ಬೆಟಗೇರಿಯಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕ
ಗಾಂಧೀಜಿ ಗದಗ-ಬೆಟಗೇರಿಗೆ ಭೇಟಿ ನೀಡಿ 100 ವರ್ಷ | ಬಾಪೂಜಿ ದೇಗುಲ ದುಸ್ಥಿತಿ ಕಂಡು ಮಮ್ಮಲ ಮರಗಿದ್ದ ಡಿಸಿ
Team Udayavani, Oct 2, 2021, 9:15 PM IST
ವರದಿ: ವೀರೇಂದ್ರ ನಾಗಲದಿನ್ನಿ
ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧಿ ಜನ್ಮದಿನಾಚರಣೆಗೆ ದೇಶ ಸಿದ್ಧಗೊಳ್ಳುತ್ತಿರುವ ಬೆನ್ನಲ್ಲೇ ಗಾಂಧೀಜಿ ಅವರು ಗದಗ-ಬೆಟಗೇರಿಗೆ ಭೇಟಿ ನೀಡಿ 100 ವರ್ಷಗಳು ಸಂದ ಹಿನ್ನೆಲೆಯಲ್ಲಿ ಬೆಟಗೇರಿಯಲ್ಲಿರುವ ಬಾಪೂಜಿ ಅವರ ಚಿತಾಭಸ್ಮದ ಸ್ಥಳದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರ ವಿಶೇಷ ಕಾಳಜಿಯಿಂದ ನೂತನ ಅತ್ಯಾಕರ್ಷಕ ಸ್ಮಾರಕವೂ ಸಿದ್ಧಗೊಂಡಿದೆ. 1948ರಲ್ಲಿ ಗಾಂಧೀಜಿ ಹತ್ಯೆ ಬಳಿಕ ರೈಲಿನಲ್ಲಿ ದೇಶಾದ್ಯಂತ ಸಾರ್ವಜನಿಕರಿಗೆ ಚಿತಾಭಸ್ಮದ ದರ್ಶನ ಭಾಗ್ಯ ಕರುಣಿಸಲಾಗಿತ್ತು. ಆಗ ನಗರದ ಸ್ವಾತಂತ್ರ್ಯ ಹೋರಾಟಗಾರರಾದ ಹನುಮಂತಸಾ ಬಾಕಳೆ, ಮಳೆಕರ್, ಜೂಜುಗಾರ ಇನ್ನಿತರರು ಧಾರವಾಡದ ಅಂದಿನ ಜಿಲ್ಲಾಧಿಕಾರಗಳ ನೆರವಿನಿಂದ ರಾಷ್ಟ್ರಪಿತನ ಚಿತಾಭಸ್ಮ ತಂದು ಬೆಟಗೇರಿಯ ವಿದ್ಯಾರಣ್ಯದಲ್ಲಿ ಸ್ಥಾಪಿಸಿದ್ದರು.
ಮಹಾತ್ಮನ ಸ್ಮಾರಕದ ಮೂಲಕ ಯುವ ಪೀಳಿಗೆಗೆ ಸ್ವಾತಂತ್ರ್ಯ ಚಳವಳಿಯ ಮಹತ್ವ, ಅಹಿಂಸಾವಾದ ಹಾಗೂ ಗಾಂಧಿ ತತ್ವಗಳನ್ನು ಸಾರಬೇಕು. ಗಾಂಧೀಜಿ ಚಿಂತನೆಗಳು ಜನಸಾಮಾನ್ಯರಿಗೆ ಪ್ರೇರಣೆಯಾಗಬೇಕು ಎಂಬುದು ಅಂದಿನ ಸ್ವಾತಂತ್ರ್ಯ ಸೇನಾನಿಗಳ ಕನಸಾಗಿತ್ತು. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯರ ನಿರಾಸಕ್ತಿಯಿಂದಾಗಿ ಕೆಲ ವರ್ಷಗಳಿಂದ ನಿರ್ಲಕ್ಷ್ಯದಿಂದಾಗಿ ಗಾಂಧಿ ಗುಡಿ ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಮೇಲ್ಛಾವಣಿಯಿಲ್ಲದೇ ಗಾಂಧಿ ತಾತನ ಚಿತಾಭಸ್ಮ ಬಿಸಿಲು, ಮಳೆಗೆ ಮೈಯೊಡ್ಡಿತ್ತು. ಗಾಂಧೀಜಿ ಸ್ಮಾರಕದ ಪಕ್ಕದಲ್ಲೇ ಚರಂಡಿ ನೀರು ಹರಿದುಹೋಗುತ್ತಿದ್ದು, ಅದರ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿತ್ತು. ಮತ್ತೂಬ್ಬರು ಹೇಳದ ಹೊರತಾಗಿ ಸ್ಮಾರಕವನ್ನು ಗುರುತಿಸುವುದು ಅಸಾಧ್ಯವಾಗಿತ್ತು.
ನೂತನ ಸ್ಮಾರಕ ಪ್ರೇರಣಾದಾಯಕ: ಗಾಂಧಿ ಸ್ಮಾರಕ ದುಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಇತ್ತೀಚೆಗೆ ಗಾಂಧಿ ಗುಡಿಗೆ ಭೇಟಿ ನೀಡಿದ್ದರು. ಬಾಪೂಜಿ ದೇಗುಲದ ದುಸ್ಥಿತಿಯನ್ನು ಕಂಡು ಮಮ್ಮಲ ಮರಗಿದ್ದರು. ತಕ್ಷಣವೇ ಸ್ಥಳದಲ್ಲಿದ್ದ ನಗರಸಭೆ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸ್ಮಾರಕ ಪುನರ್ ನಿರ್ಮಾಣಕ್ಕೆ ಆದೇಶಿಸಿದರು. ಅದರ ಫಲವಾಗಿ ಕೇವಲ ಒಂದೇ ವಾರದಲ್ಲಿ ರಾಷ್ಟ್ರಪಿತನ ಅತ್ಯಾಕರ್ಷಕ ಸ್ಮಾರಕ ತಲೆ ಎತ್ತಿದೆ. ಇದು ಯುವಜನರು ಮತ್ತು ಸಂದರ್ಶಿತರಿಗೆ ಪ್ರೇರಣಾದಾಯಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ