ಸಮರ್ಪಕ ಬಳಕೆ ಆಗದ ಬೆಲ್ಲದ ಪಾರ್ಕ್
ಉತ್ಕೃಷ್ಟ ಬೆಲ್ಲ ತಯಾರಿಕೆಗೆ ಮಾಹಿತಿ ಪಡೆಯಲು ಹಿಂದೇಟು ! ಮಂಡ್ಯ ಬೆಲ್ಲ ಬ್ರ್ಯಾಂಡ್ಗೆ ಆಲೆಮನೆ ಮಾಲೀಕರ ಕಸರತ್ತು
Team Udayavani, Mar 19, 2021, 10:00 PM IST
ಮಂಡ್ಯ: ತಾಲೂಕಿನ ವಿ.ಸಿ.ಫಾರಂನಲ್ಲಿ ಬೆಲ್ಲ ತಯಾರಿಸುವ ಆಲೆಮನೆ ಮಾಲೀಕರಿಗೆ ರಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಉದ್ದೇಶದಿಂದ ಬೆಲ್ಲದ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಆದರೆ, ಇದರ ಸದ್ಭಳಕೆ ಸಮರ್ಪಕವಾಗಿ ಆಗದಿರುವುದು ದುರಂತ.
ಬೆಲ್ಲದ ಪಾರ್ಕ್ನಲ್ಲಿ ಬೆಲ್ಲ ತಯಾರಿಕೆಗೆ ಸೂಕ್ತವಾದ ಕಬ್ಬಿನ ತಳಿ, ಸಂಶೋಧನೆ, ರಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಹಾಗೂ ಆಲೆಮನೆಗಳಲ್ಲಿ ತಯಾರಾಗುವ ಬೆಲ್ಲ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಲು ಪ್ರಯೋ ಗಾಲಯದ ಸೌಲಭ್ಯಗಳಿವೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಲೆಮನೆಗಳು ಮುಂದಾಗುತ್ತಿಲ್ಲ.
ಗುಣಮಟ್ಟ ಪರೀಕ್ಷೆ: ಆಲೆಮನೆಗಳಲ್ಲಿ ತಯಾರಾಗುವ ಬೆಲ್ಲವನ್ನು ಪ್ರಾಥಮಿಕವಾಗಿ ಪರೀಕ್ಷೆ ನಡೆಸುವ ಎಲ್ಲ ರೀತಿಯ ಸೌಲಭ್ಯವಿದೆ. ಬೆಲ್ಲದಲ್ಲಿ ಸಿಹಿ ಅಂಶ, ಸೇವಿಸಲು ಯೋಗ್ಯದ ಬಗ್ಗೆ, ಸುಕ್ರೋಸ್ ಬೂದಿ ಅಂಶ, ಬ್ರಿಕ್ಸ್ ಎಂಬ ಪರೀಕ್ಷೆಯಲ್ಲಿ ತೇವಾಂಶ ಹಾಗೂ ಸಕ್ಕರೆ ಅಂಶದ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡಲಾಗುವುದು. ಆದರೆ, ಇಲ್ಲಿಗೆ ಯಾವ ಆಲೆಮನೆ ಮಾಲೀಕರು ಬೆಲ್ಲದ ಪರೀಕ್ಷೆಗೆ ಮುಂದಾಗುತ್ತಿಲ್ಲ.
ಬೆಲ್ಲದಲ್ಲಿ ರಸಾಯನಿಕ ಪತ್ತೆ ಸೌಲಭ್ಯವಿಲ್ಲ:
ಬೆಲ್ಲದಲ್ಲಿ ರಸಾಯನಿಕ ಅಂಶ ಬಳಸಲಾಗುತ್ತಿದೆಯೇ ಎಂಬುದರ ಬಗ್ಗೆ ಪತ್ತೆ ಹಚ್ಚುವ ಸೌಲಭ್ಯವಿಲ್ಲ. ರಸಾಯನಿಕ ಪತ್ತೆ ಪ್ರಯೋಗಾಲಯಕ್ಕೆ ಲಕ್ಷಾಂತರ ರೂ. ಖರ್ಚಾಗಲಿದೆ. ಆದರೆ, ಬೆಲ್ಲವನ್ನು ರಸಾಯನಿಕ ಬಳಸದೇ ಗೋಲ್ಡನ್ ಕಲರ್ ರೀತಿಯಲ್ಲಿ ತಯಾರಿಸುವ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ಪ್ರಮಾಣ ಪತ್ರಕ್ಕಾಗಿ ಬಳಕೆ:
ಕೆಲವು ಆಲೆಮನೆ ಮಾಲೀಕರು ತಯಾರಿಸಿದ ಬೆಲ್ಲವನ್ನು ಹೊರ ಜಿಲ್ಲೆ, ರಾಜ್ಯಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ ಇಲ್ಲಿ ಪರೀಕ್ಷೆ ಮಾಡಿಸಿ ಪ್ರಮಾಣ ಪತ್ರ ಪಡೆದು ಬೆಲ್ಲದ ಲೇಬಲ್ಗೆ ಹಾಗೂ ಮಾರುಕಟ್ಟೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಕಬ್ಬು ತಳಿ ವಿಜ್ಞಾನಿ ಎಂ.ಎಸ್.ಸ್ವಾಮಿಗೌಡ.
ಬೆಲ್ಲ ತಯಾರಿಕೆಗೆ ಉತ್ತಮ ಕಬ್ಬಿನ ತಳಿ ಸಂಶೋಧನೆ
ಬೆಲ್ಲ ತಯಾರಿಕೆಗೆ ಉತ್ತಮ ಕಬ್ಬಿನ ತಳಿಗಳ ಸಂಶೋಧನೆ ಮಾಡಲಾಗಿದೆ. ಆದರೆ, ರೈತರಿಗೆ ಇದರ ಬಗ್ಗೆ ಅರಿವಿನ ಕೊರತೆ ಹೆಚ್ಚಿದೆ. ಬೆಲ್ಲ ತಯಾರಿಕೆಗೆ ಬೇಕಾದ ಸಿಹಿ ಅಂಶದ ಕಬ್ಬಿನ ತಳಿಗಳು ವಿ.ಸಿ.ಫಾರಂನಲ್ಲಿವೆ. ರಸಾಯನಿಕ ಗೊಬ್ಬರ ಬಳಸದೆ ಉತ್ತಮ ಇಳುವರಿ ಪಡೆಯುವ ಕಬ್ಬಿನ ತಳಿಗಳು ಇಲ್ಲಿ ಸಿಗಲಿವೆ. ಅಲ್ಲದೆ ಬೆಳೆಯುವ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ರಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಹಾಗೂ ಬೆಲ್ಲ ತಯಾರಿಕೆಗೆ ಬೇಕಾದ ಕಬ್ಬಿನ ತಳಿಗಳನ್ನು ಸಂಶೋಧನೆ ಮಾಡಲಾಗುತ್ತಿದೆ. ಇದರ ಬಗ್ಗೆ ಸಾಕಷ್ಟು ಆಲೆಮನೆ ಮಾಲೀಕರಿಗೆ ತರಬೇತಿ, ಕಾರ್ಯಾಗಾರ ನಡೆಸಲಾಗಿದೆ. ನಮ್ಮ ಸಂಸ್ಥೆಯಿಂದ ಬೆಲ್ಲ ತಯಾರಿಕೆ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಕೆಲವರು ರಸಾಯನಿಕ ಬಳಕೆ ಮಾಡಿ ಬೆಲ್ಲ ತಯಾರಿಸುತ್ತಿರುವುದರಿಂದ ಮಂಡ್ಯ ಬೆಲ್ಲ ಬ್ರ್ಯಾಂಡ್ಗೆ ತೊಂದರೆಯಾಗುತ್ತಿದೆ. ಆತ್ಮನಿರ್ಭರ್ ಭಾರತ್ಗೆ ಬೆಲ್ಲ ಆಯ್ಕೆಯಾಗಿದ್ದು, ಅದರ ಹಿನ್ನೆಲೆ ಸಾವಯವ ಬೆಲ್ಲ ತಯಾರಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. (ಡಾ.ಎಸ್.ಎನ್.ಸ್ವಾಮಿಗೌಡ, ಕಬ್ಬು ತಳಿ ವಿಜ್ಞಾನಿ ಮಂಡ್ಯ )
ಬೆಲ್ಲದ ಪಾರ್ಕ್ ಬಳಕೆ ಮಾಡಿಕೊಳ್ಳದ ಆಲೆಮನೆಗಳು
ಬೇರೆ ರಾಜ್ಯದಿಂದ ಕಳಪೆ ಗುಣಮಟ್ಟದ ಬೆಲ್ಲ ತರಿಸಿ ಅದಕ್ಕೆ ಸಕ್ಕರೆ, ರಸಾಯನಿಕ ಬೆರೆಸಿ ಬೆಲ್ಲ ತಯಾರಿಸುವ ಮೂಲಕ ಮಂಡ್ಯ ಬೆಲ್ಲ ಬ್ರ್ಯಾಂಡ್ ಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿರುವ ಹಿನ್ನೆಲೆ ಕಳಪೆ ಗುಣಮಟ್ಟ ಬೆಲ್ಲ ತಯಾರಿಸುತ್ತಿದ್ದ ಆಲೆಮನೆಗಳಿಗೆ ಬೀಗ ಜಡಿಯಲಾಗುತ್ತಿದೆ. ಆಲೆಮನೆಗಳ ಮಾಲೀಕರು ಬೆಲ್ಲದ ಪಾರ್ಕ್ನಲ್ಲಿ ಕಬ್ಬು ಟನ್ಗೆ ಉತ್ತಮ ಸಾವಯವ ಬೆಲ್ಲದ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ, ಮಾಹಿತಿ ಪಡೆಯಲು ಹೆಚ್ಚು ಆಲೆಮನೆ ಮುಂದಾಗುತ್ತಿಲ್ಲ.
ಅರಿವಿನ ಕೊರತೆ
ರಸಾಯನಿಕ ಮುಕ್ತ ಬೆಲ್ಲ ತಯಾರಿಸುವ ಹಾಗೂ ಉತ್ತಮ ಕಬ್ಬಿನ ತಳಿ ಪರಿಚಯಿಸಲಾಗುತ್ತದೆ. ಆದರೆ, ಇದರ ಬಗ್ಗೆ ರೈತರಿಗೆ ಅರಿವಿನ ಕೊರತೆ ಇದೆ. ದಕ್ಷಿಣ ಕರ್ನಾಟಕ ಭಾಗಕ್ಕೆ ಒಬ್ಬರೇ ಕಬ್ಬು ತಳಿ ಸಂಶೋಧಕರಿದ್ದಾರೆ. ವಿ.ಸಿ.ಫಾರಂನಲ್ಲಿ ಎಲ್ಲ ತಾಲೂಕಿನ ಕೃಷಿ ಅ ಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅದನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಲು ಕೃಷಿ ಇಲಾಖೆ ವಿಫಲವಾಗುತ್ತಿದೆ.
ಖಾಸಗಿಯವರಿಗೆ ಟೆಂಡರ್
ವಿ.ಸಿ.ಫಾರಂನಲ್ಲಿರುವ ಬೆಲ್ಲದ ಪಾರ್ಕ್ನ್ನು ಸರ್ಕಾರದ ನಿರ್ದೇಶನದಂತೆ ಖಾಸಗಿಯವರಿಗೆ ಟೆಂಡರ್ ನೀಡಲಾಗುತ್ತಿದೆ. ಟೆಂಡರ್ ತೆಗೆದುಕೊಂಡವರು ಸಮರ್ಪಕವಾಗಿ ನಡೆಸುತ್ತಿಲ್ಲ. ಇದರಿಂದ ಅಲ್ಲಿ ಬೆಲ್ಲದ ತಯಾರಿಕೆ ಪ್ರಸ್ತುತ ನಿಲ್ಲಿಸಲಾಗಿದೆ. ಆದ್ದರಿಂದ ವಿ.ಸಿ.ಫಾರಂನ ಮೂಲಕವೇ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಹಲವರು ಟೆಂಡರ್ ಪಡೆದು ಸಾವಯವ ಬೆಲ್ಲ ತಯಾರಿಸಿದ್ದಾರೆ.
ಎಚ್.ಶಿವರಾಜು