ಸಿಎಂ ವಾಸ್ತವ್ಯವಿದ್ದ ಹೊನಗಹಳ್ಳಿಗೆ ಬಸ್ಸೇ ಬರೋಲ್ಲ!
ಸಂಧ್ಯಾ ಸುರಕ್ಷಾ, ವಿಧವಾ ವೇತನ, ಪಡಿತರ ಚೀಟಿ ಸಿಕ್ಕಿದ್ದೇ ಭಾಗ್ಯ • ಮೂಲ ಸೌಲಭ್ಯ ವಂಚಿತ ಹೊನಗಹಳ್ಳಿ
Team Udayavani, Jun 9, 2019, 1:33 PM IST
ಹೊನಗಹಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ಮಸಣಯ್ಯನ ಮನೆ.
ಮಳವಳ್ಳಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಊರಿನಲ್ಲಿ ವಾಸ್ತವ್ಯವಿದ್ದು ಹನ್ನೆರಡು ವರ್ಷಗಳು ಕಳೆದಿವೆ. ಇಂದಿಗೂ ಈ ಊರಿಗೆ ಬಸ್ಸೇ ಬರುವುದಿಲ್ಲ. ಮೂಲಸೌಲಭ್ಯಗಳಿಂದ ಗ್ರಾಮ ಸಂಪೂರ್ಣ ವಂಚಿತವಾಗಿದೆ. ಕೊಟ್ಟ ಆಶ್ವಾಸನೆಗಳೆಲ್ಲವೂ ಮೂಲೆಗುಂಪಾಗಿವೆ. ಅಂದು ಸಿಎಂ ಬರುತ್ತಾರೆಂಬ ಕಾರಣಕ್ಕೆ ಊರಿನ ಹಲವರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಪಡಿತರ ಚೀಟಿ ವ್ಯವಸ್ಥೆ ಕಲ್ಪಿಸಿ ಹರಿಜನ ಕಾಲೋನಿಗೆ ವಿದ್ಯುತ್ ಕಲ್ಪಿಸಿದ್ದಷ್ಟೇ ಭಾಗ್ಯ. ಅದನ್ನು ಬಿಟ್ಟರೆ ಇನ್ನಾವುದೇ ಅಭಿವೃದ್ಧಿ ಆಗಿಲ್ಲ.
ಇದು ಮಳವಳ್ಳಿ ತಾಲೂಕಿನ ಹೊನಗಹಳ್ಳಿ ಗ್ರಾಮದ ಕಥೆ. ಈ ಊರಿನಲ್ಲಿ 220 ಕುಟುಂಬಗಳು ನೆಲೆಸಿವೆ. 1300 ಜನಸಂಖ್ಯೆ ಹೊಂದಿರುವ ಹಳ್ಳಿ. ಊರಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಯಾವೊಂದು ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ಮಾಡಿದ್ದಷ್ಟೇ ಮುಂದೆ ಕೆಲಸ ಸಾಗಲೇ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಬಂದು ಹೋದ ಬಳಿಕ ಗ್ರಾಮದ ಅಭಿವೃದ್ಧಿ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಈ ಗ್ರಾಮದ ಮಸಣಯ್ಯ ಅವರ ಮನೆಯಲ್ಲಿ 6 ಏಪ್ರಿಲ್ 2007ರಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಊರಿಗೆ ಬರುತ್ತಾರೆಂಬ ಕಾರಣಕ್ಕೆ ಮಸಣಯ್ಯನವರ ಮನೆಯ ಬೀದಿಗೆ ರಸ್ತೆ ನಿರ್ಮಿಸಲಾಗಿತ್ತು. ಊರಿನ ಜನರಿಗೆ ಪಡಿತರ ಚೀಟಿ, ಅರ್ಹರಿಗೆ ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿತ್ತು. ಗ್ರಾಮದ ಹರಿಜನ ಕಾಲೋನಿ ಕತ್ತಲೆಯಲ್ಲಿ ಮುಳುಗಿತ್ತು. ಈಗ ಕಾಲೋನಿಗೆ ಪ್ರತ್ಯೇಕ ಟ್ರಾನ್ಸ್ಫಾರ್ಮರ್ ಅಳವಡಿಸಿ ವಿದ್ಯುಚ್ಚಕ್ತಿ ಸೌಲಭ್ಯ ಕಲ್ಪಿಸಿದ್ದರಿಂದ ಬೆಳಕು ಕಂಡಿದೆ. ಅದನ್ನು ಹೊರತು ಪಡಿಸಿದಂತೆ ಇನ್ನಾವುದೇ ಅಭಿವೃದ್ಧಿ ಕಂಡಿಲ್ಲ.
ಈಡೇರದ ಉದ್ಯೋಗ ಭರವಸೆ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನೆಯಲ್ಲಿ ಮಲಗಲು ತಂದಿದ್ದ ಹಾಸಿಗೆ, ದಿಂಬು ಮಂಚ ಹಾಗೂ ಒಂದು ನೀರಿನ ಟ್ಯಾಂಕ್ ಮಾತ್ರ ಆ ಮನೆಯಲ್ಲಿದೆ. ಮನೆಗೆ ಅಳವಡಿಸಿದ್ದ ಹವಾನಿಯಂತ್ರಿತ ಸೌಲಭ್ಯವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಮಸಣಯ್ಯ ನವರ ಮಗನಿಗೆ ಸರ್ಕಾರಿ ಉದ್ಯೋಗ ದೊರಕಿಸುವ ಭರವಸೆ ಈಡೇರಿಲ್ಲ. ಈಗ ಆತ ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಹೊನಗಹಳ್ಳಿಗೆ ವಾಸ್ತವ್ಯಕ್ಕೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಎದುರು ಗ್ರಾಮಸ್ಥರು ಅನೇಕ ಬೇಡಿಕೆಗಳನ್ನು ಇಟ್ಟಿದ್ದರು. ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಕುಡಿಯುವ ನೀರು, ಉತ್ತಮವಾದ ರಸ್ತೆ, ಚರಂಡಿ ನಿರ್ಮಿಸುವಂತೆ ಮನವಿ ಮಾಡಿದ್ದರು. ಅದೆಲ್ಲವನ್ನೂ ದೊರಕಿಸುವುದಾಗಿ ಸಿಎಂ ಕೂಡ ಹೇಳಿದ್ದರು. ಗ್ರಾಮಸ್ಥರು ಅಭಿವೃದ್ಧಿಯ ನಿರೀಕ್ಷೆಯಲ್ಲೇ ಇದ್ದರಾದರೂ ಆನಂತರದಲ್ಲಿ ಅಧಿಕಾರಿ ಗಳ ಅಭಿವೃದ್ಧಿ ಯನ್ನು ಮರೆತು ಕುಳಿತರು. ಸಿಎಂ ಕುಮಾರಸ್ವಾಮಿ ಅವರೂ ಮತ್ತೆ ಗ್ರಾಮದ ಕಡೆ ಸುಳಿಯಲೇ ಇಲ್ಲ.
ಚರಂಡಿ ವ್ಯವಸ್ಥೆ ಹಾಳು: ಊರಿನಲ್ಲಿರುವ ಚರಂಡಿ ವ್ಯವಸ್ಥೆಯೂ ಹಾಳಾಗಿವೆ. ಅದನ್ನು ಉತ್ತಮಗೊಳಿ ಸುವುದಕ್ಕೆ ಯಾರೂ ಮುಂದಾಗಿಲ್ಲ. ಚರಂಡಿಗಳು ಅಲ್ಲಲ್ಲಿ ಕಟ್ಟಿಕೊಂಡು ಅಧ್ವಾನ ಸ್ಥಿತಿಯಲ್ಲಿವೆ. ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿವೆ. ಅಂಗನವಾಡಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಎಂ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯಕ್ಕಿಂತ ಮೊದಲೇ ಇದ್ದವು. ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ದಾದಿಯರಿರುವ ಕೇಂದ್ರ ಮಾತ್ರ ಇದ್ದು, ಆಸ್ಪತ್ರೆಗಾಗಿ ಬೆಳಕವಾಡಿಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ.
ಶಿಥಿಲಗೊಂಡ ವಿದ್ಯುತ್ ಕಂಬಗಳು: ಗ್ರಾಮದಲ್ಲಿ ಹಲವು ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು, ಈಗಲೂ 15 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ದುಸ್ಥಿತಿಯಲ್ಲಿವೆ. ಇತ್ತೀಚೆಗೆ 6 ಕಂಬಗಳನ್ನು ಮಾತ್ರ ಬದಲಿಸಲಾಗಿದೆ. ಇನ್ನುಳಿದ ಕಂಬಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರೂ ಬದಲಾಯಿಸಿಲ್ಲ ಎನ್ನುವುದು ಗ್ರಾಮಸ್ಥರು ಹೇಳುವ ಮಾತು.
● ಎ.ಎಸ್.ಪ್ರಭಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ