ಕಲ್ಲು ಎಳೆಯುವ-ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ
Team Udayavani, Aug 29, 2019, 10:59 AM IST
ಮುದಗಲ್ಲ: ಮೇಗಳಪೇಟೆಯ ಶ್ರೀ ಜ್ಞಾನಪ್ಪಯ್ಯನ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾರವಾದ ಕಲ್ಲು ಎಳೆದ ಎತ್ತುಗಳು.
ಮುದಗಲ್ಲ: ಪಟ್ಟಣದ ಮೇಗಳಪೇಟೆಯ ಹಾಲುಮತ ಸಮಾಜ ಆರಾಧ್ಯದೈವ ಶ್ರೀ ಜ್ಞಾನಪ್ಪಯ್ಯನ ಜಾತ್ರೆ ಪ್ರಯುಕ್ತ ಮಂಗಳವಾರ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಮತ್ತು ಜಟ್ಟಿಗರಿಂದ ಸಿಂಗ್ರಾಣಿ, ಗುಂಡು ಕಲ್ಲು ಎತ್ತುವ ಸ್ಪರ್ಧೆ ನಡೆದವು.
ದೇವಸ್ಥಾನದ ಹಿಂದಿನ ಜಮೀನಿನಲ್ಲಿ ಏರ್ಪಡಿಸಿದ್ದ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಏಳು ಜೋಡಿ ಎತ್ತುಗಳು ಭಾಗವಹಿಸಿದ್ದವು. 18 ಕ್ವಿಂಟಲ್ ಕಲ್ಲನ್ನು ಎಳೆಯಲು 7 ನಿಮಿಷ ಅವಧಿ ನಿಗದಿಪಡಿಸಲಾಗಿತ್ತು. ಮಂಜಲಾಪುರದ ಅಯ್ನಾಳೆಪ್ಪ ಅಂಬಳಿ ಅವರ ಎತ್ತುಗಳು 7 ನಿಮಿಷದಲ್ಲಿ 1,147 ಅಡಿ ಭಾರದ ಕಲ್ಲು ಎಳೆದು ಪ್ರಥಮ ಸ್ಥಾನ ಪಡೆದರೆ, ಮಲ್ಲಪ್ಪ ಯರದೊಡ್ಡಿ ಅವರ ಎತ್ತುಗಳು 934 ಅಡಿ ಎಳೆದು ದ್ವಿತೀಯ ಸ್ಥಾನ ಪಡೆದವು. ಸ್ಪರ್ಧೆ ರೋಮಾಂಚನಕಾರಿಯಾಗಿತ್ತು.
ದೇವಸ್ಥಾನ ಆವರಣದಲ್ಲಿ ಜರುಗಿದ ಸಿಂಗ್ರಾಣಿ ಕಲ್ಲು ಹಾಗೂ ಗುಂಡು ಕಲ್ಲು ಎತ್ತುವ ಸ್ಪರ್ಧೆ ಕೂಡ ರೋಮಾಂಚನಕಾರಿಯಾಗಿತ್ತು. ಎರಡು ವಿಭಾಗದಲ್ಲಿ ಪ್ರತ್ಯೇಕವಾಗಿ 11 ಸ್ಪರ್ಧಾಳುಗಳು ಭಾಗವಹಿಸಿದ್ದರು. ಸಿಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ 18 ವರ್ಷದ ಕಲ್ಲೂರು ಗ್ರಾಮದ ಯುವಕ ನಾಲ್ಕು ವಿಭಾಗದಲ್ಲಿ ಯಶಸ್ಸು ಪಡೆದರು.
ಗ್ಯಾನಪ್ಪಯ್ಯ ಏಕಪ್ಪಯ್ಯ, ಸಂಜೀವಪ್ಪಯ್ಯ ಹಿರೇಮನಿ, ಗಂಗಪ್ಪಯ್ಯ, ಗ್ಯಾನಪ್ಪಯ್ಯ. ಗ್ಯಾನಪ್ಪ ಹೊಳ್ಯಾಚಿ, ಹನುಮಂತಪ್ಪ ಕಂದಗಲ್ಲ, ಅಯ್ಯಪ್ಪಯ್ಯ, ಶಿವನಾಗಪ್ಪ ಬಡಕುರಿ, ನಂದಪ್ಪ ಕತ್ತಿ, ಕೂಡ್ಲಪ್ಪ ಗುಡಗುಂಟಿ, ನಾಗರಾಜ ತಳವಾರ ಸೇರಿದಂತೆ ಸಂಘಟಕ ಯುವಕರು ಉಪಸ್ಥಿತರಿದ್ದರು.