ಮಂಡ್ಯದಲ್ಲಿ ಸ್ವಂತ ಮನೆಗೆ ಸುಮಲತಾ ಆಲೋಚನೆ
Team Udayavani, Feb 26, 2019, 12:45 AM IST
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಸುಮಲತಾ, ಮಂಡ್ಯದಲ್ಲಿ ಸ್ವಂತ ಮನೆ ಮಾಡುವ ಆಲೋಚನೆಯಲ್ಲಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್ ಟಿಕೆಟ್ ಬಯಸಿರುವ ಸುಮಲತಾ ಒಮ್ಮೆ ಪಕ್ಷದ ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದಕ್ಕೆ ನಿಶ್ಚಯಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ಮಂಡ್ಯದಲ್ಲಿ ಮನೆಯೊಂದನ್ನು ಹುಡುಕುವಂತೆ ತಿಳಿಸಿದ್ದಾರೆಂದು ಹೇಳಲಾಗಿದೆ.
ಮಂಡ್ಯ ನಗರದಲ್ಲಿ ಬಾಡಿಗೆ ಮನೆ ಮಾಡುವುದಕ್ಕೆ ಅಷ್ಟಾಗಿ ಒಲವು ತೋರುತ್ತಿಲ್ಲದ ಸುಮಲತಾ, ಆದಷ್ಟು ಸ್ವಂತ ಮನೆಯನ್ನೇ ಹೊಂದುವುದಕ್ಕೆ ನಿರ್ಧರಿಸಿದ್ದಾರೆ. ವಾಸ್ತು ಪ್ರಕಾರವಾಗಿ ಕಟ್ಟಿರುವ ಮನೆಯನ್ನೇ ಖರೀದಿಸಲು ಮುಂದಾಗಿದ್ದಾರೆಂದು ಅಭಿಮಾನಿ ವಲಯದಿಂದ ಗೊತ್ತಾಗಿದೆ.
ಬಾಡಿಗೆ ಮನೆ ಮಾಡಿದರೆ ಮಾಜಿ ಸಂಸದೆ ರಮ್ಯಾ ಅವರಂತೆ ಚುನಾವಣೆ ಮುಗಿದ ಮೇಲೆ ಬೆಂಗಳೂರಿಗೆ ಹೊರಟುಹೋಗುವರೆಂಬ ಅಪಪ್ರಚಾರಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ಸ್ವಂತ ಮನೆ ಮಾಡಿಕೊಂಡರೆ ಅಪವಾದದಿಂದ ದೂರವಿರಬಹುದು. ಮಂಡ್ಯದ ಜನರ ಜತೆ ನಿರಂತರ ಸಂಪರ್ಕದಲ್ಲಿರುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ, ಸ್ವಂತ ಮನೆಯಿಂದ ಈ ನೆಲದೊಂದಿಗಿನ ಬಾಂಧವ್ಯವೂ ಉಳಿಯಲಿದೆ ಎಂಬುದೂ ಅವರ ಮನಸ್ಸಿನಲ್ಲಿದೆ ಎಂದು ಗೊತ್ತಾಗಿದೆ.