ನಿಮ್ಮನ್ನು ಗೆಲ್ಲಿಸಿದ್ದು ವೇಸ್ಟ್ : ಸಂಸದೆ ಸುಮಲತಾ ಫೇಸ್ಬುಕ್ ಪೋಸ್ಟ್ ಗೆ ನೆಟ್ಟಿಗರು ಕಿಡಿ
Team Udayavani, May 25, 2021, 7:16 PM IST
ಮಂಡ್ಯ: ಅಕ್ಕ ನಿನ್ ಪಾದ ಜೆರಾಕ್ಸ್, ಗೆಲ್ಲಿಸಿದ್ದು ವೇಸ್ಟ್… ಸ್ವಾಭಿಮಾನದ ಅವಧಿ ಎಷ್ಟು ಬೇಗ ಮುಗಿಯುತ್ತೆ ಅಂಥ ಕಾಯುತ್ತಿದ್ದಾರೆ… ಎಂದು ಸಂಸದೆ ಸುಮಲತಾಅಂಬರೀಷ್ ಅವರು ತಮ್ಮ ಫೇಸ್ಬುಕ್ನಲ್ಲಿ ಸ್ವಾಭಿಮಾನ ಗೆಲುವಿಗೆ 2 ವರ್ಷ ಎಂದು ಸಂಸದೆಯಾಗಿ ಗೆಲುವು ಸಾಧಿಸಿದ ಸಂಭ್ರಮಾಚರಣೆಗೆ ಹಾಕಿಕೊಂಡಿದ್ದ ಪೋಸ್ಟ್ ಗೆ ನೆಟ್ಟಿಗರು ಟೀಕಿಸುವ ಮೂಲಕ ಕಾಲೆಳೆದಿದ್ದಾರೆ.
ಮೇ 23ಕ್ಕೆ ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾಅಂಬರೀಷ್ ಗೆಲುವು ಸಾಧಿಸಿ, ಸಂಸದೆಯಾಗಿ ಎರಡು ವರ್ಷ ಪೂರೈಸಿರುವ ಸಂದರ್ಭದಲ್ಲಿ ಸುಮಲತಾ ಅವರು ಫೇಸ್ಬುಕ್ನಲ್ಲಿ ಎರಡು ವರ್ಷದ ಸಂಭ್ರಮಾಚರಣೆ ಕುರಿತು ಧನ್ಯವಾದ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಮಂಡ್ಯಕ್ಕೆ ಬಾರದಿರುವುದಕ್ಕೆ ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ನ ಎರಡನೇ ಅಲೆ ಜೋರಾಗಿದ್ದು, ಸುಮಕ್ಕ ಕಾಣುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ವಿರುದ್ಧ ಪೋಸ್ಟ್ಗಳು ಹರಿದಾಡಿದ್ದವು. ಸಾರ್ವಜನಿಕರು ಇದರ ಬಗ್ಗೆ ಸುಮಲತಾ ಅವರನ್ನು ಪ್ರಶ್ನಿಸಿದ್ದರು.
ಈ ಆರೋಪದಿಂದ ತಪ್ಪಿಸಿಕೊಳ್ಳಲು ಕಳೆದ ಕೆಲವು ದಿನಗಳ ಹಿಂದೆ ಜಿಪಂನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣ ಸಂಬಂಧ ಸಭೆಯಲ್ಲಿ ನಡೆದ ಆಕ್ಸಿಜನ್ ವಿವಾದ ಮಾಡಿಕೊಂಡು ಅರ್ಧಕ್ಕೆ ಸಭೆಯಿಂದ ಹೊರನಡೆದಿದ್ದರು. ಆ ಬಳಿಕ ಮಂಡ್ಯಕ್ಕೆ ಆಗಮಿಸಿರಲಿಲ್ಲ.
ಇದನ್ನೂ ಓದಿ :ಕೇಂದ್ರ ನೌಕರರ ತುಟ್ಟಿಭತ್ಯೆ ಏರಿಕೆ..! ಸಂಪೂರ್ಣ ಮಾಹಿತಿಗೆ ಈ ಸುದ್ದಿ ಓದಿ
ಜಿಲ್ಲೆಯಲ್ಲಿ ಕೊರೊನಾ ಅಬ್ಬರದಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದ್ದರೂ ಕ್ಷೇತ್ರಕ್ಕೆ ಬರುತ್ತಿಲ್ಲ. ಕೇವಲ ಫೇಸ್ಬುಕ್ನಲ್ಲಷ್ಟೇ ಸಕ್ರಿಯವಾಗಿರುವ ಸುಮಲತಾಅಂಬರೀಷ್ ಅವರು, ಎರಡು ವರ್ಷದ ಗೆಲುವಿನ ಸಂಭ್ರಮದ ಪೋಸ್ಟ್ ಹಾಕಿದ್ದರು. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದು, ಇಂತಹ ಸಮಯದಲ್ಲಿ ಇದೆಲ್ಲ ಬೇಕಾ.?, ಅಕ್ಕ ನಿನ್ ಪಾದ ಜೆರಾಕ್ಸ್, ನಿಮ್ಮನ್ನು ಗೆಲ್ಲಿಸಿದ್ದು ವೇಸ್ಟ್, ಏನು ಯೂಸ್ ಇಲ್ಲ. ಕೆ.ಆರ್.ಪೇಟೆ ತಾಲೂಕು ಅಂತಾ ಒಂದು ಇದೆ, ನಿಮಗೆ ಗೊತ್ತಾ…? ನಾವು ನಿಮ್ಮ ಅಭಿಮಾನಿ, ಗೆದ್ದು ಎರಡು ವರ್ಷ ಆಗಿದೆ, ನಮ್ಮ ಊರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ…? ನೀವು ಬೆಂಗಳೂರಿನಲ್ಲಿ ಸುಖವಾಗಿರಿ… ಜನರು ಸ್ವಾಭಿಮಾನದ ಅವಧಿ ಎಷ್ಟು ಬೇಗ ಮುಗಿಯುತ್ತೆ ಅಂತಾ ಕಾಯುತ್ತಿದ್ದಾರೆಂದು ಟೀಕಿಸಿದ್ದಾರೆ.
ಇದಲ್ಲದೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಕೇಳಿಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾಡಿರುವ ಯಾವುದೇ ಪೋಸ್ಟ್ ಗೆ ಸಂಸದೆ ಸುಮಲತಾ ಕ್ಯಾರೆ ಎಂದಿಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ಸಮರ್ಥಿಸಿಕೊಂಡಿದ್ದಾರೆ.