ಅಧಿಕಾರಿಗಳು ಬಡಜನತೆ ನೆರವಿಗೆ ನಿಲ್ಲಬೇಕು: ಶಾಸಕ ಎಚ್.ಪಿ.ಮಂಜುನಾಥ್
Team Udayavani, Jan 26, 2022, 4:39 PM IST
ಹುಣಸೂರು:ವಿವಿಧತೆಯಲ್ಲಿ ಏಕತೆಯನ್ನು ಕಂಡದೇಶ ನಮ್ಮದು, ನಮ್ಮ ಸಂವಿದಾನವು ಸರ್ವರಿಗೂ ಸಮಪಾಲು-ಸಮಬಾಳು ಎಂಬ ಆಶಯದೊಂದಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿದಾನ ರಚನಾಕಾರರನ್ನು ಸ್ಮರಿಸುವ ದಿನ ಇದಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂವಿದಾನವನ್ನು ಒಪ್ಪಿ ನಡೆಯುತ್ತಿರುವ ದಿನಗಳಲ್ಲೇ ಸಂವಿದಾನದ ಆಶಯಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದ್ದರೂ ಸಾರ್ವಜನಿಕರು ನಂಬಿ ನಡೆಯುತ್ತಿದ್ದೇವೆಂದರು.
ತಾಲೂಕಿನಲ್ಲಿ ದಿನೇದಿನೇ ಕಾನೂನು ಸುವ್ಯವಸ್ಥೆ-ಆಡಳಿತ ಕುಸಿಯುತ್ತಿದೆ. ಇದರಿಂದ ಸಾರ್ವಜನಿಕರು ಕಷ್ಟ ಅನುಭವಿಸಬೇಕಾಗಲಿದೆ, ಅಧಿಕಾರಿಗಳು ಹಾದಿ ತಪ್ಪಿದಲ್ಲಿ ಜನರು ಸಂಕಷ್ಟಕ್ಕೊಳಗಾಗಲಿದ್ದಾರೆAದು ಎಚ್ಚರಿಸಿ. ಸಂವಿದಾನಾತ್ಮಕ ದಿನದಂದು ಅಧಿಕಾರಿಗಳು ಬಡಜನತೆಗೆ ಸಂವಿದಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳನ್ನು ತಲುಪಿಸುವ, ರಕ್ಷಣೆ ನೀಡುವ ಮಹತ್ತರ ಜವಾಬ್ದಾರಿ ಹೊರಬೇಕಿದೆ ಎಂದರು.
ಸಂಗೊಳ್ಳಿರಾಯಣ್ಣಸ್ಮರಣೆ:
ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ವೀರಮರಣವನ್ನಪ್ಪಿದ ದಿನವೂ ಇದಾಗಿದೆ. ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯಯದ ಹೋರಾಟ ನಮಗೆಲ್ಲ ದಾರಿದೀಪವಾಗಿದೆ.ಇಂತ ದೇಶಪ್ರೇಮಿಗಳ ಸ್ಮರಣೆ ಅತ್ಯವಶ್ಯವೆಂದರು.
ಧ್ವಜಾರೋಹಣ ನೆರವೇರಿಸಿದ ಉಪ ವಿಭಾಗಾಧಿಕಾರಿ ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿಯವರು ಮಾತನಾಡಿ ದೇಶದ ಸಂವಿದಾನ 1950 ರಲ್ಲಿ ಜಾರಿಗೆ ಬಂದಿದ್ದು, ಈ ಗಣರಾಜ್ಯೋತ್ಸವದಂದು ಸಂವಿದಾನ ರಚನಾಕಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಆಶಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯ ಎಸ್.ಜಯರಾಂ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಉಪಾಧ್ಯಕ್ಷ ದೇವನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್ ಹಾಗೂ ಸದಸ್ಯರು, ಹುಡಾ ಅಧ್ಯಕ್ಷ ಗಣೇಶ್ಕುಮಾರಸ್ವಾಮಿ, ಡಿವೈಎಸ್ಪಿ ರವಿಪ್ರಸಾದ್, ತಾ.ಪಂ.ಆಡಳಿತಾಧಿಕಾರಿ ನಂದಾ, ಇಓ ಗಿರೀಶ್, ಪೌರಾಯುಕ್ತ ರಮೇಶ್, ಬಿಇಓ ನಾಗರಾಜ್,ಕೃಷಿ ಅಧಿಕಾರಿ ವೆಂಕಟೇಶ್, ಎಇಇಗಳಾದ ಸಿದ್ದಪ್ಪ, ಬೋಜರಾಜ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಪಥಸಂಚಲನ: ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಎಸ್.ಐ. ಜಮೀರ್ ಅಹಮದ್ ನೇತೃತ್ವದ ಪೊಲೀಸ್ರಿಂದ ಧ್ವಜವಂದನೆ, ಹಾಗೂ ಕೇಂಬ್ರಿಡ್ಜ್ ಶಾಲಾ ಮಕ್ಕಳಿಂದ ದೇಶಪ್ರೇಮ ಮೆರೆವ ಸಂಗೀತ ನುಡಿಸುತ್ತಾ ಪಥಸಂಚಲನದಲ್ಲಿ ಸಾಗಿಬಂದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.