ರಸ್ತೆ ತುಂಬಾ ಗುಂಡಿಗಳದ್ದೇ ಕಾರುಬಾರು!
ಬಿಳಗೊಳದಿಂದ ಹ್ಯಾಂಡ್ಪೋಸ್ಟ್ವರೆಗಿನ ರಸ್ತೆ ಸಂಪೂರ್ಣ ಹಾಳು: ಸವಾರರ ಆರೋಪ
Team Udayavani, Nov 16, 2019, 6:28 PM IST
ಸುಧೀರ್ ಬಿ.ಟಿ. ಮೊದಲ ಮನೆ
ಮೂಡಿಗೆರೆ: ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-173ಯಲ್ಲಿ ಗುಂಡಿಗಳೇ ತುಂಬಿಕೊಂಡಿದ್ದು, ಗುಂಡಿಗಳಲ್ಲಿ ರಸ್ತೆ ಹುಡುಕಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಸವಾರರಿಗೆ ಬಂದೊದಗಿದೆ.
ಕಡೂರಿನಿಂದ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಹಲವು ವರ್ಷಗಳ ನಂತರ 2018ರ ಏಪ್ರಿಲ್ ತಿಂಗಳಿನಲ್ಲಿ ಚಿಕ್ಕಮಗಳೂರಿನ ಆಲದಗುಡ್ಡೆಯಿಂದ ಮೂಡಿಗೆರೆಯ ಬಿಳಗುಳದ ಅಂಚಿನವರೆಗೆ ಡಾಂಬರೀಕರಣ ಮಾಡಲಾಗಿತ್ತು. ಅಧಿಕಾರಿಗಳ ದೂರಾಲೋಚನೆಯ ಕೊರತೆಯೋ ಅಥವಾ ಯೋಜನೆ ತಯಾರಿಸುವುದರಲ್ಲಿ ಆದ ತಪ್ಪುಗಳಿಂದಾಗಿಯೋ ಏನೋ ಬಿಳಗೊಳದಿಂದ ಹ್ಯಾಂಡ್ಪೋಸ್ಟ್ವರೆಗೆ ಮಾತ್ರ ಡಾಂಬರೀಕರಣ ಆಗಿಲ್ಲ.
ಈ ವಿಚಾರವಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿ ಹ್ಯಾಂಡ್ ಪೋಸ್ಟ್ವರೆಗೆ ಡಾಂಬರೀಕರಣ ಮಾಡುವಂತೆ ಅಹವಾಲು ಸಲ್ಲಿಸಿದ್ದರು. ಕೂಡಲೇ ಸೂಕ್ತ ಸ್ಪಂದನೆ ಸಿಕ್ಕಿತಾದರೂ ಕಾರ್ಯ ಮಾತ್ರ ಪ್ರಗತಿಗೆ ಬರಲಿಲ್ಲ. ಇದರ ಪರಿಣಾಮವಾಗಿ ಮೊದಲೇ ಹಾಳಾಗಿದ್ದ ರಸ್ತೆ ಈ ಬಾರಿಯ ಮಳೆಗಾಲದಲ್ಲಿ ಪೂರ್ತಿಯಾಗಿ ಹಾಳಾಗಿದ್ದು, ರಸ್ತೆ ಇದೆ ಎನ್ನುವ ಯಾವುದೇ ಕುರುಹು ಕಾಣಿಸುತ್ತಿಲ್ಲ.
ಬಿಳಗೊಳದಿಂದ ಮೂಡಿಗೆರೆ ಪಟ್ಟಣ ಸೇರಿದಂತೆ ಹ್ಯಾಂಡ್ಪೋಸ್ಟ್ ವರೆಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಸ್ಥಳೀಯರು ಮತ್ತು ವಾಹನ ಸವಾರರು ರಸ್ತೆಯಲ್ಲಿ ತಿರುಗಾಡಲು ಹರಸಾಹಸ ಪಡುವಂತಾಗಿದೆ. ಇನ್ನು ಪಾದಚಾರಿಗಳ ಕಥೆ ಊಹೆಗೆ ನಿಲುಕದ್ದಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೆದ್ದಾರಿ ಮರಣಗುಂಡಿಗಳಾಗಿ ಮಾರ್ಪಾಟಾಗಿವೆ. ಯಾವ ಗುಂಡಿ ಯಾರ ಜೀವ ತೆಗೆಯಲು ಸಿದ್ಧವಾಗಿ ಕುಳಿತಿದೆಯೋ ಎಂಬ ಚಿಂತೆ ಇಲ್ಲಿನ ನಾಗರಿಕರದ್ದು. ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ಇಂಥ ಗುಂಡಿಗಳಿಂದಾಗಿ ಸಾವನ್ನಪ್ಪಿದ ದೃಶ್ಯ ಮರೆಯುವ ಮುನ್ನ ಮತ್ತೂಂದು ಭೀಕರ ಅಪಘಾತ ಸಂಭವಿಸುವ ಮೊದಲು ಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕಿದೆ.
ಹ್ಯಾಂಟ್ ಪೋಸ್ಟ್ವರೆಗಿನ ರಸ್ತೆ ಗುಂಡಿ ಬಿದ್ದು 2 ವರ್ಷ ಕಳೆದರೂ ಕೂಡ ಅನುದಾನ ಬಿಡುಗಡೆ, ಟೆಂಡರ್ ಪ್ರಕ್ರಿಯೆ ಎಂದು ಸರಕಾರದ ಬಗ್ಗೆ ಬೆರಳು ತೋರಿಸುವುದರ ಬದಲು ಲಭ್ಯವಿರುವ ಅನುದಾನ ಬಳಸಿಕೊಂಡು ಗುಂಡಿ ಮುಚ್ಚಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ