ಕೆಆರ್ಎಸ್ನಲ್ಲಿ 99 ಅಡಿಗಿಳಿದ ನೀರಿನ ಮಟ್ಟ
Team Udayavani, Jan 21, 2018, 6:40 AM IST
ಶ್ರೀರಂಗಪಟ್ಟಣ: ಬೇಸಿಗೆ ಹಂಗಾಮು ಬೆಳೆಗಳಿಗೆ ಕೆಆರ್ಎಸ್ ಜಲಾಶಯದಿಂದ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ 99 ಅಡಿಗೆ ಇಳಿಕೆಯಾಗಿದೆ.
ನೀರಾವರಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಸಂಗ್ರಹ ಮಾಡಿ ಆ ನೀರನ್ನು ಕುಡಿಯುವ ಬಳಕೆಗೆ ಮಾತ್ರ ಸಂಗ್ರಹಿಸಿಡಲಾಗಿತ್ತು. ಬಳಿಕ ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆಯಾದ್ದರಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು 110 ಅಡಿ ಸಂಗ್ರಹವಾಗಿತ್ತು.
ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಬೆಳೆ ನಷ್ಟಕ್ಕೆ ಪರಿಹಾರ ಘೋಷಣೆ ಮಾಡಿ, ಬೇಸಿಗೆ ಹಂಗಾಮಿಗೆ ಕಟ್ಟು ನೀರು ಪದ್ಧತಿಯಡಿ ನಾಲ್ಕು ಕಂತುಗಳ ಕಟ್ಟು ನೀರನ್ನು ನಾಲೆಗಳಿಗೆ ಬಿಡುವುದಾಗಿ ಘೋಷಣೆ ಮಾಡಿದೆ. ಅದರಂತೆ ಮೊದಲನೆ ಕಂತಿನ ನೀರನ್ನು ಈಗಾಗಲೇ ನಾಲೆಗಳಿಗೆ ಬಿಡಲಾಗಿದೆ.
ಇದರಿಂದ ಜಲಾಶಯದ ನೀರಿನ ಮಟ್ಟ ಕುಸಿಯತೊಡಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದಿನ ನೀರಿನ ಮಟ್ಟ 99.94 ಅಡಿ ಇದೆ. 141 ಕ್ಯುಸೆಕ್ ಒಳಹರಿವು, 4273 ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.