ಜಿಲ್ಲೆಯಲ್ಲಿ ಭದ್ರ ನೆಲೆಯೂರಲು ಕೇಸರಿ ಪಡೆ ಕಸರತ್ತು
ಪಕ್ಷ ಸಂಘಟನೆಗೆ ಒತ್ತು ನೀಡಲು ಬಿಜೆಪಿ ಮುಖಂಡರ ಸಭೆ; ಕೈ-ದಳ ಸೋಲಿಸಲು ಅಗತ್ಯ ಸಿದ್ಧತೆ
Team Udayavani, Aug 25, 2021, 6:10 PM IST
ಮಂಡ್ಯ: ನೆಲೆಯೇ ಇಲ್ಲದ ಜಿಲ್ಲೆಯಲ್ಲಿ ನೆಲೆ ಕಲ್ಪಿಸಲು ಕಮಲ ಪಡೆ ಮುಂದಾಗಿದ್ದು, ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ವಿಸ್ತರಿಸಲು ಸಕ್ಕರೆ ನಗರ ಮಂಡ್ಯದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ನಡೆಸುತ್ತಿದೆ. ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಾಂಪ್ರದಾಯಿಕ ಎದುರಾಳಿ. ಈ ಎರಡೂ ಪಕ್ಷಗಳಿಗೆ ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಿದ್ಧತೆ ಆರಂಭಿಸಿದೆ. ಜತೆಗೆ ಮುಂದಿನ ವಿಧಾನಸಭೆ ಚುನಾವಣೆಗೂ ದಿಕ್ಸೂಚಿಯಾಗಿಟ್ಟುಕೊಂಡು ಸಜ್ಜುಗೊಳಿಸಲು ಮುಂದಾಗಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ: ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿರುವ ಬಿಜೆಪಿ ಜಿಲ್ಲೆಯಾದ್ಯಂತ ವಿಸ್ತರಿಸುತ್ತಿದೆ. ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಬೆಂಬಲಿತ ಸದಸ್ಯರನ್ನು ಹೊಂದಿದೆ. ಅಲ್ಲದೆ, ಕೆಲವು ಕಡೆ ಸ್ಥಳೀಯ ಸಂಸ್ಥೆಗಳಲ್ಲೂ ಈಗಾಗಲೇ ಆಡಳಿತ ಚುಕ್ಕಾಣಿ ಹಿಡಿದಿದೆ.
ಕೈ-ದಳಕ್ಕೆ ಪೈಪೋಟಿಗೆ ಸಿದ್ಧತೆ: ಕಳೆದ 2020ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಸದಸ್ಯರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದೇ ಹುಮ್ಮಸ್ಸಿನಲ್ಲಿರುವ ಬಿಜೆಪಿ, ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ತೀವ್ರ ಸ್ಪರ್ಧೆಯೊಡ್ಡಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಬೇಡ : ಗುಂಡೂರಾವ್ ಕಿಡಿ
ನಿರಂತರ ಮೋರ್ಚಾಗಳ ಸಭೆ: ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಕಮಲ, ಜಿಲ್ಲೆಯಲ್ಲಿ ನಿರಂತರವಾಗಿ ವಿವಿಧ ಮೋರ್ಚಾಗಳ ಸಭೆ ನಡೆಸುತ್ತಿದೆ. 7 ತಾಲೂಕುಗಳಲ್ಲಿಯೂ ಒಂದು ಸುತ್ತಿನ ಸಭೆ ನಡೆಸಿದೆ. ಮಹಿಳಾ ಮೋರ್ಚಾ, ಯುವ ಮೋರ್ಚಾ, ರೈತ ಮೋರ್ಚಾ, ಅನ್ಯ ಭಾಷಿಕರ ಮೋರ್ಚಾ, ಎಸ್ಸಿ, ಎಸ್ಟಿಮೋರ್ಚಾ ಸೇರಿ ವಿವಿಧ ಮೋರ್ಚಾಗಳ ಸಭೆ ® ಡೆಸಿ ಆಯಾ ತಾಲೂಕಿನಲ್ಲಿ ಸಂಘಟನೆಗೆ ಒತ್ತು ನೀಡುತ್ತಿದೆ.
ತ್ರಿಕೋನ ಸ್ಪರ್ಧೆ ನೀಡಲು ಸಜ್ಜು
ಜಿಪಂ, ತಾಪಂ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆಯುವುದರಿಂದ 3 ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಲಿದೆ. ಪಕ್ಷಗಳು ತಮ್ಮ ಸಾಮರ್ಥ್ಯ
ಸಾಬೀತುಪಡಿಸಲು ಮುಂದಿನ ಜಿಪಂ, ತಾಪಂ ಚುನಾವಣೆ ವೇದಿಕೆಯಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾಗಿರುವ ಕೈ, ದಳಕ್ಕೆ ಪೈಪೋಟಿ ನೀಡುವ ಮೂಲಕ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ನೀಡಲು ಕೇಸರಿ ನಾಯಕರು ರಾಜಕೀಯ ತಂತ್ರ ರೂಪಿಸುತ್ತಿದ್ದಾರೆ.
ಸಚಿವ, ಜಿಲ್ಲಾಧ್ಯಕ್ಷರಿಂದ ಬಿಜೆಪಿ ಸಂಘಟನೆ
ಸಚಿವಕೆ.ಸಿ.ನಾರಾಯಣಗೌಡ ಹಾಗೂ ಜಿಲ್ಲಾಧ್ಯಕ್ಷಕೆ.ಜೆ. ವಿಜಯಕುಮಾರ್ ಮೇಲೆ ಪಕ್ಷ ಸಂಘಟನೆ ಹೆಚ್ಚಿನ ಜವಾಬ್ದಾರಿ ಇದ್ದು, ಜಿಲ್ಲೆಯಾದ್ಯಂತ ವಿಸ್ತರಿಸುವ ಪ್ರಯತ್ನ ಮುಂದುವರಿದಿದೆ. ಈಗ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯ ಜವಾಬ್ದಾರಿ ಹೊತ್ತಿದ್ದಾರೆ. ಜಿಲ್ಲಾಧ್ಯಕ್ಷಕೆ.ಜೆ.
ವಿಜಯಕುಮಾರ್ ಜಿಲ್ಲೆಯಾದ್ಯಂತ ವಿವಿಧ ಮೋರ್ಚಾಗಳ ಸಭೆ ನಡೆಸುತ್ತಾ ಮುಂದಿನ ಚುನಾವಣೆಗೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಪದಾಕಾರಿಗಳು, ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.
ಹಳೇ ಮೈಸೂರು ಭಾಗಕ್ಕೆ
ಒಂದೇ ಸಚಿವ ಸ್ಥಾನ
ಹಳೇ ಮೈಸೂರು ಭಾಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಕೆ.ಸಿ.ನಾರಾಯಣಗೌಡ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಲಭಿಸಿದೆ. ಉಳಿದಂತೆ ಮೈಸೂರು, ಹಾಸನ, ಚಾಮರಾಜನಗರ, ರಾಮನಗರ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇದರ ಲೆಕ್ಕಾಚಾರವನ್ನು ತೆಗೆದುಕೊಂಡಿರುವ ಕಮಲ ಮಂಡ್ಯದಲ್ಲಿಯೇ ಸಭೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಬಿಜೆಪಿ ವಿಸ್ತರಿಸಲು ಮೊದಲ ಸಭೆ
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ವಿಸ್ತರಿಸಲು ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯನ್ನು ಇದೇ ಮೊದಲ ಬಾರಿಗೆ ಮಂಡ್ಯ
ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಅಲ್ಲದೆ, ಮುಂದಿನ ಜಿಪಂ, ತಾಪಂಕ್ಷೇತ್ರಗಳ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಈ ಬಾರಿ ಎಲ್ಲಾಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜತೆಗೆ ವಿವಿಧ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷಕೆ.ಜೆ.ವಿಜಯಕುಮಾರ್ ತಿಳಿಸಿದ್ದಾರೆ
ಮಹತ್ವ ಪಡೆದಿರುವ ಸಭೆ
ಬುಧವಾರ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕಾರಣಿಸಭೆ ಮಹತ್ವ ಪಡೆದಿದೆ. ಮುಂದಿನ ಜಿಪಂ, ತಾಪಂ ಚುನಾವಣೆ ದೃಷ್ಟಿಯಿಂದ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ರಾಷ್ಟ್ರ ರಾಜ್ಯ ಮಟ್ಟದ ನಾಯಕರು ಭಾಗ ವಹಿಸಲಿದ್ದು, ಇದು ಯಾವ ರೀತಿ ಯಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನುಕಾದು ನೋಡಬೇಕು.
ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯಿಂದ ಸ್ಪರ್ಧೆ
ಈ ಬಾರಿ ಜಿಪಂ ಹಾಗೂ ತಾಪಂ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಗಿಳಿಸಲು ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳೀಯವಾಗಿ ನಿಷ್ಠಾವಂತ ಕಾರ್ಯ ಕರ್ತರಿಗೆ ಮಣೆ ಹಾಕಲು ಮುಂದಾಗಿದೆ. ಆಯಾಭಾಗದ ಕಾರ್ಯಕರ್ತರ ಸಭೆ ನಡೆಸಿ ಸೂಕ್ತ ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸಲು ಕಮಲ ಮುಂದಾಗಿದೆ.
-ಎಚ್.ಶಿವರಾಜು