ಮಂಡ್ಯ: ಮೇಲುಕೋಟೆ ವೈರಮುಡಿ ಉತ್ಸವ; ಜಿಲ್ಲಾ ಖಜಾನೆಯಿಂದ ಆಭರಣ ರವಾನೆ
Team Udayavani, Mar 24, 2021, 9:51 AM IST
ಮಂಡ್ಯ: ಮೇಲುಕೋಟೆ ವೈರಮುಡಿ ಉತ್ಸವ ಹಿನ್ನಲೆಯಲ್ಲಿ ಬಿಗಿಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ವಜ್ರಖಚಿತ ಕಿರೀಟ ರವಾನೆಯಾಯಿತು.
ಇಂದು ಬೆಳಿಗ್ಗೆ ನಗರದ ಜಿಲ್ಲಾ ಖಜಾನೆಯಲ್ಲಿದ್ದ ಚೆಲುವನಾರಾಯಣಸ್ವಾಮಿಯ ಆಭರಣಗಳನ್ನು ಡಿಸಿ ಎಸ್.ಅಶ್ವಥಿ ನೇತೃತ್ವದಲ್ಲಿ ತೆಗೆದು ವಿಶೇಷ ಪೂಜೆ ಸಲ್ಲಿಸಿ ನಂತರ ನಗರದ ಲಕ್ಷ್ಮೀಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.
ರಸ್ತೆಯುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಆಭರಣಕ್ಕೆ ನಮಿಸಲು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಇಂದು ರಾತ್ರಿ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳ ಪರ್ಕಾವಣೆ ನಡೆಸಿ ಚೆಲುವನಾರಾಯಣ ಸ್ವಾಮಿಗೆ ತೊಡಿಸಿ ವೈರಮುಡಿ ಉತ್ಸವ ನಡೆಯಲಿದೆ.
ಇದನ್ನೂ ಓದಿ: ಮಾ.24ಕ್ಕೆ ಮೇಲುಕೋಟೆ ವೈರಮುಡಿ ಸರಳ ಉತ್ಸವ : ನೇರ ಪ್ರಸಾರ ವೀಕ್ಷಣೆಗೆ ಇಲ್ಲಿದೆ ಮಾಹಿತಿ
ಯುಟ್ಯೂಬ್ನಲ್ಲಿ ವೀಕ್ಷಣೆ:
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿರುವುದರಿಂದ ಹೊರಗಿನ ಭಕ್ತರಿಗೆ ಮೇಲುಕೋಟೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಉತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳಲು ಯುಟ್ಯೂಬ್, ಜಿಲ್ಲಾಧಿಕಾರಿ ವೆಬ್ಸೈಟ್ ಹಾಗೂ ಫೇಸ್ಬುಕ್ನಲ್ಲಿ ನೇರ ಪ್ರಸಾರವಾಗಲಿದೆ.
ಪೊಲೀಸ್ ಬಂದೋಬಸ್ತ್:
ಉತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, 4 ಡಿವೈಎಸ್ಪಿ, 16 ಸಿಪಿಐ, 31 ಪಿಎಸ್ಐ, 100 ಎಸ್ಐ, 432 ಪಿಸಿ, 2 ಕೆಎಸ್ಆರ್ಪಿ ತುಕಡಿ, 9 ಡಿಎಆರ್, 2 ಕ್ಯೂಆರ್ಟಿ ತಂಡವನ್ನು ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.