ಕಾವೇರಿ ಐ ತೀರ್ಪು ಒಪ್ಪಿದರೆ ಈ ಭಾಗದ ಕೃಷಿ ನಾಶ
ನ್ಯಾಯಾಂಗ ಹೋರಾಟಕ್ಕೆ ನಿರ್ಧಾರ • ಕಾವೇರಿ ಕಗ್ಗಂಟು ಪರಿಹಾರ ಕುರಿತ ಮುಕ್ತ ಸಂವಾದ
Team Udayavani, Jul 15, 2019, 4:15 PM IST
ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಮುಕ್ತ ಸಂವಾದವನ್ನು ಬರಹಗಾರ ಅರ್ಜುನಹಳ್ಳಿ ಪ್ರಸನ್ನಕುಮಾರ್ ಮಾತನಾಡಿದರು.
ಮಂಡ್ಯ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಲಸಂಘರ್ಷಕ್ಕೆ ಕಾರಣ ವಾಗಿರುವ ಕಾವೇರಿ ವಿವಾದದ ಇತ್ಯರ್ಥಕ್ಕಾಗಿ ಜಾರಿಯಾಗಿರುವ ಐ ತೀರ್ಪು ಇನ್ನೂ 15 ವರ್ಷ ಮುಂದುವರಿಯಲಿದ್ದು, ಒಂದು ವೇಳೆ ರೈತರು ಜಾಗೃತರಾಗಿ ಹೋರಾಟ ನಡೆಸದಿದ್ದರೆ ಈ ಭಾಗದ ಕೃಷಿ ಸಂಪೂರ್ಣ ನಾಶವಾಗಲಿದೆ ಎಂದು ಬರಹಗಾರ ಅರ್ಜುನಹಳ್ಳಿ ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.
ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಆಯೋಜಿಸಿದ್ದ ಕಾವೇರಿ ಕಗ್ಗಂಟು ಪರಿಹಾರ ಕುರಿತ ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು, ಕರ್ನಾಟಕದ ವಕೀಲರಾದ ನಾರಿಮನ್ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಾ ಬಂದಿದ್ದಾರೆ.
ಕಾವೇರಿ ಪ್ರಕರಣದ ಒಳ ಸುಳಿಗಳನ್ನು ಅರ್ಥೈಸಿಕೊಳ್ಳುವ ಅನಿವಾರ್ಯತೆ ಇದೆ. ಕೇವಲ ಪ್ರತಿಭಟನೆಗಳಿಂದ ಮಾತ್ರವೇ ಪರಿಹಾರ ಸಾಧ್ಯವಾಗುವುದಿಲ್ಲ. ಆದ್ದರಿಂದ ಸೂಕ್ಷ್ಮ ನೆಲೆಯಲ್ಲಿ ತೀವ್ರತೆಯ ಹೋರಾಟ ನಡೆಸಬೇಕು ಎಂದು ಹೇಳಿದರು.
ಸಂವಿಧಾನ ಪೀಠಕ್ಕೆ ವರ್ಗಾಯಿಸಿ: ಕಾವೇರಿ ತೀರ್ಪು ಹೊರ ಬಿದ್ದ ನಂತರ ನಾವು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಿತ್ತು. ಇಡೀ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಒತ್ತಾಯಿಸಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಕ್ರಿಯೆಯನ್ನು ಮಾಡಲಿಲ್ಲ. ಇದು ರಾಜಕಾರಣಿಗಳ ಇಚ್ಚಾಸಕ್ತಿ ಕೊರತೆಯ ಜೊತೆಗೆ ಜನಸಾಮಾನ್ಯರಿಗೆ ಅರಿವಿಲ್ಲದಿರುವುದು ಕೂಡ ಕಾರಣವಾಗಿದೆ ಎಂದು ವಿವರಿಸಿದರು.
ಕೃಷಿ ಸ್ವಾತಂತ್ರ್ಯ ಹರಣ: ಕಾವೇರಿ ಪ್ರಾಧಿಕಾರ ಇದುವರೆಗೂ ಸಂಕಷ್ಟ ಸೂತ್ರದ ಬಗ್ಗೆ ಸ್ಪಷ್ಟತೆ ವ್ಯಕ್ತಪಡಿಸಿಲ್ಲ, ಇಂತಿಂತಹ ಕಾಲಘಟ್ಟದಲ್ಲಿ ಇಂತಹುದೇ ಬೆಳೆಯನ್ನು ಬೆಳೆಯಬೇಕೆಂಬ ನಿರ್ಬಂಧವನ್ನು ಹೇರುವುದರ ಮೂಲಕ ಕಾವೇರಿ ಅಚ್ಚುಕಟ್ಟು ಭಾಗದ ರೈತರ ಕೃಷಿ ಸ್ವಾತಂತ್ರ್ಯವನ್ನು ಹರಣ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
ನೇಣಿನ ಕುಣಿಕೆ: ಕಾವೇರಿ ಐ ತೀರ್ಪಿನಲ್ಲಿ ತಮಿಳುನಾಡಿಗೆ ಹಂಚಿಕೆ ಮಾಡಿದ್ದ ಪಾಲಿನಲ್ಲಿ 14.75 ಟಿಎಂಸಿ ನೀರನ್ನು ಕಡಿತಗೊಳಿಸಿ ರಾಜ್ಯಕ್ಕೆ ನೀಡಿದ್ದು, ಸಂತಸ ಪಡುವುದಕ್ಕಿಂತ ರೈತರ ಪಾಲಿಗೆ ನೇಣಿನ ಕುಣಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಂಡಳಿ ಕೈಯಲ್ಲಿ ಜಲ ಹಕ್ಕು: ಅಂತಿಮ ತೀರ್ಪಿನಿಂದ ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯ ರೈತರ ಹಕ್ಕು ಕಾವೇರಿ ನಿರ್ವಹಣಾ ಮಂಡಳಿ ಕೈಗೆ ಸೇರಿದೆ. ಇಲ್ಲಿನ ಅಂತರ್ಜಲದ ಹಕ್ಕು ಕೂಡ ಮಂಡಳಿ ಕೈಯಲ್ಲಿದೆ. ವೀಸಿ ನಾಲೆ ವ್ಯಾಪ್ತಿಯಲ್ಲಿ 4 ಲಕ್ಷ ಎಕರೆ ವ್ಯಾಪ್ತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈಗ ನೀರು ಹಂಚಿಕೆ ಮಾಡಿರುವ ಪ್ರಕಾರ ಈ ವ್ಯಾಪ್ತಿಯಲ್ಲಿ ಕೇವಲ 40 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ವಾಣಿಜ್ಯ ಬೆಳೆ (ಕಬ್ಬು, ಬಾಳೆ, ತೆಂಗು) ಬೆಳೆಯಲು ಅವಕಾಶ ಕಲ್ಪಿಸಿದ್ದಾರೆ.
ನೀರು ಹಂಚಿಕೆ: ಹೈನುಗಾರಿಕೆ ಭತ್ತ ಒಂದು ಬೆಳೆ 1.16 ಲಕ್ಷ ಎಕರೆಯಲ್ಲಿ ಬೆಳೆಯಲು ಅವಕಾಶವಿದ್ದು, ಜೂನ್-ಸೆಪ್ಟಂಬರ್ ಖಾರೀಪ್ ಖುಷ್ಕಿ ಬೆಳೆ 20 ಸಾವಿರ ಎಕರೆ, ಅಕ್ಟೋಬರ್-ಜನವರಿ ರಾಬಿ ಖುಷ್ಕಿ 20 ಸಾವಿರ ಎಕರೆಯಲ್ಲಿ ಬೆಳೆಯಲು ಅವಕಾಶವಿದೆ. 40 ಸಾವಿರ ಎಕರೆ ಕಬ್ಬಿಗೆ 13.04 ಟಿಎಂಸಿ, ಭತ್ತಕ್ಕೆ 23.11 ಟಿಎಂಸಿ, ಖಾರೀಪ್ ಖುಷ್ಕಿಗೆ 1.09 ಟಿಎಂಸಿ, ರಾಗಿ ಖುಷ್ಕಿಗೆ 01.74 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಈ ರೀತಿ ಹಂಚಿಕೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಜನಜೀವನ ಅಸ್ತವ್ಯಸ್ತ: ರಾಜ್ಯದ ರೈತರಿಗೆ ನೀರು ಹಂಚಿಕೆ ಬಗ್ಗೆ ಶತಮಾನಗಳಿಂದಲೂ ನಿರ್ಲಕ್ಷ್ಯ ತೋರುತ್ತ ಬಂದಿದ್ದು, ಅದು ಇಂದು ಕೂಡ ಮುಂದುವರಿದಿದೆ. ಸುಪ್ರೀಂ ಕೋರ್ಟ್ನಲ್ಲಿ ನಡೆದ ವಾದದ ಸಂದರ್ಭದಲ್ಲಿ ತಮಿಳುನಾಡಿನ ರೈತರಿಗೆ 2 ಬೆಳೆಗೆ ನೀರು ಕೊಡದಿದ್ದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಕಾಳಜಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ನಮ್ಮ ರಾಜ್ಯದ ಪರ ವಕೀಲರು ತುಟಿ ಬಿಚ್ಚಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಾದದಲ್ಲಿ ಡಾ.ಎಚ್.ಎನ್.ರವೀಂದ್ರ, ಪ್ರೊ.ಹುಲ್ಕೆರೆ ಮಹದೇವು, ಕೀಲಾರ ಕೃಷ್ಣೇಗೌಡ, ವೆಂಕಟಗಿರಿಯಯ್ಯ, ರಮೇಶ್ಗೌಡ, ಮಾಗಡಿ ಜಿಪಂ ಮಾಜಿ ಸದಸ್ಯೆ ಕಲ್ಪನಾ ಶಿವಣ್ಣ, ಜಿ.ಬಿ.ನವೀನ್ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪ್ರೊ.ಜಯಪ್ರಕಾಶ್ಗೌಡ, ಎಚ್.ಡಿ.ಜಯರಾಮ, ಉಮಾಶಂಕರ್, ಟಿ.ಕೆ.ಸೋಮಶೇಖರ್, ಬಿ.ಟಿ.ಮೋಹನ್ಕುಮಾರ್, ಎಂ.ಬಿ.ನಾಗಣ್ಣಗೌಡ, ಎಂ.ಶಿವಕುಮಾರ್, ವಿವಿಧ ಸಂಘಟನೆ ಕಾರ್ಯಕರ್ತರು, ಕೆಜೆಯುನ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ