ಬಾಬು ಜಗಜೀವನ ರಾಂ ಪುತ್ಥಳಿ ಭಗ್ನ
Team Udayavani, Aug 31, 2018, 11:20 AM IST
ನಂಜನಗೂಡು: ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಳಿಮಾವು ಗ್ರಾಮದಲ್ಲಿ ಬಾಬು ಜಗಜೀವನ ರಾಂ ಪುತ್ಥಳಿಯ ಕತ್ತು ಕೆಡವಿ ಭಗ್ನಗೊಳಿಸಿರುವ ಘಟನೆ ನಡೆದಿದೆ.
ಪುತ್ಥಳಿಯನ್ನು ಕಿಡಿಗೇಡಿಗಳು ಬುಧವಾರ ರಾತ್ರೋರಾತ್ರಿ ಕಿಡಿಗೇಡಿಗಳು ವಿರೂಪಗೊಳಿಸಿದ್ದು, ಗುರುವಾರ ಬೆಳಗ್ಗೆ ಗ್ರಾಮಸ್ಥರು ನೋಡಿ ವಿಷಯ ತಿಳಿದ ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಠಾಣೆಯ ಎಸ್ಐ ಪುನೀತ್ ಹಾಗೂ ಸಿಬ್ಬಂದಿ ಮತ್ತು ತಹಶೀಲ್ದಾರ್ ದಯಾನಂದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಹಿರಿಯ ಅಧಿಕಾರಿಗಳಿಗೆ ವಿಷಯ ತಲುಪಿಸಿದರು.
ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಎಸ್ಪಿ ಅಮಿತ್ ಸಿಂಗ್ ಭೇಟಿ ನೀಡಿದ್ದು ದುರಾತ್ಮರನ್ನು ಶಿಕ್ಷಿಸದೇ ಬಿಡುವುದಿಲ್ಲ. ಆದರೆ, ಗ್ರಾಮಸ್ಥರು ಉದ್ರೇಕಕ್ಕೆ ಒಳಗಾಗದೆ ಶಾಂತಿ ಕಾಪಾಡಲು ಸಹಕಾರ ನೀಡಬೇಕು. ಗ್ರಾಮದಲ್ಲಿರುವ ಎಲ್ಲಾ ಕೋಮಿನ ಸಮುದಾಯವರು ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ: ತಮ್ಮ ನಾಯಕನ ಪುತ್ಥಳಿ ಮೇಲೆ ತಲೆಯ ಮೇಲೆ ಕಲ್ಲು ಹಾಕಿ ಕತ್ತನ್ನು ಉರುಳಿಸಿದ ಕಿಡಗೇಡಿಗಳ ದುಷ್ಕೃತ್ಯ ಕಂಡ ಹುಳಿಮಾವು ಗ್ರಾಮಸ್ಥರು, ಗುರುವಾರ ಬೆಳಗಿನಿಂದಲೇ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ರಸ್ತೆಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿ ಕೂಡಲೇ ಪುತ್ಥಳಿ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.