ಕಾನ್ವೆಂಟ್ ತೊರೆದ 3,538 ಮಕ್ಕಳು ಸರ್ಕಾರಿ ಶಾಲೆಗೆ
ಕೋವಿಡ್ ಪ್ರಯಕ್ತ ಸರ್ಕಾರಿ ಶಾಲೆಗೆ ಹೆಚ್ಚಿದ ಬೇಡಿಕೆ
Team Udayavani, Nov 7, 2020, 2:52 PM IST
ಮೈಸೂರು: ಕೋವಿಡ್-19 ಲಾಕ್ಡೌನ್ ನಂತರ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಒಮ್ಮಿಂದೊಮ್ಮೆಲೇ ಬೇಡಿಕೆ ಹೆಚ್ಚಾಗಿದ್ದು, ಖಾಸಗಿ ಶಾಲೆಗಳ ಬೆನ್ನು ಹತ್ತಿದ್ದ ಸಹಸ್ರಾರು ಪಾಲಕರು ಸರ್ಕಾರಿ ಶಾಲೆಗಳತ್ತ ವಾಲಿದ್ದಾರೆ.
ಹೌದು… ಮಕ್ಕಳಿಲ್ಲದೇ ಖಾಲಿ ಖಾಲಿಯಾಗಿದ್ದಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಶೇ. 15 ರಷ್ಟು ಹೆಚ್ಚಾಗಿದೆ. 2020-21ನೇ ಸಾಲಿಗೆ ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಖಾಸಗಿ ಶಾಲೆ ತೊರೆದು 3,538 ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಸೇರಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಆರ್ಥಿಕ ಸಂಕಷ್ಟ: ಕೋವಿಡ್ ನಂತರದ ಕಾಲದಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟ, ಆರೋಗ್ಯದ ಕಾಳಜಿಗಳು, ಆನ್ಲೈನ್ ಶಿಕ್ಷಣದ ಕಿರಿಕಿರಿ, ವಿದ್ಯಾ ಗಮದಂಥ ಸರ್ಕಾರಿ ಶಾಲೆಗಳ ಹೊಸ ರೀತಿಯ ಶಿಕ್ಷಣ ಕ್ರಮಗಳು ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಹೆಚ್ಚು ಆಕರ್ಷಿಸಿದ ಹಿನ್ನೆಲೆ ಪೋಷಕರು ಮರಳಿ ತಮ್ಮ ಮಕ್ಕಳನ್ನು ತಮ್ಮ ತಮ್ಮ ಊರಿನ ಸರ್ಕಾರಿ ಶಾಲೆಗಳಿಗೆ ದಾಖಲಿಸಿದ್ದಾರೆ. ದಾಖಲಾತಿ ಪ್ರಮಾಣ ಮುಂದು ವರಿಯುತ್ತಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯನ್ನು ಅಧಿಕಾರಿಗಳು ಇಟ್ಟುಕೊಂಡಿದ್ದಾರೆ.
ಕೋವಿಡ್ ಲಾಕ್ಡೌನ್ನಿಂದ ಬಹುತೇಕರುಕೆಲಸ ಕಳೆದುಕೊಂಡರು. ಮತ್ತೆ ಕೆಲವರ ಸಂಬಳಕ್ಕೆ ಕತ್ತರಿ ಬಿದ್ದಿದೆ. ಇದರಿಂದ ಸಾವಿರ ಸಾವಿರ ಡೊನೆಷನ್ ಕೊಟ್ಟು ಖಾಸಗಿ ಶಾಲೆಗೆ ಸೇರಿಸುವುದು ಕಷ್ಟವಾಗಿದೆ. ಅಲ್ಲದೆ, ಆನ್ಲೈನ್ ಶಿಕ್ಷಣಕ್ಕೂ ಮೊಬೈಲ್, ಲ್ಯಾಪ್ ಟಾಪ್ ಎಲ್ಲಿಂದ ತರುವುದು ಎಂಬ ಚಿಂತೆ ಪೋಷಕರಲ್ಲಿತ್ತು. ಈ ನಡುವೆ ಸರ್ಕಾರಿ ಶಾಲೆಗಳಲ್ಲಿ ಸಿಗುವವಿವಿಧ ಸೌಲಭ್ಯ, ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಗಳು ಕೋವಿಡ್ ಸಂಕಷ್ಟದ ಕಾಲದಲ್ಲಿ ಮಕ್ಕಳನ್ನು ಸೆಳೆಯುವಲ್ಲಿ ಸಫಲವಾಗಿವೆ.
1ನೇ ತರಗತಿಗೆ ಹೆಚ್ಚಿದ ದಾಖಲಾತಿ: ಪ್ರತಿವರ್ಷ ಸರ್ಕಾರಿ ಶಾಲೆಗಳಿಗೆ ಒಂದನೇ ತರಗತಿಗೆದಾಖಲಾಗುವ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಈ ಬಾರಿ ಪ್ರತಿ ಶಾಲೆಯಲ್ಲೂ 20ಕ್ಕಿಂತ ಹೆಚ್ಚಿದೆ. ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.10ರಷ್ಟು ಹೆಚ್ಚು ದಾಖಲಾತಿ ಒಂದನೇ ತರಗತಿಯಲ್ಲಿ ಸುಧಾರಣೆಕಂಡಿದೆ. ಒಟ್ಟಾರೆ ಕೊರೊನಾ ಲಾಕ್ಡೌನ್ನಿಂದಾಗಿ ಗ್ರಾಮಾಂತರ ಪ್ರದೇಶದ ಜನರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿರುವುದುಕನ್ನಡಮಾಧ್ಯಮ ಸರ್ಕಾರಿ ಶಾಲೆಗಳಿಗೆ ಮರು ಜನ್ಮ ನೀಡಿದಂತಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಡಿಡಿಪಿಐ : ಸರ್ಕಾರಿ ಶಾಲೆಗಳು ಇಂದಿಗೂ ಗುಣಮಟ್ಟಕಾಯ್ದುಕೊಂಡಿವೆ. ಇದನ್ನು ಪೋಷಕರು ಅರಿತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿದ್ದಾರೆ. ಜೊತೆಗೆ ಲಾಕ್ಡೌನ್ ಸಂದರ್ಭದಲ್ಲಿ ಟೀವಿ, ರೆಡಿಯೋ ಹಾಗೂ ವಿದ್ಯಾಗಮ ಮೂಲಕ ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಿ ಪಾಠ ಪ್ರವಚನ ನೀಡಿದ್ದು, ಈ ನಡೆಯು ಪೋಷಕರಿಗೆ ಹಿಡಿಸಿದೆ.ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ದುಡಿಮೆ ಕಡಿಮೆ ಆಗಿದೆ. ಆರ್ಥಿಕ ಸಮಸ್ಯೆ ತಲೆದೋರಿದೆ. ಆನ್ಲೈನ್ಕ್ಲಾಸ್ ಬಗ್ಗೆ ಪೋಷಕರಲ್ಲಿ ನಂಬಿಕೆಕ್ಷೀಣಿಸಿದೆ. ಈ ಎಲ್ಲಾಕಾರಣದಿಂದಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದಾಖಲಾತಿ ಹೆಚ್ಚಾಗಿದೆ ಎಂದು ಮೈಸೂರು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಚ್ಚಿದ್ದ 5 ಶಾಲೆಗಳು ಪುನಾರಂಭ : ವಿದ್ಯಾರ್ಥಿಗಳಿಲ್ಲದೇ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಗಿಲು ಹಾಕಿಕೊಂಡಿದ್ದ ಜಿಲ್ಲೆಯ 5 ಶಾಲೆಗಳು ಪುನಾರಂಭಗೊಂಡಿವೆ. ಎಚ್.ಡಿ. ಕೋಟೆ ತಾಲೂಕಿನ ದಾಳೇಗೌಡನಹುಂಡಿಯಪ್ರಾಥಮಿಕ ಶಾಲೆಯಲ್ಲಿ 14 ವಿದ್ಯಾರ್ಥಿಗಳು,ತಾರಕ ಶಾಲೆಯಲ್ಲಿ 09, ಜೋರೆಹಳ್ಳ (ಲಿಂಗೇನಹಳ್ಳಿ) ಶಾಲೆಯಲ್ಲಿ 13 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಮೂರು ಶಾಲೆಗಳು ಮೂರು ವರ್ಷಗಳ ಬಳಿಕ ಮತ್ತೆ ಆರಂಭಗೊಂಡಿವೆ. ಜೊತೆಗೆ ನಂಜನಗೂಡು ತಾಲೂಕಿನ ಚಂದ್ರವಾಡಿ ಶಾಲೆಗೆ 14 ವಿದ್ಯಾರ್ಥಿಗಳು ಸೇರ್ಪಡಿಯಾದರೆ,ಕೆ.ಆರ್. ನಗರ ತಾಲೂಕಿನಬೋರೇಗೌಡನಕೊಪ್ಪಲು ಶಾಲೆಗೆ 06 ಮಕ್ಕಳು ದಾಖಲಾಗಿದ್ದಾರೆ. ಈ ಮೂಲಕ ಮುಚ್ಚಿದ್ದ ಈ 5 ಸರ್ಕಾರಿ ಶಾಲೆಗಳು ಪುನಾರಂಭಗೊಂಡಿದೆ
-ಸತೀಶ್ ದೇಪುರ