ಪರಿಶ್ರಮದಿಂದ ಯಶಸ್ಸು ಸಾಧ್ಯ
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಲಿ ಪುಸ್ತಕ ಓದುವ ಹವ್ಯಾಸ ಬೆಳೆಯಲಿ
Team Udayavani, Apr 11, 2019, 4:26 PM IST
ಮಾನ್ವಿ: ಅಧ್ಯಯನದಲ್ಲಿ ಆಸಕ್ತಿ, ನಿರಂತರ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ರಾಯಚೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಗಣಕ
ವಿಜ್ಞಾನ ವಿಭಾಗದ ಮುಖ್ಯಸ್ಥ ಸೈಯ್ಯದ್ ಮಿನ್ಹಾಜ್ ಉಲ್ ಹಸನ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 371(ಜೆ)
ಕಲಂ ಸೌಲಭ್ಯದಿಂದ ಈ ಭಾಗದ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ
ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಅಗತ್ಯ ತಯಾರಿ ಮಾಡಿಕೊಳ್ಳಲು ಆದ್ಯತೆ ನೀಡಬೇಕು. ಪುಸ್ತಕಗಳನ್ನು ಓದುವ
ಹವ್ಯಾಸ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು
ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಎನ್ಎಸ್ಎಸ್ ಶಿಬಿರಾರ್ಥಿಗಳು ಮತ್ತು ಕೇಂದ್ರ
ಸರ್ಕಾರದ ಬಜೆಟ್ ಕುರಿತು ನಡೆದ ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ
ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ
ಬಹುಮಾನ ವಿತರಿಸಲಾಯಿತು.
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಪುರಸ್ಕಾರ
ನೀಡಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಹಾಯಕ
ಪ್ರಾಧ್ಯಾಪಕ ಚೆನ್ನಬಸವ ಮಾಡಗಿರಿ ಕಾಲೇಜಿನ ವಾರ್ಷಿಕ ವರದಿ
ವಾಚಿಸಿದರು.ಯನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸುಮಿತ್ರಾ
ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಶೋಭಾ ಸಿ.ಎಚ್.,
ಕ್ರೀಡಾ ಕಾರ್ಯದರ್ಶಿ ಸುರೇಶ ಶರಣಪ್ಪ, ಸಹಾಯಕ ಪ್ರಾಧ್ಯಾಪಕ
ಹಾಗೂ ಎನ್ಎಸ್ಎಸ್ ಸಂಯೋಜಕ ಶಿವರಾಜ ಕೊಪ್ಪರ, ಡಾ| ಮಹ್ಮದ್
ಹಬೀಬ್, ಡಾ| ಎನ್ ಹುಲಿಯಪ್ಪ, ಬಸವರಾಜ ಕರಡಿಗುಡ್ಡ, ಎಚ್
ಚಂದ್ರಶೇಖರ, ರಾಜಶೇಖರ ಪಾಟೀಲ, ಪಾರ್ವತಿ, ಪ್ರೀತಿ, ಸುಮಿತ್ರಾ ಇತರರು
ಇದ್ದರು.