ಮೆಗಾ ಫುಡ್ ಪಾರ್ಕ್ ರೈತರಿಗೆ ಸಹಕಾರಿ; ಜಲ ಶಕ್ತಿ ಸಚಿವ ಪ್ರಹ್ಲಾದ್ ಸಿಂಗ್
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರಾಟವಾಗುವಂತೆ ಶ್ರಮಿಸಬೇಕಿದೆ
Team Udayavani, Apr 14, 2022, 6:21 PM IST
ಕೆ.ಆರ್.ಪೇಟೆ: ಮೆಗಾ ಫುಡ್ ಪಾರ್ಕ್ನಲ್ಲಿ ಸ್ಥಾಪಿತವಾಗುವ ಆಹಾರ ಸಂಸ್ಕರಣ ಘಟಕಗಳು ರೈತರಿಗೆ ಹೆಚ್ಚು ಸಹಕಾರಿ ಎಂದು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ, ಕೈಗಾರಿಕೆ ಮತ್ತು ಜಲ ಶಕ್ತಿ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದರು.
ತಾಲೂಕಿನ ಬಣ್ಣೇನಹಳ್ಳಿ ಗ್ರಾಮದ ಮೆಗಾ ಫುಡ್ ಪಾರ್ಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಾರಂಭ ಪ್ರಾರಂಭಕ್ಕೂ ಮುನ್ನ ವೇದಿಕೆ ಮುಂಭಾಗದಲ್ಲಿದ್ದ ರೈತರೊಂದಿಗೆ ಚರ್ಚೆ ನಡೆಸಿದರು. ಅವರ ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಹಾಗೂ ಮೆಗಾ ಫುಡ್ಪಾರ್ಕ್ನ ಮುಖ್ಯಸ್ಥರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಚಿಂತಿಸುತ್ತಿದೆ: ರೈತರು ಬೆಳೆದ ತರಕಾರಿ ಮತ್ತು ಹೂವು ಕೆಲವೇ ದಿನಗಳಲ್ಲಿ ಕೊಳೆತುಹೋಗುವುದರಿಂದ ಅವು ಗಳಿಗೆ ಕೋಲ್ಡ್ ಸ್ಟೋರೇಜ್ ಅಥವಾ ಸಂಸ್ಕರಣೆ ವ್ಯವಸ್ಥೆ ಒದಗಿಸಿದರೆ ಹೆಚ್ಚಿನ ದಿನ ಸಂರಕ್ಷಿಸಿ ತಾಜಾತನ ನೀಡಬಹುದು. ರೈತರಿಗೆ ಹಾಗೂ ಮಾರಾಟಗಾರರಿಗೆ ಉಪಯೋಗವಾಗಲಿದೆ. ಇದೇ ಮೆಗಾ ಫುಡ್ಪಾರ್ಕ್ ನ ಉದ್ದೇಶ. ಅಲ್ಲದೇ, ಕರ್ನಾಟಕ ಸರ್ಕಾರ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮಿನಿ ಫುಡ್ ಪಾರ್ಕ್ ಪ್ರಾರಂಭಿಸಲು ಚಿಂತಿಸುತ್ತಿದೆ ಎಂದರು.
ಶ್ರಮಿಸಿ: ಮೆಗಾ ಫುಡ್ ಪಾರ್ಕ್ನಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳು ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಭಾರತ ದೇಶದಲ್ಲಿ ರೈತರು ಬೆಳೆಯುವ ಬೆಳೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರಾಟವಾಗುವಂತೆ ಶ್ರಮಿಸಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಕೆ.ಆರ್. ಪೇಟೆ ತಹಶೀಲ್ದಾರ್ ಎಂ.ವಿ.ರೂಪಾ, ಫುಡ್ ಪಾರ್ಕ್ ಆಫ್ ಫೆವರಿಚ್ ಇನಾ#† ಪ್ರೈ.ಲಿ ನ ನಿರ್ದೇಶಕ ರಾದ ಸಿ. ಜಯದೇವ ನಾಯ್ಡು, ಕೆ.ರವಿ, ಉಪಾಧ್ಯಕ್ಷ ರಾದ ದಯಾನಂದ ಕುಮಾರ್, ಫುಡ್ ಕರ್ನಾಟಕ ಲಿಮಿಟೆಡ್ನ ನಿರ್ದೇಶಕರಾದ ಮಹಮದ್ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಯೋಗಕ್ಕೆ ಸ್ಥಳೀಯರ ಮನವಿ: ಕೇಂದ್ರ ಸಚಿವ ಪಹ್ಲಾದ್ ಸಿಂಗ್ ಪಟೇಲ್ ಅವರು ಕೆ.ಆರ್.ಪೇಟೆ ತಾಲೂಕಿನ ಬಣ್ಣೇನ ಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಬಣ್ಣೇನಹಳ್ಳಿ ಗ್ರಾಮದ ಮುಖಂಡರಾದ ಬಿ.ಜೆ.ಶ್ರೀನಿವಾಸ್ ನೇತೃತ್ವದಲ್ಲಿ ನೂರಾರು ರೈತರು ಫುಡ್ ಪಾರ್ಕಿಗೆ ನಾವು ಬೇಸಾಯ ಮಾಡುತ್ತಿದ್ದ ಭೂಮಿ ನೀಡಿದ್ದೇವೆ. ನಮ್ಮ ಗ್ರಾಮದ ನಿರುದ್ಯೋಗಿಗಳಿಗೆ ಫುಡ್ಪಾರ್ಕ್ ಕಂಪನಿಗಳಲ್ಲಿ ಉದ್ಯೋಗ ನೀಡ ಬೇಕು. ಎಲ್ಲಾ ಹುದ್ದೆಗಳನ್ನು ನಮ್ಮ ಗ್ರಾಮಕ್ಕೆ ಹಾಗೂ ತಾಲೂಕಿನ ನಿರುದ್ಯೋಗಿಗಳಿಗೇ ಮಾತ್ರ ನೀಡುವಂತೆ ಆದೇಶ ನೀಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು.
ಸಚಿವರ ನಿವಾಸಕ್ಕೆ ಭೇಟಿ: ಈ ಮುನ್ನ ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ನಗರದ ಸಚಿವ ನಾರಾಯಣ ಗೌಡರ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿ ಕಾರ್ಯಕರ್ತ ರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ನಾರಾಯಣ ಗೌಡರು ತಾಲೂಕಿನ ಪರವಾಗಿ ಸನ್ಮಾನಿಸಿ ಗೌರವಿಸಿದರು.