ಮೈಸೂರು-ಮಂಗಳೂರಿಗೆ ವಿಮಾನ ಹಾರಾಟ ಶೀಘ್ರ: ಏರ್ ಇಂಡಿಯಾ
ಮೈಸೂರು ಭಾಗದವರು ಮುಂಬೈಗೆ ತೆರಳಲು ಬೆಂಗಳೂರಿಗೆ ಹೋಗಿ ನಂತರ ಮುಂಬೈ ತಲುಪಬೇಕಾಗಿತ್ತು.
Team Udayavani, Oct 16, 2020, 10:05 AM IST
ಮೈಸೂರು: ಇದೇ ಮೊದಲ ಬಾರಿಗೆ ಮೈಸೂರು – ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ ಶುರುವಾಗಲಿದೆ. ಈ ಮೂಲಕ ಕರಾವಳಿ ಭಾಗದ ಜನರ ಬಹುದಿನಗಳ ಕನಸು ನನಸಾಗಲಿದೆ. ನಗರದ ಮಂಡಕಳ್ಳಿ ವಿಮಾನ ನಿಲ್ದಾಣಸ್ಥಾಪನೆಯಾಗಿ 10ವರ್ಷ ಬಳಿಕ ಮೈಸೂರಿನಿಂದ ಮಂಗಳೂರಿಗೆ ವಿಮಾನಯಾನ ಸೇವೆ ಆರಂಭವಾಗಲಿದ್ದು, ಅ.25ರಿಂದ ಏರ್ ಇಂಡಿಯಾ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ.
ಮೈಸೂರಿನಲ್ಲಿ ಕರಾವಳಿ ಪ್ರದೇಶದ 60ರಿಂದ 70 ಸಾವಿರ ಮಂದಿ ವಾಸವಿದ್ದು, ಮಂಗಳೂರಿಗೆ ಶೀಘ್ರವಾಗಿ ತೆರಳಲು ಕಷ್ಟಪಡುವಂತಾಗಿತ್ತು. ಅಲ್ಲದೇ ಮೈಸೂರು ಭಾಗದವರು ಮುಂಬೈಗೆ ತೆರಳಲು ಬೆಂಗಳೂರಿಗೆ ಹೋಗಿ ನಂತರ ಮುಂಬೈ ತಲುಪಬೇಕಾಗಿತ್ತು.
ಇದು ದೂರದ ಪ್ರಯಾಣವಾದ್ದರಿಂದ ಹಲವಾರು ಮಂದಿ ಮಂಗಳೂರಿಗೆ ವಿಮಾನ ಹಾರಾಟ ನಡೆಸುವಂತೆ ಒತ್ತಾಯವನ್ನು ಮಾಡಿದ್ದರು. ಜೊತೆಗೆ ಕರಾವಳಿ ಭಾಗದ ಹಲವು ಸಂಘ-ಸಂಸ್ಥೆಗಳು ಮನವಿ ಮಾಡಿದ್ದರು.
ಮೈಸೂರಿನ ಸಂಸದರು ಮಂಗಳೂರಿಗೂ ವಿಮಾನಯಾನ ಸೇವೆ ಆರಂಭಿಸುವ ಬಗ್ಗೆ ಉತ್ಸಾಹ ತೋರಿದ್ದರು.ಎಲ್ಲರಿಂದ ಒತ್ತಾಯ ಕೇಳಿಬಂದ ಹಿನ್ನೆಲೆ ಭಾರತೀಯ ವಿಮಾನಯಾನ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಅ.25ರಿಂದ ವಿಮಾನ ಹಾರಟ ಆರಂಭವಾಗಲಿದೆ.