ಪೂಜಾ ಫಲ: ಭಕ್ತರಿಗೆ ಪಂಗನಾಮ ಹಾಕಿದ್ದ ಅರ್ಚಕನ ಬಂಧನ
ಭಕ್ತರನ್ನು ನಂಬಿಸಿ 21 ಲಕ್ಷರೂ ಬಂಗಾರ ಕಳ್ಳತನ ಮಾಡಿದ್ದ ಅರ್ಚಕನ ಬಂಧನ
Team Udayavani, Nov 2, 2020, 8:15 PM IST
ಹುಣಸೂರು: ಕಷ್ಟ ಪರಿಹಾರಕ್ಕೆ ಚೌಡೇಶ್ವರಿ ದೇವರನ್ನು ಪೂಜಿಸುವಂತೆ ಭಕ್ತರನ್ನು ನಂಬಿಸಿ, 456 ಗ್ರಾಂ ಚಿನ್ನಾಭರಣ ಲಪಟಾಯಿಸಿದ್ದ ನಯ ವಂಚಕ ಅರ್ಚಕನನ್ನು ಬಿಳಿಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಾಲಯದ ಅರ್ಚಕ ಮನು ಎಂಬಾತನೇ ಬಂಧನಕ್ಕೊಳಗಾದಾತ.
ಘಟನೆ ವಿವರ:
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿಗೌಡನಹಳ್ಳಿಯ ನಿಂಗಪ್ಪ ತಮ್ಮ ಆರಾಧ್ಯ ದೈವ ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಾಲಯಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು, ಇದನ್ನೇ ಬಂಡವಾಳವಾಗಿಸಿಕೊಂಡ ಅರ್ಚಕ ಮನು ನಿಮ್ಮ ಮನೆಯಲ್ಲಿ ಚೌಡೇಶ್ವರಿ ದೇವರನ್ನು ಪ್ರತಿಷ್ಟಾಪಿಸಿ, ಪೂಜೆ ಮಾಡಿಸಿದರೆ ಕಷ್ಟ ಪರಿಹಾರವಾಗುವುದೆಂದು ನಂಬಿಸಿದ್ದ,
ಕಷ್ಟ ಪರಿಹಾರಕ್ಕೆ ಇಷ್ಟ ದೇವರ ಪೂಜೆ:
ಪೂಜೆ ಮಾಡಿಸಲು ಸಿದ್ದರಾದ ನಿಂಗಪ್ಪರ ಮನೆಯಲ್ಲಿ 2020ರ ಜೂನ್ ಮೊದಲ ವಾರದಲ್ಲಿ ಚೌಡೇಶ್ವರಿ ದೇವರನ್ನು ಪ್ರತಿಷ್ಟಾಪಿಸಿ, ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನು ದೇವರಿಗೆ ಧರಿಸಿದ್ದಲ್ಲದೆ, ನಿಂಗಪ್ಪರ ಮನೆಗೆ ಬಂದಿದ್ದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶೀಲಾ, ದೀಪ ಹಾಗೂ ಹುಣಸೂರಿನ ಸಂತೋಷ್ರಿಗೂ ನಿಮ್ಮ ಮನೆಯಲ್ಲಿರುವ ಎಲ್ಲ ಚಿನ್ನಾಭರಣಗಳನ್ನು ಪೂಜಾಕಾರ್ಯಕ್ಕೆ ತರುವಂತೆ ತಿಳಿಸಿದ್ದ, ಒಟ್ಟು 456 ಗ್ರಾಂ.ನಷ್ಟು ಚಿನ್ನಾಭರಣ ದೇವರಿಗೆ ಹಾಕಿದ್ದರು. ಪೂಜೆ ನಡೆಸಿದ ನಂತರ ಚಿನ್ನಾಭರಣವನ್ನು ನಿಂಗಪ್ಪರ ಮನೆಯ ಬೀರುವಿನಲ್ಲಿರಿಸಿ ಆಯುಧ ಪೂಜೆವರೆಗೆ ಹೊರಗೆ ತೆಗೆಯಬೇಡಿ, ವಿಜಯ ದಶಮಿಯಂದು ಒಡವೆಗಳನ್ನು ಹೊರತೆಗೆದು ಧರಿಸಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆಂದು ನಂಬಿಸಿದ್ದ.
ಬಂಗಾರ ಎಗರಿಸಿದ್ದ ಪರಾರಿ:
ನಂತರ ಎಲ್ಲರೊಂದಿಗೆ ಊಟ ಮಾಡಿದ ಪೂಜಾರಿ ಮನು ರಾತ್ರಿ 8.30ರ ವೇಳೆಯಲ್ಲಿ ಬಟ್ಟೆ ಬದಲಾಯಿಸುವ ನೆಪದಲ್ಲಿ ಚಿನ್ನಾಭರಣವಿರಿಸಿದ್ದ ಕೊಠಡಿಗೆ ತೆರಳಿ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕದ್ದು, ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದ, ಈ ಸಂಬಂಧ ಬಿಳಿಕೆರೆ ಠಾಣೆಗೆ ನಿಂಗಪ್ಪ ದೂರು ನೀಡಿದ್ದರು.
ಕದ್ದ ಚಿನ್ನ ಅಡವಿಟ್ಟಿದ್ದ ಆರೋಪಿ ಮನು:
ಎಸ್.ಪಿ.ರಿಷ್ಯಂತ್, ಅಡಿಷನಲ್ ಎಸ್.ಪಿ.ಶಿವಕುಮಾರ್, ಡಿವೈ.ಎಸ್.ಪಿ. ಸುಂದರರಾಜ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ವೃತ್ತ ನಿರೀಕ್ಷಕರಾದ ಕೆ.ಸಿ.ಪೂವಯ್ಯ ಹಾಗೂ ರವಿಕುಮಾರ್ ನೇತೃತ್ವದಲ್ಲಿ ಎಸ್.ಐ. ಜಯಪ್ರಕಾಶ್ ಹಾಗೂ ಸಿಬ್ಬಂದಿಗಳು ಆರೋಪಿಯಾದ ಅರ್ಚಕ ಮನುವನ್ನು ಆಕ್ಟೋಬರ್ 20 ರಂದು ಮುಂಜಾನೆ 6 ಗಂಟೆ ವೇಳೆಯಲ್ಲಿ ಕೆ.ಆರ್.ನಗರ ಬಸ್ ನಿಲ್ದಾಣದಲ್ಲಿ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ ವೇಳೆ ಚಿನ್ನಾಭರಣವನ್ನು ವಿವಿಧೆಡೆ ಗಿರವಿ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದ, ಆರೋಪಿ ನೀಡಿದ ಮಾಹಿತಿಯನ್ನಾಧರಿಸಿ ಹುಣಸೂರಿನ ಮುತ್ತೋಟ್ ಫೈನಾನ್ಸ್, ಮಣಪ್ಪುರಂ ಗೋಲ್ಡ್, ಕೆ.ಆರ್.ನಗರದ ಖಾಸಗಿ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಒಟ್ಟು 21 ಲಕ್ಷರೂ ಬೆಲೆ ಬಾಳುವ 456 ಗ್ರಾಂ. ಚಿನ್ನಾಭರಣಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿ$ಸಲಾಗಿದ್ದು, ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಎಸ್.ಪಿ.ರಿಷ್ಯಂತ್ ಶ್ಲಾ ಸಿದ್ದಾರೆಂದು ಅಡಿಷನಲ್ ಎಸ್.ಪಿ.ಶಿವಕುಮಾರ್ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಎ.ಎಸ್.ಐ.ಸ್ವಾಮಿನಾಯ್ಕ, ತಮ್ಮಣ್ಣ ಸಿಬ್ಬಂದಿಗಳಾದ ಪ್ರಸಾದ್, ಪ್ರಸನ್ನಕುಮಾರ್, ಅರುಣ,ಸತೀಶ್, ರವಿ, ಮಹದೇವ ಚಾಲಕರಾದ ಗೋವಿಂದ,ಚಿಕ್ಕಲಿಂಗು ಭಾಗವಹಿಸಿದ್ದರೆಂದು ವೃತ್ತ ನಿರೀಕ್ಷಕ ಪೂವಯ್ಯ ತಿಳಿಸಿದರು.