ನಾಗಮಂಗಲ: ಯುವಕನ ಅಪಹರಣ ಕೊಲೆಯಲ್ಲಿ ಅಂತ್ಯ
Team Udayavani, May 22, 2022, 2:51 PM IST
ನಾಗಮಂಗಲ: ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ತೊಂದರೆ ನೀಡುತ್ತಿದ್ದಾನೆ ಎಂದು ಅನುಮಾನಿಸಿ ಗಣಿ ಮಾಲಿಕನೊಂದಿಗೆ ಸೇರಿ ಸಂಬಂಧಿಕರೇ ಯುವಕನನ್ನು ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೇ 15ರಂದು ಕಣ್ಮರೆ ಯಾಗಿದ್ದ ತಾಲೂಕಿನ ನರಗಲು ಗ್ರಾಮದ ಮೋಹನ್ (31) ಹತ್ಯೆಯಾದವ. ಗಣಿಮಾಲಿಕ ತಮಿಳುನಾಡು ಮೂಲದ ರಾಜು, ಹತ್ಯೆಯಾದ ಮೋಹನ್ನ ಸಂಬಂಧಿಕರಾದ ತೇಜು, ಹಲಗೇಗೌಡ ಅಲಿಯಾಸ್ ಕುಮಾರ್ ಬಂಧಿತರು.
ತಾವು ನಡೆಸುತ್ತಿರುವ ಗಣಿಗಾರಿಕೆಗೆ ತೊಡಕಾಗಿದ್ದ ಎಂದು ಅನುಮಾನಿಸಿ ಅಪಹರಿಸಿ ಕೊಲೆ ಮಾಡಿ ನಂತರ ಹೊಳೆ ನರಸೀಪುರ ತಾಲೂಕಿನ ಭಂಟರ ತಳಲು ಬಳಿಯ ಅರಣ್ಯ ಪ್ರದೇಶದ ಗುಡ್ಡದಲ್ಲಿ ಶವವನ್ನು ಆರೋಪಿಗಳು ಹೂತು ಹಾಕಿದ್ದರು.
ಹಾಗೆಯೇ ಕೊಲೆಯಾಗಿರುವ ಮೋಹನ್ ಜಮೀ ನಿನ ಪಕ್ಕದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಗಣಿ ಮಾಲಿಕ ತಮಿಳುನಾಡು ಮೂಲದ ರಾಜು, ಮೋಹನ್ ಸಂಬಂಧಿಕರಾದ ತೇಜು, ಹಲಗೇಗೌಡ ಅಲಿಯಾಸ್ ಕುಮಾರ್ ಎಂಬವರು ಗಣಿಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ದಾಳಿಗೂ ಈತನೇ ಕಾರಣ ಎಂದು ಅನು ಮಾನಿಸಿದ್ದರು. ಜತೆಗೆ ಮೋಹನ್ ದೊಡ್ಡಪ್ಪನ ಮಗ ಹಲಗೇಗೌಡನಿಗೂ ಮೋಹನ್ಗೂ ಗ್ರಾಪಂ ಚುನಾವಣೆ ನಂತರ ಮನಸ್ಥಾಪಗಳು ಉಂಟಾಗಿದ್ದವು ಎನ್ನಲಾಗಿದೆ.
ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ: ಗಣಿಗಾರಿಕೆ ಮೇಲಿನ ದಾಳಿಗೂ, ಮೋಹನ್ಗೂ ಯಾವುದೇ ಸಂಬಂಧ ಇಲ್ಲ. ಕೆಲ ದಿನಗಳ ಬಳಿಕ ನಾಗಮಂಗಲಶಾಸಕ ಸುರೇಶ್ಗೌಡ ಅವರು ಮಧ್ಯೆ ಪ್ರವೇಶಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ಸೂಚಿಸಿದ ನಂತರ ಪೊಲೀಸರು ಎಚ್ಚೆತ್ತುಕೊಂಡರು. ಇದೀಗ ಕೊಲೆಗಡುಕರು ಸಿಕ್ಕಿ ಬಿದ್ದಿದ್ದಾರೆ. ಅವರಿಗೆ ತಕ್ಕಶಾಸ್ತಿಯಾಗಬೇಕು.ಅಲ್ಲದೇ ನಿರ್ಲಕ್ಷ ತೋರಿದ ಪೊಲೀಸರ ಮೇಲೂ ಕ್ರಮ ಆಗಬೇಕು ಎಂದು ನರಗಲು ಗ್ರಾಮಸ್ಥರು ಆಗ್ರಹಿಸಿದರು.
ಮೋಹನ್ನನ್ನು ನಾವೇ ಕೊಲೆ ಮಾಡಿ ಹೂತು ಹಾಕಿದ್ದೇವೆ ಎಂದು ಬಂಧಿತರಾದ ರಾಜು, ತೇಜು, ಕುಮಾರ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮಾಹಿತಿ ಆಧರಿಸಿ ಬಿಂಡಿಗನವಿಲೆ ಪೊಲೀಸರು, ಹಳ್ಳಿ ಮೈಸೂರು ಪೊಲೀಸರ ಸಹಕಾರ ದೊಂದಿಗೆ ಗುಡ್ಡಗಾಡು ಪ್ರದೇಶ ದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದು ಮಹಜರು ನಡೆಸಿದರು.
ಮೂವರನ್ನು ಪೊಲೀಸರು ಶನಿವಾರ ಜೆಎಂಎಫ್ಸಿ ನ್ಯಾಯಾಧೀಶರೆದುರು ಹಾಜರು ಪಡಿಸಿದರು.
ನೀರವ ಮೌನ: ನರಗಲು ಗ್ರಾಮದ ಬಳಿಯಿರುವ ಕ್ರಷರ್ ಸುತ್ತ ಅಹಿತಕರ ಘಟನೆ ನಡೆಯದಂತೆಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನರಗಲು ಗ್ರಾಮದ ಆರೋಪಿ ಹಲಗೇಗೌಡನ ಮನೆಯಲ್ಲಿಕುಟುಂಬಸ್ಥರು ಮನೆಗೆ ಬೀಗ ಜಡಿದು ತಲೆಮರೆಸಿ ಕೊಂಡಿದ್ದಾರೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಕಂಬನಿ: ಮುಗಿಲು ಮುಟ್ಟಿದ ಆಕ್ರಂದನ: ಮೋಹನ್ ಕೊಲೆಯಾಗಿರುವ ವಿಚಾರ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೋಹನ್ನ ಪತ್ನಿ, ಮೂವರು ಅಕ್ಕಂದಿರ ಗೋಳು ಹೇಳತೀರದಂತಿತ್ತು. ಇನ್ನು ನರಗಲು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸ್ನೇಹಿತರು ಕಂಬನಿ ಮಿಡಿದರು.
ಧೈರ್ಯ ತುಂಬಿದ ನಾಯಕರು: ಶಾಸಕ ಸುರೇಶ್ ಗೌಡ ಮೋಹನ್ ಮನೆಯವರಿಗೆ ಧೈರ್ಯ ತುಂಬಿ ಬಂದಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈ ಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದಾರೆ. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಮೋಹನ್ ಸಂಬಂಧಿಕರಿಗೆ ಸಾಂತ್ವಾನ ಹೇಳಿದರು.
ಅಪಹರಣ ದೂರು ಕೊಡಬೇಡಿ ಎಂದರು! : ಕಳೆದ 15 ರಂದು ಮೋಹನ್ ಹೊಲದ ಬಳಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋದವನು ಸಂಜೆಯಾದರೂ ಮನೆಗೆಬಂದಿರಲಿಲ್ಲ. ಗಾಬರಿಗೊಂಡ ಮೋಹನ್ ತಾಯಿ,ಪತ್ನಿ ಭಾನುವಾರ ರಾತ್ರಿಯೇ ಬಿಂಡಿಗನವಿಲೆಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರುನೀಡಿದ್ದರು. ಅಪಹರಣ ಕೇಸ್ ದಾಖಲಿಸಿ ಎಂದರೆನಾಪತ್ತೆ ದೂರು ಕೊಡುವಂತೆ ಪೊಲೀಸರು ಒತ್ತಡತಂದು ಬರೆಸಿಕೊಂಡರು. ಅಂದೇ ತನಿಖೆಗೆ ಮುಂದಾಗಿದ್ದರೆ ನಮ್ಮ ಮಗ ಮೋಹನ್ಬದುಕುಳಿಯುತ್ತಿದ್ದ ಎಂದು ಮೃತನ ತಾಯಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha Elections: ಎಚ್ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್