ಅನ್ನದಾತನಿಗೆ ಹೊರೆಯಾದ ಕೂಲಿ
ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ
Team Udayavani, Aug 1, 2019, 10:51 AM IST
ಮುದಗಲ್ಲ: ಆಶಿಹಾಳದ ಹೊಲವೊಂದರಲ್ಲಿ ಬಿತ್ತನೆಯಲ್ಲಿ ತೊಡಗಿದ್ದ ರೈತರು.
ದೇವಪ್ಪ ರಾಠೊಡ
ಮುದಗಲ್ಲ: ಪಟ್ಟಣ ಸೇರಿದಂತೆ ನಾಗರಹಾಳ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ಆರಂಭವಾಗಿದೆ. ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದ್ದರೆ, ದುಪ್ಪಟ್ಟು ಕೂಲಿ ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
ಮುಂಗಾರು ಮಳೆ ಸುಮಾರು ಒಂದು ತಿಂಗಳು ತಡವಾಗಿ ಆರಂಭವಾಗಿದ್ದು, ಇತ್ತೀಚೆಗಷ್ಟೇ ಈ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಈಗ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕೃಷಿಕರು ಹೆಚ್ಚಿರುವುದರಿಂದ ಏಕಕಾಲಕ್ಕೆ ಬಿತ್ತನೆ ಚಟುವಟಿಕೆ ಶುರುವಾಗಿದೆ. ಸಣ್ಣ ರೈತರು ಕುಟುಂಬದ ಸದಸ್ಯರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ, ದೊಡ್ಡ ದೊಡ್ಡ ರೈತರು ಕೂಲಿಕಾರರನ್ನು ಅವಲಂಬಿಸಿದ್ದಾರೆ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದ್ದು, ಸಹಜವಾಗಿಯೇ ಹೆಚ್ಚಿನ ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ ಹಾಗೂ ಕೂಲಿಗಾಗಿ ಸಾವಿರಾರು ರೂಪಾಯಿ ಮೀಸಲಿಡಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಕೂಲಿ ದರ ಹೆಚ್ಚುತ್ತಿದ್ದು ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ವರ್ಷದ ಹಿಂದೆ 100 ರೂ. ಇದ್ದ ಕೂಲಿ ಈಗ 200, 250ಕ್ಕೆ ತಲುಪಿದೆ ಎನ್ನುತ್ತಾರೆ ಅಡವಿಬಾವಿ ಗ್ರಾಮದ ರೈತ ಬಸನಗೌಡ ಮಾಲಿಪಾಟೀಲ.
ಕಾರ್ಮಿಕರ ಕೊರತೆ: ಇಷ್ಟು ದಿನ ಮಳೆ ಇಲ್ಲದ್ದಕ್ಕೆ ಈ ಭಾಗದ ಗ್ರಾಮ ಮತ್ತು ತಾಂಡಾಗಳಲ್ಲಿನ ಸಣ್ಣ ರೈತರು, ಕೃಷಿ ಕಾರ್ಮಿಕರು ಉದ್ಯೋಗ ಅರಸಿ ದೂರದ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಇನ್ನು ಸ್ಥಳೀಯವಾಗಿ ಇರುವವರು ಕೆಲವೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ ಎನ್ನುತ್ತಾರೆ ರೈತರು.
ಬೆಳೆಗೆ ಜೀವ ಕಳೆ: ಖೈರವಾಡಗಿ, ಕಾಚಾಪುರ, ಬಯ್ನಾಪುರ, ಅಮದಿಹಾಳ, ಉಪ್ಪಾರ ನಂದಿಹಾಳ ಹಾಗೂ ನಾಗರಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಜೂನ್ ತಿಂಗಳಲ್ಲಿಯೇ ಉತ್ತಮ ಮಳೆ ಸುರಿದ ಕಾರಣ ರೈತರು ಹರ್ಷದಿಂದ ಬಿತ್ತನೆ ಆರಂಭಿಸಿದ್ದರು. ಬಿತ್ತನೆ ಮಾಡಿ 25 ದಿನಗಳೇ ಕಳೆದಿದ್ದವು. ಮತ್ತೆ ಮಧ್ಯದಲ್ಲಿ ಮಳೆ ಕೈಕೊಟ್ಟ ಕಾರಣ ಆತಂಕಗೊಂಡಿದ್ದರು. ಆದರೆ ಕಳೆದ ವಾರದಿಂದ ಉತ್ತಮ ಮಳೆ ಸುರಿದ ಕಾರಣ ಬೆಳೆಗಳಿಗೆ ಜೀವಕಳೆ ಬಂದಿದೆ. ಹತ್ತಿ, ತೊಗರಿ, ಸಜ್ಜಿ, ಹೆಸರು, ಮೆಕ್ಕೆಜೋಳ, ಎಳ್ಳು ಬೆಳೆ ಚೆನ್ನಾಗಿ ಬಂದಿದೆ. ಕೂಲಿಕಾರರ ಸಮಸ್ಯೆ ನಡುವೆಯೂ ಎಡೆಕುಂಟೆ, ಕಸ ತಗೆಯುವುದು, ರಸಗೊಬ್ಬರ ಬಳಕೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.
ಎತ್ತುಗಳಿಗೆ ಬೇಡಿಕೆ: ರೈತರ ಮಿತ್ರ ಎನ್ನಿಸಿಕೊಂಡಿರುವ ಎತ್ತುಗಳಿಗೆ ಬೇಡಿಕೆ ಹೆಚ್ಚಿದೆ. ಮಳೆ ಸುರಿದಾಗ ಭೂಮಿ ಹದಗೊಳಿಸಲು, ಬಿತ್ತನೆ ಮಾಡಲು, ಎಡೆಕುಂಟಿಗೆ ರಾಸುಗಳು ಬೇಕೇಬೇಕು. ರೈತರು ರಾಸುಗಳನ್ನು ಬಾಡಿಗೆ ಪಡೆಯಲು ದಿನ ಒಂದಕ್ಕೆ 1000 ದಿಂದ 1500 ರೂ. ನೀಡಬೇಕಾಗಿದೆ. ಎಂದು ಆಶಿಹಾಳ ತಾಂಡಾದ ರೈತ ಮಾನಪ್ಪ ರಾಮದಾಸಪ್ಪ ತಿಳಿಸಿದ್ದಾರೆ.
ಭೂ ರಹಿತರು ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ. ಇಲ್ಲಿಯೇ ಇರುವ ಕೆಲ ಕೂಲಿ ಕಾರ್ಮಿಕರು ನರೇಗಾ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಕೂಲಿಕಾರರ ಕೊರತೆ ಎದುರಾಗಿದೆ.
•ದೇವಪ್ಪ ತೊಂಡಿಹಾಳ ,
ರೈತ
ಮುಂಗಾರು ತಡವಾದರೂ ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿಬಂದಿದೆ. ರೈತರು ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ತೊಡಗಿ ಹೆಚ್ಚಿನ ಇಳುವರಿ ಪಡೆಯಬಹುದು.
•ವೆಂಕಟೇಶ ಕುಲಕರ್ಣಿ,
ಕೃಷಿ ಅಧಿಕಾರಿ