ಸುಮಲತಾ ಬೆಂಬಲಿಗರಿಗೆ ಜೆಡಿಎಸ್ ತರಾಟೆ
Team Udayavani, Jun 14, 2019, 5:04 AM IST
ಮಂಡ್ಯ: ಪಾಂಡವಪುರ ತಾಲೂಕಿನ ಕನಗನಮರಡಿ ಬಸ್ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಕೇಂದ್ರದಿಂದ 2 ಲಕ್ಷ ರೂ.ಪರಿಹಾರ ಬಿಡುಗಡೆಯಾಗಿರುವ ವಿಚಾರ ಜೆಡಿಎಸ್ ಹಾಗೂ ಅಂಬರೀಶ್ ಬೆಂಬಲಿಗರ ನಡುವಿನ ಜಟಾಪಟಿಗೆ ಕಾರಣವಾಗಿದೆ. ಬಸ್ ದುರಂತದಲ್ಲಿ ಸಾವನ್ನಪ್ಪಿದ 30 ಕುಟುಂಬಗಳಿಗೆ ಕೇಂದ್ರ ಸರ್ಕಾರದ ಗಮನ ಸೆಳೆದು 2 ಲಕ್ಷ ರೂ.ಪರಿಹಾರ ಕೊಡಿಸಿದ್ದು ಸುಮಲತಾ ಎಂದು ಅಂಬರೀಶ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಿದ್ದರು.
ಸುಮಲತಾಗೆ ಧನ್ಯವಾದವನ್ನೂ ಅರ್ಪಿಸಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಕಾರ್ಯಕರ್ತರು, ಕೇಂದ್ರದಿಂದ ಹಣ ಕೊಡಿಸಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ಬಸ್ ದುರಂತ ಕುರಿತು ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದ್ದರ ಫಲವಾಗಿ ಕಳೆದ ಫೆಬ್ರವರಿ 6ರಂದೇ ಪರಿಹಾರ ಬಂದಿದೆ. ಆಗ ಸುಮಲತಾ ಎಲ್ಲಿದ್ದರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ಪರಿಹಾರ ಹಣದ ವಿಚಾರವನ್ನು ಪ್ರಚಾರಕ್ಕೆ ಬಳಸಿದ್ದು ತಪ್ಪು. ಆದರೆ, ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ತಲುಪಿರುವುದು ಮುಖ್ಯ. ಅದನ್ನು ಯಾರು ಕೊಟ್ಟಿದ್ದಾರೆ ಅಥವಾ ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ ಎಂದರು.