30 ನಿಮಿಷದಲ್ಲಿ 3.5 ಕೆ.ಜಿ.ರಾಗಿ ಮುದ್ದೆ ತಿಂದ ಶಿವಲಿಂಗುಗೆ ಬಹುಮಾನ
Team Udayavani, Jun 27, 2022, 3:56 PM IST
ಮಳವಳ್ಳಿ: ಗ್ರಾಮೀಣ ಕ್ರೀಡೆಗಳೇ ನಶಿಸಿ ಹೋಗುತ್ತಿರುವ ದಿನಮಾನಗಳಲ್ಲಿ ರಾಗಿಮುದ್ದೆ ಊಟದ ಸ್ಪರ್ಧೆಯಂಥ ಕ್ರೀಡೆಗಳಿಂದ ಜನರ ಮನಸ್ಸಿನಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕೆಂಬ ಆಸಕ್ತಿ ಮೂಡಲಿದೆ ಎಂದು ಪುರಸಭೆ ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್ ಅಭಿಪ್ರಾಯಪಟ್ಟರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ರಾಗಿಮುದ್ದೆ ಊಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪ್ರೋತ್ಸಾಹಿಸಿ: ಕಬಡ್ಡಿ, ಎತ್ತಿನಗಾಡಿ ಸ್ಪರ್ಧೆ, ಕೆಸರುಗದ್ದೆ ಓಟದಂತಹ ಗ್ರಾಮೀಣ ಕ್ರೀಡೆಗಳ ಜತೆಗೆ ಇದೀಗ ನಾಟಿಕೋಳಿ ಸಾರು-ರಾಗಿಮುದ್ದೆ ಊಟದ ಸ್ಪರ್ಧೆಯೂ ಸೇರ್ಪಡೆಗೊಳ್ಳು ತ್ತಿರುವ ಸಂತಸ ತಂದಿದೆ. ಇಂತಹ ಸ್ಪರ್ಧೆಗಳನ್ನು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
20ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ: ಜಿಲ್ಲೆಯ ವಿವಿಧೆಡೆಯಿಂದ 20ಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು. ಪುರಸಭೆ ಸದಸ್ಯ ಕುಮಾರ್, ಮಾಜಿ ಅಧ್ಯಕ್ಷ ದೊಡ್ಡಯ್ಯ, ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಜಯಕರ್ನಾಟಕ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ರವಿಕುಮಾರ್, ತಾಲೂಕು ಘಟಕದ ಅಧ್ಯಕ್ಷ ಎಂ.ಪಿ.ನಾಗೇಶ್, ಒಕ್ಕಲಿಗರ ಸಂಘದ ತಾಲೂಕು ಘಟಕದ ನಿರ್ದೇಶಕಿ ಜಯಮ್ಮ, ಮುಖಂಡರಾದ ನಾಗರಾಜು, ರಾಜ್ ಕುಮಾರ್, ಬಾಲು, ರಾಜಣ್ಣ, ರಮೇಶ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬಹುಮಾನ ವಿಜೇತರ : ಸ್ಪರ್ಧೆಯಲ್ಲಿ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಶಿವಲಿಂಗು 30 ನಿಮಿಷಗಳಲ್ಲಿ 7 ಮುದ್ದೆ (3.5ಕೆಜಿ) ಊಟ ಮಾಡುವ ಮೂಲಕ ಪ್ರಥಮ ಸ್ಥಾನಗಳಿಸಿ 9 ಸಾವಿರ ರೂ. ನಗದು ಹಣ ಹಾಗೂ ನೆನಪಿನ ಕಾಣಿಕೆ ತಮ್ಮದಾಗಿಸಿಕೊಂಡರು. ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ರಾಜಶೇಖರ್ 6 ಮುದ್ದೆ(2.72ಕೆ.ಜಿ.) ಸವಿದು 6 ಸಾವಿರ ರೂ. ನಗದು ಹಾಗೂ ತಾಲೂಕಿನ ರಾಮನಾಥಮೊಳೆ ಗ್ರಾಮದ ಶಿವು 5 ಮುದ್ದೆ(2.5ಕೆ.ಜಿ.) ಊಟ ಮಾಡಿ 3 ನಗದು ರೂ.ಬಹುಮಾನ ಪಡೆದುಕೊಂಡರು.