ಬಗೆಹರಿಯದ ವಿವಿ ವಿದ್ಯಾರ್ಥಿಗಳ ಸಮಸ್ಯೆ
ವರ್ಷ ಕಳೆದರೂ ಪ್ರಕಟವಾಗದ ಫಲಿತಾಂಶ,ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳ ಪರದಾಟ
Team Udayavani, Jan 5, 2021, 5:19 PM IST
ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳನ್ನು ನೇಮಕ ಮಾಡಿದ್ದರೂ ವಿವಿ ವಿದ್ಯಾರ್ಥಿಗಳ ಸಮಸ್ಯೆ ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. 2019ರಲ್ಲಿ ವಿಶ್ವವಿದ್ಯಾಲಯದಡಿ ಪ್ರವೇಶಾತಿ ಪಡೆದಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇನ್ನೂ ಸಂಕಷ್ಟ ಅನುಭವಿಸುವಂತಾಗಿದೆ.
ಸರ್ಕಾರ ಹಾಗೂ ಆಡಳಿತ ಮಂಡಳಿಯ ನಡುವಿನ ಗೊಂದಲದಿಂದ ವಿವಿಯಡಿ ಪ್ರವೇಶಾತಿ ಪಡೆದಿದ್ದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಥಮ ವರ್ಷದ ಮೊದಲ ಹಾಗೂ ದ್ವಿತೀಯಸೆಮಿಸ್ಟರ್ ಫಲಿತಾಂಶ ಬಿಡುಗಡೆ ಮಾಡಿಲ್ಲ. ಇತ್ತ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಫಲಿತಾಂಶ ಬಿಡುಗಡೆ ಮಾಡಿದ್ದರೂ, ಅಂಕಪಟ್ಟಿ ವಿತರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
2019ರಲ್ಲಿ ನಡೆದಿದ್ದ ಪರೀಕ್ಷೆ: 2019ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮೊದಲ ಸೆಮಿಸ್ಟರ್ಪರೀಕ್ಷೆ ನಡೆದಿತ್ತು. ಒಂದು ವರ್ಷ ಕಳೆದರೂ ಇನ್ನೂ ಫಲಿತಾಂಶ ಬಿಡುಗಡೆ ಮಾಡಿಲ್ಲ. ಎರಡನೇಸೆಮಿಸ್ಟರ್ ಪರೀಕ್ಷೆಯು ಕೋವಿಡ್ ದಿಂದ ನಡೆಯಲಿಲ್ಲ. ಇದರಿಂದ ಸರ್ಕಾರ ದ್ವಿತೀಯ ವರ್ಷಕ್ಕೆ ಪ್ರಮೋಟ್ ಮಾಡಿದೆ. ಅದಕ್ಕೂ ಪ್ರಾಜೆಕ್ಟ್ ಸಲ್ಲಿಸಲಾಗಿತ್ತು. ಆದರೂ, ಇದುವರೆಗೂ ಅಂಕಪಟ್ಟಿ ನೀಡಿಲ್ಲ.
ದ್ವಿತೀಯ ವರ್ಷಕ್ಕೆ ದಾಖಲಾತಿ: ಮೊದಲ ವರ್ಷದ ಸೆಮಿಸ್ಟರ್ಗಳ ಫಲಿತಾಂಶ ಇನ್ನೂ ಬಿಡುಗಡೆಮಾಡಿಲ್ಲ. ಆದರೂ 2ನೇ ವರ್ಷಕ್ಕೆ ದಾಖಲಾತಿ ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಮೊದಲ ವರ್ಷಕ್ಕೆವಿವಿಯಡಿಯಲ್ಲಿಯೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿ ವೇತನ ಪಡೆಯಲು ತೊಂದರೆ: ಮೊದಲ ವರ್ಷದ ಸೆಮಿಸ್ಟರ್ಗಳ ಫಲಿತಾಂಶ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿ ವೇತನ ಪಡೆಯಲು ಅಂಕಪಟ್ಟಿ ಬೇಕಾಗಿರುವುದರಿಂದ ವಿದ್ಯಾರ್ಥಿ ವೇತನದಿಂದ ವಂಚಿತರಾಗ ಬೇಕಾಗಿದೆ. ಈಗಾಗಲೇ ಹಲವಾರು ಕಂಪನಿಗಳು ಆನ್ಲೈನ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದ್ದವು. ಕಳೆದ ಡಿಸೆಂಬರ್ 31ಕ್ಕೆ ಕೊನೆ ದಿನಾಂಕ ನಿಗದಿಯಾಗಿತ್ತು. ಆದರೆ, ಅಂಕಪಟ್ಟಿ ಇಲ್ಲದೆಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈಗ ಮತ್ತೂಂದು ಕಂಪನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಜ.11ಕ್ಕೆ ಕೊನೆ ದಿನವಾಗಿದೆ. ಅಷ್ಟರಲ್ಲಿ ಫಲಿತಾಂಶಪ್ರಕಟ ಮಾಡಿ, ಅಂಕಪಟ್ಟಿ ನೀಡಿದರೆ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಬಡ ವಿದ್ಯಾರ್ಥಿಗಳೇ ಹೆಚ್ಚು: ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ವಿಶ್ವ ವಿದ್ಯಾಲಯವಾಗಿ ಮೇಲ್ದರ್ಜೆಗೇರಿದ ಬಳಿಕ ಜಿಲ್ಲೆಯ ಬಡ ವಿದ್ಯಾರ್ಥಿಗಳು ತುಂಬಾ ಖುಷಿಪಟ್ಟಿದ್ದರು. ವಿವಿಯಡಿ ವಿದ್ಯಾಭ್ಯಾಸ ಮಾಡಿದರೆ ಮುಂದಿನಭವಿಷ್ಯ ಉತ್ತಮಗೊಳ್ಳಲಿದೆ ಎಂದು ಕನಸು ಕಟ್ಟಿಕೊಂಡಿದ್ದರು. ಎಲ್ಲದಕ್ಕೂ ಮೈಸೂರು ವಿವಿಗೆ ಹೋಗಿಬರಬೇಕಿತ್ತು. ಇದಕ್ಕಾಗಿ ಎಷ್ಟೋ ವಿದ್ಯಾರ್ಥಿಗಳುತರಗತಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ವಿವಿ ಆಗಿದ್ದರಿಂದ 2019ರಲ್ಲಿ ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರು
ಗೊಂದಲದಲ್ಲೇ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು : 2019ರಲ್ಲಿ ಮೊದಲ ವರ್ಷಕ್ಕೆ ವಿವಿಯಡಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳು ಪರೀಕ್ಷೆಗೂ ತೊಂದರೆ ಅನುಭವಿಸುವಂತಾಗಿತ್ತು.ವಿಶೇಷಾಧಿಕಾರಿ ಹಾಗೂ ಆಡಳಿತ ಮಂಡಳಿಯಬಣ ರಾಜಕೀಯ, ಮುಸುಕಿನ ಗುದ್ದಾಟದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು.
ವಿವಿಯಡಿ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿ ಗಳಿಗೆ ಸ್ವಾಯತ್ತದಡಿ ಪರೀಕ್ಷೆ ಬರೆಯುವಂತೆ 2020ರ ಜನವರಿಯಲ್ಲಿ ಸೂಚಿಸಲಾಗಿತ್ತು. ಇದರಿಂದ ಮುಂದೆ ಶೈಕ್ಷಣಿಕವಾಗಿತೊಂದರೆಯಾಗಲಿದೆ ಎಂಬುದನ್ನು ಅರಿತವಿದ್ಯಾರ್ಥಿಗಳು ಸುಮಾರು 15 ದಿನಗಳ ಕಾಲಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದ ಬಳಿವಿವಿಯಡಿಯಲ್ಲಿಯೇ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈಗ ಮತ್ತೆಫಲಿತಾಂಶಕ್ಕಾಗಿ ಪ್ರತಿಭಟನೆ ಅನಿವಾರ್ಯ ವಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಿಗೆ ಆನ್ಲೈನ್: ವಿಶ್ವವಿದ್ಯಾಲ ಯದಡಿ 2020ರಲ್ಲಿ ಪ್ರವೇಶಾತಿ ಪಡೆದಿರುವ ಪ್ರಥಮ ಹಾಗೂ ದ್ವಿತೀಯ ವರ್ಷದವಿದ್ಯಾರ್ಥಿಗಳಿಗೆ ಡಿಸೆಂಬರ್ನಿಂದ ಆನ್ಲೈನ್ತರಗತಿ ಪ್ರಾರಂಭವಾಗಿದೆ. ಅಂತಿಮವರ್ಷದ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿಗಳು ನಡೆಯುತ್ತಿವೆ.
ಪ್ರಥಮ ವರ್ಷದ 2 ಸೆಮಿಸ್ಟರ್ ಪರೀಕ್ಷೆ ಗಳ ಫಲಿತಾಂಶ ಪ್ರಕಟ ಮಾಡಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದಂತಾಗಿದೆ. ವಿವಿಧ ಕಂಪನಿಗಳು20ರಿಂದ 30 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡುತ್ತವೆ. ಆದರೆ, ಪ್ರಥಮ ವರ್ಷದ ಅಂಕಪಟ್ಟಿ ಇಲ್ಲದೆ, ದ್ವಿತೀಯ ವರ್ಷಕ್ಕೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಕಾಲೇಜಿಗೆ ಬರುವವರೆಲ್ಲ ತುಂಬಾ ಬಡವಿದ್ಯಾರ್ಥಿಗಳಾಗಿದ್ದಾರೆ. ಮುಂದೆ ಏನು ಮಾಡುವುದು ಎಂಬುದು ತೋಚುತ್ತಿಲ್ಲ. – ಹೆಸರೇಳದ ಬಿಸಿಎ ವಿದ್ಯಾರ್ಥಿನಿ
ಸ್ನಾತಕ ಹಾಗೂ ಸ್ನಾತಕೋತ್ತರ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮೊದಲ ಹಾಗೂ ಎರಡನೇ ಸೆಮಿಸ್ಟರ್ಗಳ ಪರೀಕ್ಷೆಯಫಲಿತಾಂಶ ಬಿಡುಗಡೆ ಮಾಡಿಲ್ಲ. ಇತ್ತ ದ್ವಿತೀಯ ವರ್ಷದಿದ ಅಂತಿಮ ವರ್ಷಕ್ಕೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳ ಫಲಿತಾಂಶಬಿಡುಗಡೆ ಮಾಡಿದ್ದರೂ ಅಂಕಪಟ್ಟಿ ವಿತರಿಸಿಲ್ಲಈಗಾಗಲೇ ಸರ್ಕಾರವು ಸಹ ಫಲಿತಾಂಶ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.ಆದರೂ ಪ್ರಕಟ ಮಾಡಿಲ್ಲ. ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ. – ಹೆಸರೇಳದ ಎಂಎಸ್ಸಿ ವಿದ್ಯಾರ್ಥಿ
ವಿಶ್ವವಿದ್ಯಾಲಯವಾಗಿ ಮಾನ್ಯತೆ ಪಡೆದ ನಂತರ ಯಾವುದೇ ನಿಯ ಮಾವಳಿಗಳನ್ನು ಹಾಕಿಲ್ಲ. ಬದಲಾಗಿ ಮೈಸೂರು ವಿವಿಯ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿತ್ತು. ಆದರೆ,ಹಿಂದೆ ಇದ್ದವರು ಇದನ್ನು ಪಾಲಿಸದ ಪರಿಣಾಮ ಗೊಂದಲ ಉಂಟಾಗಿದೆ. ಇದರಿಂದ ಕಳೆದ ಒಂದು ವಾರದಿಂದ ಫಲಿತಾಂಶ ಪ್ರಕಟ ಮಾಡಲು ಹರಸಾಹಸಪಡಲಾಗುತ್ತಿದೆ. ಎಲ್ಲ ವಿಭಾಗದ ಮುಖ್ಯಸ್ಥರ ಸಭೆ ಕರೆದು ಇನ್ನೊಂದು ವಾರದಲ್ಲಿ ಫಲಿತಾಂಶ ಪ್ರಕಟ ಮಾಡಲು ಕ್ರಮ ವಹಿಸಲಾಗುವುದು.– ಡಾ.ಪುಟ್ಟರಾಜು, ಕುಲಪತಿ, ವಿಶ್ವವಿದ್ಯಾಲಯ ಮಂಡ್ಯ
–ಎಚ್.ಶಿವರಾಜು