ಗ್ರಾಮೀಣ ಸಂಸ್ಕೃತಿ ಉಳಿಸಿ-ಬೆಳೆಸಿ
ಆಚರಣೆಗಳಿಗಿದೆ ಧಾರ್ಮಿಕ-ವೈಜ್ಞಾನಿಕ-ಸಾಂಸ್ಕೃತಿಕ ಹಿನ್ನೆಲೆ • ವಿಜೇತರಿಗೆ ಬಹುಮಾನ ವಿತರಣೆ
Team Udayavani, Jun 21, 2019, 10:17 AM IST
ಮಾನ್ವಿ: ನಮ್ಮ ಸಂಸ್ಕೃತಿ, ಸಂಪ್ರದಾಯದಲ್ಲಿನ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ರಾಜಾ ಅಂಬಣ್ಣ ನಾಯಕ ದೊರೆ ಫೌಂಡೇಷನ್ ವತಿಯಿಂದ ಕಾರಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ರೈತರಿಗೆ ಸನ್ಮಾನ ಹಾಗೂ ಎತ್ತುಗಳ ಓಟದ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಆಚರಣೆಗಳಿಗೆ ವೈಜ್ಞಾನಿಕ, ಧಾರ್ಮಿಕ, ಸಂಸ್ಕೃತಿ, ಸಂಪ್ರದಾಯದ ಹಿನ್ನೆಲೆ ಇರುತ್ತದೆ. ಎತ್ತಿನ ಓಟದ ಸ್ಪರ್ಧೆಗಳು ಗ್ರಾಮೀಣ ಸೊಗಡನ್ನು ಹೆಚ್ಚಿಸುತ್ತವೆ. ಇಂಥ ಆಚರಣೆಗಳು ಇಂದು ವಿನಾಶ ಅಂಚಿನಲ್ಲಿದ್ದು, ನಾವೆಲ್ಲ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಈ ವರ್ಷ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ನಗು ಬರಲಿ. ಉತ್ತಮ ಬೆಳೆ ಬರಲಿ ಎಂದು ಆಶಿಸಿದರು.
ನೀರಾವರಿ ಸಮಸ್ಯೆ ಬಗೆ ಹರಿಸಲು ನವಲಿ ಗ್ರಾಮದ ಹತ್ತಿರ ಸಮಾನಾಂತರ ಜಲಾಶಯ ನಿರ್ಮಿಸುವ ಕುರಿತು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ವೆಂಕಟರಾವ್ ನಾಡಗೌಡರೊಂದಿಗೆ ಚರ್ಚಿಸುವ ಮೂಲಕ ಪ್ರಯತ್ನ ನಡೆದಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ.ಇಸ್ಮಾಯಿಲ್, ಹಿರಿಯ ವಕೀಲರಾದ ಎ.ಬಿ.ಉಪ್ಪಳಮಠ, ಪುರಸಭೆ ಸದಸ್ಯರಾದ ತನ್ವೀರ್ ವಕೀಲ, ಶಿಕ್ಷಕರಾದ ಮಹಾದೇವಪ್ಪ, ಶ್ರೀಶೈಲಗೌಡ, ರಾಜಾಸಾಬ್ ಮಾತನಾಡಿದರು.
15ಕ್ಕೂ ಹೆಚ್ಚು ರೈತರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ರಾಜಾಮಹೇಂದ್ರ ನಾಯಕ ಎತ್ತಿನ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 10 ತೊಲಿ ಬೆಳ್ಳಿ ಕಡಗ, ದ್ವಿತೀಯ ಸ್ಥಾನ ಪಡೆದವರಿಗೆ 5 ತೊಲಿ ಬೆಳ್ಳಿ ಕಡಗ ವಿತರಿಸಿ ರೈತರನ್ನು ಸನ್ಮಾನಿಸಿದರು.
ಪುರಸಭೆ ಸದಸ್ಯರಾದ ಶರಣಪ್ಪ ಮೇದಾ, ಶಿವರಾಜ ನಾಯಕ, ಬಾಷಾಸಾಬ್, ಖಲೀಲ್ ಖುರೇಷಿ, ಶ್ರೀಕಾಂತ ಪಾಟೀಲ ಗೂಳಿ, ಪಿ.ರವಿಕುಮಾರ ವಕೀಲ, ಎಚ್.ದೇವರಾಜ, ಮೌನೇಶ ನಾಯಕ, ವೀರೇಶ ಅರೋಲಿ, ಪವನಕುಮಾರ ಶ್ರೇಷ್ಠಿ, ಸುರೇಶ ಕುರ್ಡಿ, ಶಂಕರ ಕುರ್ಡಿ ಸೇರಿದಂತೆ ಅನೇಕರಿದ್ದರು.