಬಿ ಬೆಟ್ಟದ ಕಾವಲ್ನ ಸರ್ವೆ ನಂ.1ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ತೊಂದರೆ ಇಲ್ಲ ಎಂದು ಹೇಳಿರುವುದನ್ನು ಉಲ್ಲೇಖೀಸಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲು ಗ್ರಾಮದ ಸರ್ವೆ ನಂ.1ರ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಲಾಗಿದ್ದ ಮೆ. ಎಸ್ಟಿಜಿ ಸ್ಟೋನ್ ಕ್ರಷರ್ ಮತ್ತಿತರರು ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕಗಳನ್ನು ಉಪಯೋಗಿಸುವುದರಿಂದ ಉಂಟಾಗುವ ತರಂಗಗಳಿಂದ ಕೆಆರ್ಎಸ್ ಹಾಗೂ ಆಸುಪಾಸಿನ ಗ್ರಾಮಗಳಿಗೆ ಹಾನಿಯಾಗುವ ಬಗ್ಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಅಧ್ಯಯನ ನಡೆಸಿದ್ದು, ಕಲ್ಲು ಗಣಿಗಾರಿಕೆ ಪ್ರದೇಶದಿಂದ ಕೆಆರ್ಎಸ್ ಜಲಾಶಯ 8 ಕಿ.ಮೀ. ದೂರದಲ್ಲಿದ್ದು ಸಾಮಾನ್ಯ ಪ್ರಮಾಣದ ಸ್ಫೋಟಕಗಳನ್ನು ಉಪಯೋಗಿಸಿ ಗಣಿಗಾರಿಕೆ ನಡೆಸುವುದರಿಂದ ಕೆಆರ್ಎಸ್ ಅಣೆಕಟ್ಟೆಗೆ ತೊಂದರೆ ಸಂಭವಿಸುವುದಿಲ್ಲ ಎಂದು ತಿಳಿಸಿರುವುದನ್ನು ಉಲ್ಲೇಖೀಸಲಾಗಿದೆ.
ಇದೇ ವೇಳೆ ಹತ್ತು ವರ್ಷಗಳ ಬಳಿಕ ಬೇಬಿ ಬೆಟ್ಟದಲ್ಲಿ ನಡೆದಿರುವ ಕಲ್ಲು ಗಣಿಗಾರಿಕೆ ಪ್ರಮಾಣ, ಈಗಿನ ವಸ್ತುಸ್ಥಿತಿ ಹಾಗೂ ವೈಜ್ಞಾನಿಕ ಅಧ್ಯಯನವನ್ನೇ ನಡೆಸದೆ ಗಣಿ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಯೋಗಕ್ಕೆ ವರದಿ ನೀಡಿದ್ದಾರೆ. ಇದರ ಜೊತೆಗೆ ಕೃಷ್ಣರಾಜಸಾಗರದ ಬಳಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವಿದ್ದು ಅಣೆಕಟ್ಟೆ ಸುತ್ತಲಿನ ಯಾವುದೇ ವ್ಯಾಪ್ತಿಯಲ್ಲಿ ಸಂಭವಿಸುವ ಭೂಕಂಪನ ಹಾಗೂ ಇತರೆ ಗಣಿಗಾರಿಕೆ ಕಂಪನಗಳು ದಾಖಲು ಮಾಡಿಕೊಳ್ಳುತ್ತದೆ ಎಂದಷ್ಟೇ ಹೇಳಿ 25 ಸೆಪ್ಟೆಂಬರ್ 2018ರಂದು ಬೇಬಿ ಬೆಟ್ಟದಲ್ಲಿ ಸಂಭವಿಸಿದ ಎರಡು ಸ್ಫೋಟದಿಂದ ಉಂಟಾದ ಶಬ್ಧ, ಅದರ ಕಂಪನದ ಪ್ರಮಾಣ, ಉಪಗ್ರಹ ಆಧಾರಿತ ಚಿತ್ರ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯನ್ನು ಸಂಪೂರ್ಣ ಮರೆಮಾಚಿರುವುದು ಕಂಡು ಬಂದಿದೆ.
1994ರ ನಿಯಮ 6(2)ರ ಉಲ್ಲೇಖ: ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 6(2)ರ ಪ್ರಕಾರ ಅಣೆಕಟ್ಟೆ, ರಸ್ತೆ, ಶಾಲೆ ಮತ್ತು ಇತರೆ ರಚನೆಗಳಿಂದ 200 ಮೀ. ಅಂತರವಿದ್ದಲ್ಲಿ ಗಣಿಗಾರಿಕೆ ನಡೆಸಲು ಅವಕಾಶವಿದೆ. ಈ ನಿಯಮದನ್ವಯ ಈ ಹಿಂದೆ ಚಿಕ್ಕಯಾರಹಳ್ಳಿ, ಹೊಸ ಕನ್ನಂಬಾಡಿ, ಬಿಂಡಹಳ್ಳಿ ಮತ್ತು ಬನ್ನಂಗಾಡಿ ಗ್ರಾಮಗಳ ಗೋಮಾಳ ಜಮೀನುಗಳಲ್ಲಿ ಸಂಬಂಧಿಸಿದ ತಹಸೀಲ್ದಾರ್ರವರ ನಿರಾಪೇಕ್ಷಣಾ ಪತ್ರದ ಮೇರೆಗೆ ಕಲ್ಲು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿತ್ತು.
17 ಜನವರಿ 2011ರಂದು ಮೈಸೂರಿನ ಕಾವೇರಿ ನೀರಾವರಿ ಯೋಜನೆ ಅಧ್ಯಕ್ಷರು ನಡೆಸಿದ ಸಭೆಯ ನಿರ್ಣಯದಂತೆ ಕೆಆರ್ಎಸ್ ಅಣೆಕಟ್ಟೆಯ ನಾರ್ಥ್ಬ್ಯಾಂಕ್ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಈ ಹಿಂದೆ ಮಂಜೂರು ಮಾಡಿದ್ದ 8 ಗಣಿ ಗುತ್ತಿಗೆಗಳನ್ನು ರದ್ದುಪಡಿಸಿ ಗಣಿಗಾರಿಕೆ ಸ್ಥಗಿತಗೊಳಿಸಿದೆ. ಕೆಆರ್ಎಸ್ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶಗಳನ್ನು ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಗಣಿಗಾರಿಕೆ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ.
30-35 ವರ್ಷದಿಂದ ಗಣಿಗಾರಿಕೆ: ಬೇಬಿಬೆಟ್ಟದ ಕಾವಲು ಗ್ರಾಮದ ಸರ್ವೆ ನಂ.1 ಪ್ರದೇಶ ಕಲ್ಲುಗಳಿಂದ ಆವೃತವಾಗಿದೆ. ಇಲ್ಲಿ 30-35 ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೆಆರ್ಎಸ್ ಅಣೆಕಟ್ಟು, ಶ್ರೀರಂಗಪಟ್ಟಣ ಕೋಟೆ, ಪುರಾಣ ಪ್ರಸಿದ್ಧ ದೇವಾಲಯಗಳು, ಹಳೆಯ ಕಟ್ಟಡಗಳು, ಐತಿಹಾಸಿಕ ಸ್ಮಾರಕಗಳು ಬೇಬಿ ಬೆಟ್ಟ ಹಾಗೂ ಸುತ್ತಲಿನ ಪ್ರದೇಶಗಳಿಂದ ತೆಗೆದ ಕಲ್ಲುಗಳಿಂದ ನಿರ್ಮಾಣಗೊಂಡಿವೆ.
ಬೇಬಿ ಬೆಟ್ಟದ ಸರ್ವೆ ನಂ.1 ಪ್ರದೇಶ, ಚಿಕ್ಕಮರಳಿ, ಹಿರೇಮರಳಿ, ಬನ್ನಂಗಾಡಿ, ಕನ್ನಂಬಾಡಿ, ಬಸ್ತಿಹಳ್ಳಿ, ಬಿಂಡಹಳ್ಳಿ, ಕೆ.ಮಂಚನಹಳ್ಳಿ, ಶಂಭೂನಹಳ್ಳಿ, ಗುಮ್ಮನಹಳ್ಳಿ, ಹಾರೋಹಳ್ಳಿ, ಹಳೇಬೀಡು, ಕಂಚನಹಳ್ಳಿ, ವೀರಶೆಟ್ಟಿಪುರ, ಸಂಗಾಪುರ, ಹೊನಗಾನಹಳ್ಳಿ, ಚಿಕ್ಕಬ್ಯಾಡರಹಳ್ಳಿ, ಶಿಂಗಾಪುರ, ಮೊಳೆಸಂದ್ರ, ವಡ್ಡರಹಳ್ಳಿ, ಡಿಂಕಾ, ಬಿಜ್ಜನಹಳ್ಳಿ, ಬಳಘಟ್ಟ, ನುಗ್ಗೇಹಳ್ಳಿ, ಬೋಳೇನಹಳ್ಳಿ, ವದೇ ಸಮುದ್ರ, ಕೆ.ಮಲ್ಲೇನಹಳ್ಳಿ, ಗುಜಗೋನಹಳ್ಳಿ, ನರಹಳ್ಳಿ, ಕಾಮನಾಯಕನಹಳ್ಳಿ, ಚಿಕ್ಕಯಾರಹಳ್ಳಿ, ಅಮಾನಹಳ್ಳಿ, ವಳಲೆಕಟ್ಟೆಕೊಪ್ಪಲು, ಬೇಬಿ ಮತ್ತು ಬೇಬಿ ಬೆಟ್ಟದ ಕಾವಲು ಗ್ರಾಮಗಳ ಇಸವಿಯಲ್ಲಿ ಇಟ್ಟು 256 ಕಲ್ಲು ಗಣಿ ಗುತ್ತಿಗೆಗಳನ್ನು ಕಂದಾಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು 1985ರಿಂದ ನಿಯಮಾನುಸಾರ ಗಣಿಗಾರಿಕೆ ನಡೆಸಲಾಗುತ್ತಿದೆ.
ಬನ್ನಂಗಾಡಿ ಪ್ರದೇಶವು ಕೃಷ್ಣರಾಜಸಾಗರ ಜಲಾಶಯ ಅಣೆಕಟ್ಟೆಯಿಂದ ಸುಮಾರು ಏಳೆಂಟು ಕಿ.ಮೀ. ದೂರವಿರುತ್ತದೆ. ಈ ಪ್ರದೇಶವು ಗ್ರಾನಿಟಿಕ್ ನೈಸ್ ಶಿಲೆಯಿಂದ ಕೂಡಿದೆ. ಉತ್ತರ-ದಕ್ಷಿಣವಾಗಿ ಹಬ್ಬಿದೆ. ಕೆಆರ್ಎಸ್ ಅಣೆಕಟ್ಟು ನಿರ್ಮಿಸಲು ಬಂದಂತಹ ಕಾರ್ಮಿಕರು ಪ್ರಸ್ತುತ ಕಾವೇರಿ ಪುರ, ರಾಗಿಮುದ್ದನಹಳ್ಳಿ ಹೊಸ ಬಡಾವಣೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ವೃತ್ತಿಯಿಂದ ಕಲ್ಲು ಕುಟಿಕರಾಗಿದ್ದು, ಈ ಪ್ರದೇಶಗಳಲ್ಲಿರುವ ಕಲ್ಲಿನ ನಿಕ್ಷೇಪಗಳ ಮೇಲೆ ಅವಲಂಬಿತರಾಗಿ ರುತ್ತಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ