ಸರ್ಕಾರಿ ಶಾಲೆ ಮಕ್ಕಳಿಗೆ ಮರದಡಿಯೇ ಆಟ ಪಾಠ ಊಟ
ಗಣಪತಿ ಪಾರ್ಕ್ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ • ನಿವೇಶನ ಕೊಟ್ಟಿದ್ದರೂ ಖಾಸಗಿ ವ್ಯಕ್ತಿಗಳ ಕಾಟ: ಕೋರ್ಟ್ಲ್ಲಿ ದಾವೆ
Team Udayavani, Jul 2, 2019, 12:18 PM IST
ಮರದಡಿ ಪಾಠ ಕೇಳುತ್ತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು.
ಕೆ.ಆರ್.ಪೇಟೆ: ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ಬಿಡುಗಡೆ, ವಿನೂತನ ಯೋಜನೆಗಳು ಜಾರಿಗೊಳಿಸಿದರೂ ಇನ್ನೂ ಕೆಲಸ ಶಾಲೆಗಳಲ್ಲಿ ಶಾಲಾ ಕೊಠಡಿಗಳು, ಶಿಕ್ಷಕರು, ಕುಡಿಯುವ ನೀರು, ಶೌಚಾಲಯ ಮತ್ತಿತರೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಅದಕ್ಕೊಂದು ನಿದರ್ಶನವೇ ಪಟ್ಟಣದ ಗಣಪತಿ ಉದ್ಯಾನವನದಲ್ಲಿರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವ ಈ ದಿನಗಳಲ್ಲಿಯೂ ಈ ಶಾಲೆ ಮಕ್ಕಳು ಮಳೆ, ಗಾಳಿ, ಚಳಿ ಮತ್ತು ಬಿಸಿಲಿನಲ್ಲಿ ಪಾಠ ಕೇಳಬೇಕಾದ ದುಸ್ಥಿತಿಯಿದೆ. ಕೆ.ಆರ್.ಪೇಟೆ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮರದ ಕೆಳಗೆ ಕುಳಿತು ಪಾಠ ಕೇಳಬೇಕಾದ ದುರ್ಗತಿ.ಇನ್ನು ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿ ಹೇಗಿರಬಹುದೆಂಬುದು ಬಿಡಿಸಿ ಹೇಳಬೇಕಿಲ್ಲ. 1998ರಲ್ಲಿ ಶಾಲೆ ಆರಂಭ: ಪಟ್ಟಣದ ಹೇಮಾವತಿ ಬಡಾವಣೆ ಯಲ್ಲಿ 1998ರಲ್ಲಿ ಬಾಡಿಗೆ ಮನೆಯೊಂದರಲಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಯಿತು. ನಂತರದ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲಾ ತರಗತಿಗಳಿಗೂ ಒಂದೇ ಬಾಡಿಗೆ ಮನೆಯಲ್ಲಿ ಬೋಧನೆ ಮಾಡುವುದು ಕಷ್ಟವಾಯಿತು. ಅಲ್ಲದೆ ಹೆಚ್ಚು ಮನೆಗಳನ್ನು ಬಾಡಿಗೆಗೆ ಪಡೆದರೂ, ಬಾಡಿಗೆ ಕೊಡುವುದು ಕಷ್ಟವಾಗುತ್ತದೆ ಎಂದು ಶಿಕ್ಷಕರು ಅದೇ ಬಡಾವಣೆಯ ಲ್ಲಿರುವ ಗಣಪತಿ ಪಾರ್ಕ್ಗೆ ಕರೆತಂದು ಒಂದೊಂದು ಮರದ ಕೆಳಗೆ ಒಂದು ತರಗತಿ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡಲು ಆರಂಭಿಸಿದರು. ಒಂದು ಕಾಲದಲ್ಲಿ 150 ಮಕ್ಕಳಿದ್ದ ಸರ್ಕಾರಿ ಶಾಲೆಯಲ್ಲೀಗ 15 ಮಕ್ಕಳು, ಇಬ್ಬರು ಶಿಕ್ಷರಿದ್ದಾರೆ.
ಮರಗಳಡಿಯೇ ಪಾಠ: ಇದನ್ನು ಕಂಡು ಶಿಕ್ಷಣ ಇಲಾಖೆ ಪಾರ್ಕ್ ನಲ್ಲಿ ಮುಖ್ಯ ಶಿಕ್ಷಕರು ಮತ್ತು ಕಲಿಕಾ ವಸ್ತುಗಳು, ದಾಖಲೆಗಳಿಗೆಂದು ಒಂದು ಕೊಠಡಿಯನ್ನು ನಿರ್ಮಿಸಿ ಕೊಡಲಾಯಿತು. ಅದಾದ ಬಳಿಕವೂ ಶಿಕ್ಷಕರ ಕೊಠಡಿಗಳ ನಿರ್ಮಾಣಕ್ಕೆ ಸತತ ಪ್ರಯತ್ನ ನಡೆಸಿದರೂ ಮೇಲಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟವರ್ಯಾರೂ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಇಚ್ಚಾಸಕ್ತಿ, ಕ್ರಮ ಕೈಗೊಳ್ಳಲಿಲ್ಲ. ಇಷ್ಟು ವರ್ಷಗಳಾದರೂ ಗಣಪತಿ ಪಾರ್ಕ್ನಲ್ಲಿರುವ ಗಿಡಮರಗಳೇ ಮಕ್ಕಳ ಪಾಠಪ್ರವಚನಗಳಿಗೆ ಆಸರೆ ನೀಡಿವೆ. ಎಲೆ ಉದುರುವ, ಮತ್ತಿತರೆ ಕೆಲ ಸಂದರ್ಭಗಳಲ್ಲಿ ಉದ್ಯಾನವನದ ಬಯಲು ಪ್ರದೇಶದಲ್ಲಿಯೇ ಬಿಸಿಲಲ್ಲಿ ಕುಳಿತು ಮಕ್ಕಳು ಪಾಠ ಕೇಳಬೇಕಾಗಿದೆ.
ಭಾಷಣ ಹೇಳಕ್ಕೇ, ಕೇಳಕ್ಕೆ ಚೆಂದ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಮಕ್ಕಳ ಹಕ್ಕು, ಮಕ್ಕಳನ್ನು ದುಡಿಮೆಗೆ ಕಳಿಸುವುದು ಅಪರಾಧ ಎಂದೆಲ್ಲಾ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುವ, ವೇದಿಕೆಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಇಂತಹ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಸರಿಪಡಿಸುವ ಮನಸ್ಸಿಲ್ಲವೇಕೆ ಎಂಬ ಪ್ರಶ್ನೆ ಮಕ್ಕಳ ಮನಸ್ಸಿನಲ್ಲಿ ಪುಟಿದೆದ್ದರೂ, ಅದನ್ನು ಕೇಳಿ ಪಡೆಯಲು ಅವರು ಅಸಹಾಯಕರಾಗಿದ್ದಾರೆ.
20 ಸಾವಿರ ಮಕ್ಕಳು ಕಲಿತ ಶಾಲೆ: 20 ವಸಂತಗಳನ್ನು ಪೂರೈಸಿರುವ ಈ ಸರ್ಕಾರಿ ಶಾಲೆಯಲ್ಲಿ ಬಯಲಲ್ಲೇ ಪಾಠ ನಡೆಯುತ್ತಿದ್ದರೂ ಮಕ್ಕಳ ಕೊರತೆ ಇರಲಿಲ್ಲ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸುಮಾರು 20 ಸಾವಿರ ಮಕ್ಕಳು ವ್ಯಾಸಂಗ ಮಾಡಿದ್ದಾರೆ. ಯಾವೊಬ್ಬ ಪೋಷಕರು ತಕರಾರು ಮಾಡಲಿಲ್ಲ. ಇಂತಹ ಶಾಲೆಗೆ ಸೂಕ್ತ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸದ ರಾಜಕಾರಣಿಗಳು ತಮ್ಮ ಪ್ರತಿಷ್ಠೆಗಾಗಿ ಮಕ್ಕಳಿಲ್ಲದ ಹಾಗೂ ಈಗಾಗಲೇ ಕೊಠಡಿಗಳಿರುವ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿಸಿಕೊಡುತ್ತಿರುವುದು ವಿಪರ್ಯಾಸ.
ಬಿಸಿಯೂಟಕ್ಕೆ ಬೇರೇ ಶಾಲೆ ಆಶ್ರಯ: ಮಕ್ಕಳಿಗೆ ಪಾಠ ಮಾಡಲು ಶಾಲಾ ಕೊಠಡಿ ಇಲ್ಲದೆ ಮರದ ಕೆಳಗೆ ಕುಳಿತು ಮಕ್ಕಳು ಪಾಠ ಕೇಳುತ್ತಿರುವಾಗ ಇನ್ನು ಬಿಸಿಯೂಟ ತಯಾರು ಮಾಡಲು ಕೊಠಡಿ ಒದಗಿಸಲು ಅಧಿಕಾರಿಗಳು ತಲೆ ಕೆಡಸಿಕೊಂಡಿಲ್ಲ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಊಟವನ್ನು ಪಟ್ಟಣದ ಮೇಲುಕೋಟೆ ರಸ್ತೆಯಲ್ಲಿರುವ ದೇವೀರಮ್ಮಣ್ಣಿಕೆರೆ ಪಕ್ಕದಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಯಾರು ಮಾಡಿ ಕೊಂಡು ಅಲ್ಲಿಂದ ಆಟೋದಲ್ಲಿ ಬಿಸಿ ಊಟವನ್ನು ಗಣಪತಿ ಪಾರ್ಕ್ನಲ್ಲಿರುವ ಶಾಲಾ ಮಕ್ಕಳಿಗೆ ತಂದು ಮಕ್ಕಳಿಗೆ ನೀಡಲಾಗುತ್ತಿದೆ.
ಶಾಲೆಗೆ ನೀಡಿದ್ದ ನಿವೇಶನ ಗುಳುಂ: ಬಾಡಿಗೆ ಮನೆಯಲ್ಲಿ ಶಾಲೆಗಳು ನಡೆಯುತ್ತಿರುವುದರಿಂದ ಮಕ್ಕಳ ಅನುಕೂಲಕ್ಕಾಗಿ ಪುರಸಭೆಯ ವತಿಯಿಂದ ಹಳೇ ಹೇಮಗಿರಿ ರಸ್ತೆಯಲ್ಲಿ ಶಾಲೆಗೆ ಕೊಠಡಿಗಳು ನಿರ್ಮಿಸಲು 60 x100 ಅಳತೆಯ 2400 ಅಡಿ ವಿಸ್ತೀರ್ಣದ ನಿವೇಶನವನ್ನು ಶಾಲಾ ಮುಖ್ಯ ಶಿಕ್ಷಕರ ಹೆಸರಿಗೆ ಬರೆಯಲಾಗಿತ್ತು. ಆದರೆ, ಇದಾದ ನಂತರ ಪುರಸಭೆಯ ಆಡಳಿತ ಹಿಡಿದ ಅಧ್ಯಕ್ಷರು ಹಾಗೂ ಕೆಲವು ಭ್ರಷ್ಟ ಅಧಿಕಾರಿಗಳು ಶಾಲೆಗೆ ನೀಡಿದ್ದ ನಿವೇಶನವನ್ನು ಮತ್ತೆ ಖಾಸಗಿ ವ್ಯಕ್ತಿಗಳ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ಶಾಲೆಯ ನಿವೇಶನ ನಮಗೆ ಬರಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದು ಆ ನಿವೇಶನವೂ ಶಾಲೆಗೆ ಸಿಗುವುದೋ ಇಲ್ಲವೋ ಎಂಬಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್