ಮೈನವಿರೇಳಿಸಿದ ವೈಮಾನಿಕ ಸಾಹಸ ಪ್ರದರ್ಶನ
Team Udayavani, Oct 3, 2019, 3:00 AM IST
ಮೈಸೂರು: ಬಾನಂಗಳದಲ್ಲಿ ಭಾರತೀಯ ವಾಯುಸೇನೆಯ ಯೋಧರು ನಡೆಸಿದ ಸಾಹಸ ಪ್ರದರ್ಶನವನ್ನು ಮೈಸೂರಿನ ಜನತೆ ಕಣ್ತುಂಬಿಕೊಂಡರು. ದಸರಾ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಏರ್ ಶೋ ವೀಕ್ಷಿಸಲು ಬನ್ನಿಮಂಟಪ ಮೈದಾನದಲ್ಲಿ ಜನ ಕಿಕ್ಕಿರಿದು ಸೇರಿದ್ದರು. 32 ಸಾವಿರ ಆಸನ ಸಾಮರ್ಥ್ಯದ ಬನ್ನಿಮಂಟಪ ಮೈದಾನ ತುಂಬಿತ್ತು. ನಿವೃತ್ತ ವಿಂಗ್ ಕಮಾಂಡರ್ ಶ್ರೀಕುಮಾರ್ ಹಾಗೂ ಸ್ಕ್ವಾಡ್ರನ್ ಲೀಡರ್ ನಿತೀಶ್ ಶರ್ಮಾ ನೇತೃತ್ವದಲ್ಲಿ ವಾಯುಪಡೆ ಯೋಧರು ಸಾಹಸ ಪ್ರದರ್ಶಿಸಿದರು.
ಏರ್ ಡೆವಿಲ್ ಹಾಗೂ ಆಕಾಶಗಂಗಾ ತಂಡ, ಪ್ಯಾರಾ ಕಮೋಂಡೋಗಳು ತಮ್ಮ ಸಾಹಸ್ನ ಪ್ರದರ್ಶಿಸಿದರು. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಆದರೆ, ಏರ್ ಶೋ ನೀಡಲು ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೊರಟಿದ್ದ ಸೇನಾ ಹೆಲಿಕಾಫ್ಟರ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಶ್ರೀರಂಗಪಟ್ಟಣದ ಅರಕೆರೆ ಬೋರೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ಹೀಗಾಗಿ ಏರ್ ಶೋ ಅನ್ನು ಮಧ್ಯಾಹ್ನ 12.15ಕ್ಕೆ ಮುಂದೂಡಲಾಯಿತು.
ಮಧ್ಯಾಹ್ನ 12ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ, ಶಾಸಕ ಎಲ್.ನಾಗೇಂದ್ರ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಕೆ.ಜ್ಯೋತಿ ಅವರು ಏರ್ಶೋಗೆ ಚಾಲನೆ ನೀಡಿದ ನಂತರ ನಾಡಗೀತೆಗೆ ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸುತ್ತಿದ್ದಂತೆ ಬಾನಂಗಳದಲ್ಲಿ ಹಾರಿ ಬಂದ ವಾಯುಸೇನೆಯ ವಿ-17 ಯುದ್ಧ ವಿಮಾನದಿಂದ ಬನ್ನಿಮಂಟಪ ಮೈದಾನದಲ್ಲಿ ಪುಷ್ಪವೃಷ್ಟಿಗರೆಯಲಾಯಿತು.
ಪುಷ್ಪವೃಷ್ಟಿ ಗರೆದು ಮೈದಾನವನ್ನು ಒಂದು ಸುತ್ತುಹಾಕಿದ ನಂತರ ಹೆಲಿಕಾಪ್ಟರ್ ಮೈದಾನದ ಮಧ್ಯೆ ಬಂದು ಅತ್ಯಂತ ಸಮೀಪದಲ್ಲಿ ಆಗಸದಲ್ಲಿ ಹಾರಾಡುತ್ತಿರುವಾಗಲೇ ಶಸ್ತ್ರಸಜ್ಜಿತ, ನೂತನ ತಾಂತ್ರಿಕತೆಯ ತರಬೇತಿ ಪಡೆದಿರುವ ಎಂಟು ಜನ ಕಮಾಂಡೋಪಡೆಯ ಯೋಧರು ಹಗ್ಗದ ಸಹಾಯದಿಂದ ಒಬ್ಬರ ಹಿಂದೊಬ್ಬರು ಮೈದಾನದಲ್ಲಿ ಇಳಿದು, ಉಗ್ರರನ್ನು ಬೇಟೆಯಾಡುವ ತುರ್ತು ಸಂದರ್ಭದಲ್ಲಿ ನಡೆಸುವ ಕಾರ್ಯಾಚರಣೆ ಮಾದರಿಯಲ್ಲಿ ಶಸ್ತ್ರಹಿಡಿದು ಮೈದಾನದ ಒಂದೊಂದು ಮೂಲೆಯನ್ನು ಸುತ್ತುವರಿದಿದ್ದು ಮೈರೋಮಾಂಚನಗೊಳಿಸಿತು. ಈ ದೃಶ್ಯಕಂಡ ವೀಕ್ಷಕರು ಎದ್ದು ಭಾರತ್ ಮಾತಾಕೀ ಜೈ ಘೋಷಣೆ ಕೂಗಿದರು.
ಅದಾದ ಹತ್ತು ನಿಮಿಷದ ಬಳಿಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಬಳಸುವ ಎಂಐ-17 ಹೆಲಿಕಾಪ್ಟರ್ ಅನ್ನು ಪುತ್ತೂರಿನ ರಾಥೋಡ್ ಚಾಲನೆ ಮಾಡುತ್ತಾ 8 ಸಾವಿರ ಅಡಿ ಎತ್ತರದಲ್ಲಿ ಬನ್ನಿಮಂಟಪ ಮೈದಾನದ ಬಳಿ ಬಂದಾಗ ಸ್ಕ್ವಾಡ್ರನ್ ಲೀಡರ್ ಅಫ್ತಾಬ್ ಖಾನ್ ಮಾರ್ಗದರ್ಶನದಲ್ಲಿ ಹೆಲಿಕಾಪ್ಟರ್ ನಲ್ಲಿದ್ದ ಆಕಾಶಗಂಗಾ ತಂಡದ ಹತ್ತು ಜನ ಯೋಧರು ಡೈವ್ ಮಾಡಿದರು. ಹಾಸನದ ಸರ್ಜೆಂಟ್ ಅವಿನಾಶ್ ವಾಯುಸೇನೆಯ ಧ್ವಜ ಇಡಿದು ಮೈದಾನದ ಮಧ್ಯ ಭಾಗಕ್ಕೆ ಮೊದಲು ಬಂದಿಳಿದರು. ಈ ವೇಳೆ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಬಳಿಕ ಮಾಸ್ಟರ್ ವಾರಂಟ್ ಆಫೀಸರ್ ಎಸ್.ಎಸ್.ಯಾದವ್, ಸ್ಕ್ವಾಡ್ರನ್ ಲೀಡರ್ ಅಫ್ತಾಬ್ ಖಾನ್, ಜೂನಿಯರ್ ವಾರಂಟ್ ಆಫೀಸರ್ ಮುಖೇಶ್ ಮೈದಾನಕ್ಕೆ ಬಂದಿಳಿದರು. ಬಳಿಕ ಸರ್ಜೆಂಟ್ ಸಲಾರಿಯಾ ಆಕಾಶಗಂಗಾ ಧ್ವಜಹಿಡಿದು ಮೈದಾನಕ್ಕೆ ಬಂದಿಳಿದರು. ಇವರ ಬೆನ್ನಲ್ಲೇ ಎಂಡಬ್ಲ್ಯೂಓ ಚೌಹಾನ್, ಡಬ್ಲ್ಯೂಓ ಅನ್ಸಾರಿ ಬಹುವರ್ಣ ಧ್ವಜಗಳನ್ನು ಇಡಿದು ಮೈದಾನದಲ್ಲಿಳಿದರು. ಕೊನೆಗೆ ವಿಂಗ್ ಕಮಾಂಡರ್ ಬಾಳಿಗ, ಎಂಡಬ್ಲ್ಯೂಓ ಯಾದವ್, ಜೆಡಬ್ಲ್ಯೂಓ ತಿವಾರಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಯಶಸ್ವಿಯಾಗಿ ಮೈದಾನದಲ್ಲಿಳಿದರು.
ಈ ಹತ್ತು ಜನ ಯೋಧರು ಬೆನ್ನಿಗೆ ಪ್ಯಾರಚೂಟ್ ಕಟ್ಟಿಕೊಂಡು ಆಗಸದಲ್ಲಿ ನೆಗೆದ ಪೆಟಲ್ ಡ್ರಾಪಿಂಗ್ ದೃಶ್ಯ ಮೈ ರೋಮಾಂಚನಗೊಳಿಸಿತು. ಜತೆಗೆ ಪ್ಯಾರಾಚೂಟ್ನಲ್ಲಿ ಭಾರತದ ರಾಷ್ಟ್ರಧ್ವಜ ಹಾಗೂ ವಾಯುಸೇನೆಯ ಧ್ವಜವನ್ನು ಪ್ರದರ್ಶಿಸಿ ದೇಶಭಕ್ತಿಯನ್ನು ಉದ್ದೀಪನಗೊಳಿಸಿದರು. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಮೂಲಕ ವೈಮಾನಿಕ ಪ್ರದರ್ಶನ ನೀಡಿದ ಯೋಧರನ್ನು ಜಿಲ್ಲಾಡಳಿತದವತಿಯಿಂದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಸ್ಮರಣಿಕೆ ನೀಡಿ ಅಭಿನಂದಿಸಿದರು. ಬಳಿಕ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅನಾಹುತ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರಂಜಿ ಮಾದರಿ, ವಾಟರ್ ಜೆಟ್, ವಾಟರ್ ಸ್ಪ್ರೆಗಳ ಮೂಲಕ ನೀರು ಹಾಕುವ ಮಾದರಿಯ ಪ್ರಾತ್ಯಕ್ಷಿಕೆ ನೀಡಲಾಯಿತು.
ಎಂಟು ಸಾವಿರ ಅಡಿ ಮೇಲಿನಿಂದ ಜಿಗಿದರು: ಎಂಟು ಸಾವಿರ ಅಡಿ ಮೇಲಿನಿಂದ ಜಿಗಿದ ಆಕಾಶಗಂಗಾ ತಂಡದಲ್ಲಿ ಹಾಸನದ ಅವಿನಾಶ್ ಮೊದಲಿಗೆ ಮೈದಾನದಲ್ಲಿ ಬಂದಿಳಿದರು. ಅವರ ಹಿಂದೆಯೇ ಒಬ್ಬರಾದ ಮೇಲೆ ಒಬ್ಬರಂತೆ ಆರು ಜನ ಬಂದಿಳಿದರು. ಅಷ್ಟರಲ್ಲಿ ಕೇಸರಿ-ಬಿಳಿ-ಹಸಿರು ಬಣ್ಣದ ಪ್ಯಾರಾಚೂಟ್ ಕಟ್ಟಿಕೊಂಡಿದ್ದ ಮೂವರು ಯೋಧರು ಒಟ್ಟಾಗಿ ಬಂದು ಪ್ಯಾರಾಚೂಟ್ನಲ್ಲೇ ಭಾರತದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಎಲ್ಲರು ಹರ್ಷೋದ್ಘಾರ ಮಾಡಿದರು. ಸುಮಾರು 45 ನಿಮಿಷಗಳ ವೈಮಾನಿಕ ಪ್ರದರ್ಶನದ ನಂತರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ 23 ಜನ ಯೋಧರು, ಮೈದಾನವನ್ನು ಒಂದು ಸುತ್ತು ಬಂದು ಜನರಿಗೆ ಧನ್ಯವಾದ ತಿಳಿಸಿದರು. ಪ್ರತಿಯಾಗಿ ವೀಕ್ಷಕರು ಎದ್ದು ನಿಂತು ಯೋಧರಿಗೆ ಸೆಲ್ಯೂಟ್ ಹೊಡೆದರು.
ರಾಜ್ಯದ ಯುವಕರೇ ಸೇನೆಗೆ ಸೇರಿ: ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸೇನೆ ಬಲಿಷ್ಠವಾಗಿದೆ. ಆಧುನಿಕ ಉಪಕರಣಗಳು ಸೇನೆಯ ಬತ್ತಳಿಕೆಗೆ ಸೇರಿವೆ. ಯೋಧರಿಗೆ ಅತ್ಯಾಧುನಿಕ ತರಬೇತಿ ದೊರೆಯುತ್ತಿದೆ. ಆದರೆ ವಾಯುಸೇನೆ, ಭೂ ಸೇನೆ, ನೌಕಾದಳದಲ್ಲಿ ಕರ್ನಾಟಕದವರು ಕಡಿಮೆ ಇದ್ದಾರೆ. ಹೀಗಾಗಿ ಯುವಕರು ಸೇನೆಗೆ ಸೇರಬೇಕು ಎಂದು ವಿಂಗ್ ಕಮಾಂಡರ್ ಬಾಳಿಗ ಸಲಹೆ ನೀಡಿದರು.