ಜಿಲ್ಲೆಯಲ್ಲಿ ಶೇ.40 ಮಾವು ಫಸಲು ಕುಸಿತ
Team Udayavani, Apr 29, 2019, 10:48 AM IST
ಮಂಡ್ಯ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಾವು ಬೆಳೆ ನಿರೀಕ್ಷಿಸಲಾಗಿತ್ತು. ಗಾಳಿ-ಮಳೆ ಇಲ್ಲದ ಕಾರಣ ನಿರೀಕ್ಷೆಯಂತೆ ಫಸಲು ಕೈ ಸೇರಬಹುದೆಂಬ ಆಶಾಭಾವನೆಯಲ್ಲಿ ಬೆಳೆಗಾರರಿದ್ದರು. ಆದರೆ, ರಣಬಿಸಿಲಿನ ಹೊಡೆತಕ್ಕೆ ಹೂವು, ಕಾಯಿ ಉದುರಿದ ಪರಿಣಾಮ ಜಿಲ್ಲೆಯ ಮಾವಿನ ಇಳುವರಿಯಲ್ಲಿ ಶೇ.40ರಷ್ಟು ಫಸಲು ಕುಸಿತ ಕಂಡಿದೆ.
ಜಿಲ್ಲೆಯ 2320 ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತದೆ. ಈ ಪೈಕಿ ಮಳವಳ್ಳಿ ತಾಲೂಕು ಜಿಲ್ಲೆಯಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವಾಗಿದೆ. ಮಂಡ್ಯ ತಾಲೂಕು ಮಾವು ಬೆಳೆಯುವ ಪ್ರದೇಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ರಮುಖವಾಗಿ ಜಿಲ್ಲೆಯೊಳಗೆ ರಸಪೂರಿ, ಅಲ್ಫಾನ್ಸೋ, ತೋತಾಪುರಿ, ಬೇನಿಸಾನ್ ಹಾಗೂ ನೀಲಂ ತಳಿಯ ಮಾವು ಬೆಳೆಯನ್ನು ಬೆಳೆಯಲಾಗುತ್ತಿದೆ.
40 ಡಿಗ್ರಿ ಉಷ್ಣಾಂಶ: ಬೇಸಿಗೆಯಲ್ಲಿ ಫೆಬ್ರವರಿ ಅಂತ್ಯದಿಂದ ಮಾರ್ಚ್ವರೆಗೆ ಮಾವಿನ ಮರಗಳು ಹೂಗಳಿಂದ ತುಂಬಿಹೋಗಿದ್ದವು. ಗಾಳಿ-ಮಳೆ ಇಲ್ಲದಿದ್ದ ಕಾರಣ ಒಳ್ಳೆಯ ಫಸಲು ಸಿಗುವ ನಿರೀಕ್ಷೆಯೂ ಬೆಳೆಗಾರರಲ್ಲಿತ್ತು. ಈ ಬಾರಿ ಗಾಳಿ-ಮಳೆಗಿಂತಲೂ ಬಿಸಿಲಿನ ತಾಪ ಅಧಿಕವಾಗಿತ್ತು. ಕಳೆದ 23 ದಿನಗಳಿಂದ 40 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದು ಪ್ರಮುಖವಾಗಿ ಮಾವು ಬೆಳೆಗೆ ಹೊಡೆತ ಬೀಳಲು ಕಾರಣವಾಯಿತು.
ಕಳೆದ ವರ್ಷ ಚಳಿಗಾಲದಲ್ಲಿ ಇಬ್ಬನಿಯ ಪ್ರಮಾಣವೂ ಹೆಚ್ಚಿರಲಿಲ್ಲ. ಇದರಿಂದ ತಾಪಮಾನ ಅಧಿಕಗೊಳ್ಳಲು ಮುಖ್ಯ ಕಾರಣವಾಗಿದ್ದು, ಭೂಮಿಯೊಳಗೆ ತೇವಾಂಶದ ಕೊರತೆಯಿಂದ ಬಿಸಿಲಿನ ತಾಪ ಹೆಚ್ಚಿತ್ತು. ಇದರಿಂದ ಹೂವುಗಳು ಒಣಗಿಹೋದವು, ಕಾಯಿಗಳು ತಾಪಮಾನಕ್ಕೆ ಉದುರಿದವು. ಇದು ಬೆಳೆಗಾರರು ನಿರೀಕ್ಷಿತ ಇಳುವರಿಯನ್ನು ಕಾಣದಂತಾದರು.
ಹಲವರಿಂದ ಮುಂಜಾಗ್ರತೆ: ಮಾವು ಬೆಳೆಗಾರರಲ್ಲಿ ಕೆಲವರು ನೀರು ನಿರ್ವಹಣೆ ಮಾಡಿಕೊಂಡು ಫಸಲು ನಷ್ಟವಾಗದಂತೆ ಕಾಯ್ದುಕೊಂಡಿದ್ದಾರೆ. ಮತ್ತೆ ಕೆಲವರು ಮೋಹಕ ಬಲೆಗಳನ್ನು ಬಳಸುವ ಮೂಲಕ ಹಣ್ಣುಗಳಿಗೆ ಹರಡುವ ನೊಣಗಳ ಹಾವಳಿಯನ್ನು ತಡೆಯುವುದಕ್ಕೆ ಮುಂದಾಗಿದ್ದರು. ಇನ್ನೂ ಕೆಲವರು ಮ್ಯಾಂಗೋ ಸ್ಪೆಷಲ್ ಸ್ಪ್ರೇ ಬಳಸುವುದರೊಂದಿಗೆ ಹಣ್ಣನ್ನು ಸಂರಕ್ಷಣೆ ಮಾಡಿಕೊಂಡಿದ್ದಾರೆ. ಈ ರೀತಿಯಲ್ಲಿ ಮುಂಜಾಗ್ರತೆ ವಹಿಸಿದ ಬೆಳೆಗಾರರ ತೋಟಗಳಲ್ಲಿ ಮಾವಿನ ಫಸಲು ನಿರೀಕ್ಷೆಯಂತೆ ಬಂದಿದೆ.
ಇಳುವರಿ ಕುಸಿತದಿಂದಾಗಿ ಮಾರುಕಟ್ಟೆಗೆ ಉತ್ಕೃಷ್ಟ ದರ್ಜೆಯ ಮಾವು ಬಂದಿಲ್ಲ. ಹಣ್ಣುಗಳ ರಾಜನಂತಿರುವ ಮಾವನ್ನು ತಿನ್ನಲು ಜನರು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಆದರೆ, ಮರದಲ್ಲೇ ಮಾಗಿರುವ ಮಾವು ಸಿಗದಂತಾಗಿದೆ. ಬಿಸಿಲ ಝಳಕ್ಕೆ ಸಿಲುಕಿ ಹಣ್ಣುಗಳು ರಸತುಂಬಿಕೊಂಡಿಲ್ಲ. ಇದರಿಂದ ಮಾವು ಖರೀದಿಸುವವರೂ ಹಿಂದೇಟು ಹಾಕುತ್ತಿದ್ದಾರೆ.
ಬೆಲೆಯೂ ದುಬಾರಿ: ಹಾಲಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮಾವಿನ ಹಣ್ಣುಗಳು ಬಂದಿವೆ. ರಸಪೂರಿ, ಬಾದಾಮಿ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಬೆಲೆ ದುಬಾರಿಯಾಗಿದೆ. ಪ್ರತಿ ಕೆಜಿ ಮಾವಿನ ಹಣ್ಣಿನ ಬೆಲೆ 100 ರೂ. ಆಗಿದೆ. ಹಣ್ಣುಗಳು ಸರಿಯಾಗಿ ಮಾಗದಿರುವುದರಿಂದ ಪರಿಮಳ ಸೂಸುತ್ತಿಲ್ಲ. ಮಾರುಕಟ್ಟೆಯಲ್ಲಿ ಮಾವಿನ ಘಮಲಿಲ್ಲದೆ ಜನರೂ ಹೆಚ್ಚಿನ ಪ್ರಮಾಣದಲ್ಲಿ ಕೊಳ್ಳಲು ಮುಂದಾಗುತ್ತಿಲ್ಲ.
ರಾಸಾಯನಿಕ ಮುಕ್ತ ಹಣ್ಣಿಗೆ ಪ್ರಾಮುಖ್ಯತೆ: ಮಾವಿನ ಹಣ್ಣುಗಳು ರಾಸಾಯನಿಕ ಮುಕ್ತವಾಗಿರಬೇಕು. ತಾಜಾ ಹಣ್ಣುಗಳು ಗ್ರಾಹಕರ ಸೇವನೆಗೆ ದೊರಕುವಂತಾಗಬೇಕು. ಮಾವನ್ನು ಹಣ್ಣು ಮಾಡುÊುದಕ್ಕೆ ರಾಸಾಯನಿಕವನ್ನು ಬಳಸದೆ ಮರದಲ್ಲಿ ಚೆನ್ನಾಗಿ ಬಲಿತ ಹಣ್ಣುಗಳನ್ನು ತಂದು ನ್ಯೂಸ್ ಪೇಪರ್ನಲ್ಲಿ ಸುತ್ತಿಡುವುದರಿಂದ ಹಾಗೂ ಎಥಿಲಿನ್ ಗ್ಯಾಸ್ ಉಪಯೋಗಿಸುವುದರಿಂದಲೂ ಹಣ್ಣು ಮಾಡಲು ಸಾಧ್ಯವಿದೆ ಎನ್ನುವುದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ಅವರು ಹೇಳುವ ಮಾತು.
ರಾಸಾಯನಿಕ ಬಳಸುವುದರಿಂದ ಹಣ್ಣುಗಳ ತಾಜಾತನ ಹಾಳಾಗುತ್ತದೆ. ಅದರಿಂದ ಹಣ್ಣನ್ನು ಸೇವಿಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಣ್ಣುಗಳಿಗೆ ರಾಸಾಯನಿಕ ಬೆರೆಸಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರಿಗೆ 5 ವರ್ಷ ಜೈಲು ಶಿಕ್ಷೆ, 2 ಲಕ್ಷ ರೂ.ವರೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಹಣ್ಣುಗಳನ್ನು ಸಮರ್ಪಕವಾಗಿ ಸಾಗಿಸಲು ಅನುಕೂಲವಾಗುವಂತೆ ಬೆಳೆಗಾರರಿಗೆ ಕಾರ್ಡ್ಬೋರ್ಡ್ ಬಾಕ್ಸ್ಗಳು, ಕ್ರೇಟ್ಗಳು, ನೊಣಗಳಿಂದ ಹಣ್ಣುಗಳನ್ನು ಕಾಪಾಡಲು ಮೋಹಕ ಬಲೆಗಳನ್ನು ಇಲಾಖೆ ವತಿಯಿಂದ ವಿತರಿಸಲಾಗುತ್ತಿದೆ. ಮಾವು ಬೆಳೆಗಾರರಿಗೆ ನೆರವಾಗುವಂತೆ ಕಾರ್ಡ್ಬೋರ್ಡ್ ಬಾಕ್ಸ್ ಬೆಳೆ 20 ರೂ. ಇದ್ದು 10 ರೂ. ರಿಯಾಯಿತಿ, 300 ರೂ.ನ ಕ್ರೇಟ್ಗೆ 150 ರೂ. ರಿಯಾಯಿತಿ, 40 ರೂ. ಬೆಲೆಯ ಮೋಹಕ ಬಲೆಗೆ 20 ರೂ. ರಿಯಾಯಿತಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಮಾವು ಬೆಳೆಯ ವಿವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ