ಕೆ.ಆರ್.ಪೇಟೆ ಪಟ್ಟಣಕ್ಕೆ ನೂರೆಂಟು ಸಮಸ್ಯೆ
ಒಳಚರಂಡಿ ಕಾಮಗಾರಿ ಅಪೂರ್ಣ, ಕುಲಗೆಟ್ಟಿರುವ ರಸ್ತೆಗಳು • ಹೊಸಹೊಳಲು ಕೆರೆ ಸೇರುತ್ತಿರುವ ಕಲುಷಿತ ನೀರು
Team Udayavani, May 12, 2019, 12:57 PM IST
ಮಂಡ್ಯ: ಕೆ.ಆರ್.ಪೇಟೆ ಪುರಸಭೆಗೆ ಕಳೆದ ಐದು ವರ್ಷಗಳಲ್ಲಿ ಯಾವುದೇ ಅನುದಾನ ದೊರಕಲಿಲ್ಲ. ಪರಿಣಾಮ ಪಟ್ಟಣ ಅಭಿವೃದ್ಧಿಯ ಭಾಗ್ಯವನ್ನೂ ಕಾಣಲಿಲ್ಲ, ಅಂದವಾಗಲೂ ಇಲ್ಲ. ಒಂದೆಡೆ ಹಾಳಾದ ರಸ್ತೆಗಳು, ಅರ್ಧಕ್ಕೆ ನಿಂತಿರುವ ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಸಮಸ್ಯೆಯೂ ಸೇರಿದಂತೆ ನೂರೆಂಟು ಸಮಸ್ಯೆಗಳನ್ನು ಒಡಲಿನಲ್ಲಿರಿಸಿ ಕೊಂಡು ಪಟ್ಟಣ ಅಭಿವೃದ್ಧಿ ವಂಚಿತವಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಆ ಹಣವೂ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಬಳಕೆಯಾಗದೆ ಪೋಲಾಯಿತು. ಆನಂತರದಲ್ಲಿ ಸರ್ಕಾರದಿಂದ ಯಾವುದೇ ಅನುದಾನವೂ ಬರಲಿಲ್ಲ. ಅಭಿವೃದ್ಧಿ ಎಂಬುದು ಹಳ್ಳ ಹಿಡಿಯುವಂತಾಯಿತು.
ಕಲುಷಿತ ವಾತಾವರಣ: ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣಗೊಂಡಿದ್ದು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಪಟ್ಟಣದೊಳಗೆ ಬಹುತೇಕ ಮ್ಯಾನ್ಹೋಲ್ಗಳು ತುಂಬಿ ಹರಿಯುತ್ತಿದೆ. ದಿನೇದಿನೆ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ. ಕೊಳಚೆ ನೀರಿನ ದುರ್ವಾಸನೆ ಪಟ್ಟಣ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸೊಳ್ಳೆಗಳ ಸಂತತಿ ವೃದ್ಧಿಯಾಗುತ್ತಿದೆ.
ಕೆ.ಆರ್.ಪೇಟೆಯವರೇ ಆಗಿದ್ದ ಎಂ.ಡಿ. ಕೃಷ್ಣಮೂರ್ತಿ ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಪಟ್ಟನದ ಒಳಚರಂಡಿ ವ್ಯವಸ್ಥೆಯನ್ನು ಉತ್ತಮಪಡಿಸಲು ಹಣ ಬಿಡುಗಡೆ ಭರವಸೆ ನೀಡಿದ್ದರು. ಆದರೆ, ಅದು ಭರವಸೆಯಾಗೇ ಉಳಿಯಿತೇ ವಿನಃ ನಯಾಪೈಸೆ ಹಣವೂ ಬಿಡುಗಡೆಯಾಗಿಲ್ಲ. ಕಾಮಗಾರಿಗೆ ಹಣವಿಲ್ಲದೆ ಅರ್ಧಕ್ಕೆ ಸ್ಥಗಿತಗೊಂಡಿದೆ.
ಪಟ್ಟಣದ ಒಳಚರಂಡಿ ನೀರನ್ನು ಸಂಸ್ಕರಣೆ ಮಾಡದೆ ನೇರವಾಗಿ ಹೊಸಹೊಳಲು ಕೆರೆಗೆ ಹರಿಸಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿರುವ ಕತ್ತರಘಟ್ಟ ಬಳಿ ಒಳಚರಂಡಿ ನೀರಿನ ಸಂಸ್ಕರಣಾ ಘಟಕ ಸ್ಥಾಪನೆಗೆ ಜಾಗ ಗುರುತಿಸಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಒಳಚರಂಡಿಯ ತ್ಯಾಜ್ಯ ನೀರು ಕೆರೆ ಸೇರುತ್ತಿರುವುದರಿಂದ ಕೆರೆಯೂ ಹಾಳಾಗುತ್ತಿದೆ ಎಂಬುದು ಸ್ಥಳೀಯ ನಾಗರಿಕರ ಆರೋಪವಾಗಿದೆ.
ರಸ್ತೆಗಳೂ ಉತ್ತಮವಾಗಿಲ್ಲ: ಪಟ್ಟಣದೊಳಗಿನ ರಸ್ತೆಗಳೂ ಉತ್ತಮವಾಗಿಲ್ಲ. ಪ್ರಮುಖ ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದು ಹಳ್ಳ-ಗುಂಡಿಗಳು ನಿರ್ಮಾಣಗೊಂಡಿವೆ. ಪಟ್ಟಣದ ಶೇ.30ರಷ್ಟು ರಸ್ತೆಗಳು ಇನ್ನೂ ಡಾಂಬರನ್ನೇ ಕಂಡಿಲ್ಲ. ಅಲ್ಲದೆ, ಬಡಾವಣೆಯ ಬಹುತೇಕ ರಸ್ತೆಗಳು ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೂ ಅನಾನುಕೂಲವಾಗಿದೆ. ವಿಶಾಲವಾದ ರಸ್ತೆಗಳೊಂದಿಗೆ ಬಡಾವಣೆಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕೂ ಪುರಸಭೆ ಮನಸ್ಸು ಕೊಟ್ಟಿಲ್ಲದಿರುವುದು ಕಂಡು ಬರುತ್ತಿದೆ.
ಕುಡಿವ ನೀರಿನ ಸಮಸ್ಯೆ: ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದೊಳಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಾರಿಗೊಳಿಸಿಲ್ಲ. ಈ ವೇಳೆಗೆ ಮೂರು ಹಂತದ ಕುಡಿಯುವ ನೀರಿನ ಯೋಜನೆ ಜಾರಿಯಾಗಬೇಕಿತ್ತು. ಆದರೆ, ಇನ್ನೂ ಒಂದು ಹಂತವಷ್ಟೇ ಪೂರ್ಣಗೊಂಡಿದೆ. ಪಟ್ಟಣದ ಜನರು ಕುಡಿಯುವ ನೀರಿಗೆ ಹೇಮಾವತಿ ನದಿ ನೀರನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದ ಹೇಮಾವತಿ ಬಡಾವಣೆ, ಅಗ್ರಹಾರ, ಅಂಬೇಡ್ಕರ್ ನಗರಗಳಿಗೆ ಕುಡಿಯುವ ನೀರಿನ ತೊಂಬೆಗಳ ಮೂಲಕ ಈಗಲೂ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುವುದು ಪಟ್ಟಣದ ಜನರು ಹೇಳುವ ಮಾತಾಗಿದೆ.
ಪಟ್ಟಣದೊಳಗೆ ಸ್ವಚ್ಛತೆ ಮಾಯವಾಗಿದೆ. ಕಸ ಎಲ್ಲೆಂದರಲ್ಲಿ ಬಿದ್ದಿದೆ. ಪೌರ ಕಾರ್ಮಿಕರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪುರಸಭೆಯಲ್ಲಿ ಮೂರು ರೀತಿಯ ಪೌರ ಕಾರ್ಮಿಕರಿದ್ದಾರೆ. ಕಾಯಂ, ಗುತ್ತಿಗೆ ಹಾಗೂ ಪುರಸಭೆಯಿಂದ ನೇಮಕ ಮಾಡಿಕೊಂಡಿರುವ ಗುತ್ತಿಗೆ ನೌಕರರು. ಕಾಯಂ ಪೌರ ಕಾರ್ಮಿಕರು ಬೆರಳೆಣಿಕೆಯಷ್ಟಿದ್ದು ಅವರೆಲ್ಲರಿಗೂ ವಯಸ್ಸಾಗಿದೆ. 21 ಮಂದಿ ಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳೂ ಸಂಬಳ ನೀಡುತ್ತಿಲ್ಲ. ಆರು ಅಥವಾ ಎಂಟು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಹಾಗಾಗಿ ಅವರು ಸ್ವಚ್ಛತೆ ಕಡೆ ಅಷ್ಟಾಗಿ ಗಮನಹರಿಸುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ.
ಪುರಸಭಾ ವ್ಯಾಪ್ತಿಯಲ್ಲಿರುವ ಮೂರು ಉದ್ಯಾನ ವನಗಳು ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಬೀದಿ ದೀಪಗಳು ಸಮರ್ಪಕವಾಗಿಲ್ಲ. ಪಟ್ಟಣ ಬೆಳವ ಣಿಗೆ ಕಾಣುತ್ತಿದ್ದರೂ ಅದಕ್ಕೆ ತಕ್ಕಂತೆ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಲಭ್ಯಗಳು ದೊರಕುತ್ತಿಲ್ಲ. ಅಭಿವೃದ್ಧಿ ಪಟ್ಟಣದೊಳಗೆ ಮರೀಚಿಕೆಯಾಗಿರುವ ಸಂದರ್ಭಚಿ ದಲ್ಲೇ ಪುರಸಭೆಗೆ ಚುನಾವಣೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ