ಸಿನಿಮೀಯ ಮಾದರಿ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಎಳೆಯೊಯ್ದ ಪೋಷಕರು
ಕೊಡಗಿನಲ್ಲಿ ಮದುವೆಯಾಗಿ ಮರಳುತ್ತಿದ್ದ ವೇಳೆ ಯುವಕನ ಮೇಲೆ ಹಲ್ಲೆ
Team Udayavani, Mar 31, 2022, 10:53 AM IST
ಹುಣಸೂರು: ಎರಡು ವರ್ಷಗಳ ಪ್ರೀತಿಗೆ ಮನೆಯವರ ಅಡ್ಡಿಯಿಂದಾಗಿ ಮನೆ ತೊರೆದು ಕೊಡಗಿನಲ್ಲಿ ಮದುವೆಯಾಗಿದ್ದ ಜೋಡಿಯನ್ನು ಅಡ್ಡಗಟ್ಟಿ, ಯುವಕನ ಮೇಲೆ ಯುವತಿಯ ಕಡೆಯವರು ಸಿನಿಮೀಯ ರೀತಿಯಲ್ಲಿ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಹಳ್ಳಿಯ ಅಭಿಷೇಕ್ (24) ಪಕ್ಕದ ಗ್ರಾಮದ ಚೋಳೇನಹಳ್ಳಿಯ ಅನನ್ಯ(18) ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಮದುವೆ ಆಗಲು ಸಮ್ಮತಿ ನೀಡುವಂತೆ ಪೋಷಕರನ್ನು ಕೇಳಿದಾಗ ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮದುವೆಯಾಗಲು ಇಬ್ಬರು ತೀರ್ಮಾನಿಸಿ ಮನೆ ತೊರೆದಿದ್ದಾರೆ.
ಈ ನಡುವೆ ಮನೆ ತೊರೆದಿದ್ದ ಜೋಡಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಾಲತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಮಾ.28 ರಂದು ಮದುವೆಯಾಗಿದ್ದರು. ಸಂಜೆ ಹುಣಸೂರು ನಗರದ ಬೈಪಾಸ್ನ ಕಾಫಿಡೇ ಬಳಿ ಕಾಫಿ ಕುಡಿಯಲು ಕಾರು ನಿಲ್ಲಿಸಿದ್ದ ವೇಳೆ ಯುವತಿಯ ತಂದೆ ಹಾಗೂ ಚಿಕ್ಕಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಯುವಕ ಅಭಿಷೇಕ್ನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
ಹುಣಸೂರು ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ನಾಗಮಂಗಲ ಠಾಣೆಗೆ ಯುವತಿಯನ್ನು ಕರೆಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.