ಹುಣಸೂರಲ್ಲಿ ಬಿರ್ಸಾಮುಂಡರ 147 ನೇ ಜಯಂತಿ ಆಚರಣೆ
ಸೌಕರ್ಯ ಕಲ್ಪಿಸಿ ಇಲ್ಲವೇ ಕಾಡು ಪ್ರವೇಶ ಎಚ್ಚರಿಕೆ
Team Udayavani, Nov 21, 2022, 9:34 PM IST
ಹುಣಸೂರು: ಆದಿವಾಸಿಗಳ ಅದಿ ನಾಯಕ ಬಿರ್ಸಾಮುಂಡರವರು ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ಆದಿವಾಸಿಗಳಿಗೆ ಗೌರವ ತಂದು ಕೊಟ್ಟಿದ್ದಾರೆಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅಭಿಪ್ರಾಯಪಟ್ಟರು.
ನಗರದ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಡೀಡ್ ಸಂಸ್ಥೆಯು ಟ್ಯಾಲೆಂಟ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಬಿರ್ಸಾಮುಂಡರ 147 ನೇ ಜಯಂತಿಯಲ್ಲಿ ಮಾತನಾಡಿದ ಅವರು ಆದಿವಾಸಿಗಳು ಬಿರ್ಸಾಮುಂಡರ ಜೀವನ, ಹೋರಾಟದ ಬದುಕನ್ನು ಅರಿಯಬೇಕು. ಅತ್ತ ಕಾಡು ಇಲ್ಲದೆ ಇತ್ತ ನಾಡು ಇಲ್ಲದೆ ಕಷ್ಟದ ಜೀವನ ಸಾಗಿಸುತ್ತಿರುವ ಆದಿವಾಸಿಗಳನ್ನು ಅರಣ್ಯ ಇಲಾಖೆಯು ತನ್ನದೆ ರೀತಿಯ ಕಾನೂನುಗಳನ್ನು ತಂದು ಆದಿವಾಸಿಗಳನ್ನು ಕಾಡಿನಿಂದ ಹೊರಹಾಕಿ ಅವರ ಬದುಕನ್ನು ಅತಂತ್ರಗೊಳಿಸಿದ್ದು, ಬಿರ್ಸಾಮುಂಡರ ಮಾದರಿಯಲ್ಲಿ ಹೋರಾಟ ನಡೆಸಿ ತಮ್ಮ ಹಕ್ಕು ಹಾಗೂ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತೆ ಸಲಹೆ ನೀಡಿದರು.
ಉದ್ಘಾಟಿಸಿದ ಟ್ಯಾಲೆಂಟ್ ಸಂಸ್ಥೆಯ ನಿರ್ದೇಶಕ ನವೀನ್ರೈ ಮಾತನಾಡಿ ಪ್ರಕೃತಿಯ ರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ ಅಪಾರವಿದೆ. ಆದಿವಾಸಿಗಳು ವಿದ್ಯಾವಂತರಾಗಬೇಕು, ಕಾನೂನು ಬಗ್ಗೆ ತಿಳಿದುಕೊಂಡಿರಬೇಕೇಂದರು.
ಬಿರ್ಸಾಮುಂಡ ಬ್ರಿಟಿಷರ ಕುತಂತ್ರಕ್ಕೆ ಬಲಿ
ಒಡನಾಡಿ ಸಂಸ್ಥೆಯ ಪರಶುರಾಮ್ ಮಾತನಾಡಿ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಬ್ರಿಟಿಷರು ತಂತ್ರಗಾರಿಕೆ ಮಾಡುತ್ತಾರೆ. ಬಿರ್ಸಾಮುಂಡರವರು ಬ್ರಿಟಿಷರ ವಿರುದ್ಧ ಗೆರಿಲ್ಲಾ ಮಾದರಿ ಯುದ್ಧನೀತಿಯನ್ನು ಜಾರಿಗೆ ತರುವ ಮೂಲಕ ಬ್ರಿಟಿಷರಿಗೆ ಭಯವನ್ನು ಹುಟ್ಟಿಸಿ ಹೋರಾಟ ನಡೆಸಿದರೂ ಅವರ ಕುತಂತ್ರಕ್ಕೆ ಬಿರ್ಸಾಮುಂಡ ಬಲಿಯಾದರೆಂದರು.
ಡೀಡ್ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ ಕೇಂದ್ರ ಸರಕಾರವು ಜನಜಾತಿ ಗೌರವ ದಿವಸ್ ಎಂದು ಘೋಷಣೆ ಮಾಡಿರುವುದು ಆದಿವಾಸಿ ಸಮುದಾಯಕ್ಕೆ ಗೌರವ ತಂದಿದೆ. ಆದಿವಾಸಿಗಳಿಗೆ ಅರಣ್ಯ ಹಕ್ಕಿನ ಮಾನ್ಯತಾ ಕಾಯ್ದೆಯಲ್ಲಿ ಅವರ ಪಾರಂಪರಿಕ ಹಕ್ಕುಗಳನ್ನು ನೀಡಬೇಕು. ಮತ್ತು ಹೈಕೋರ್ಟ್ ನೀಡಿರುವ ತೀರ್ಪಿನಂತೆ ೩೪೧೮ಕುಟುಂಬಗಳಿಗೆ ಪುನರ್ವಸತಿಗೊಳಿಸಬೇಕೆಂದರು.
ಕಾಡು ಪ್ರವೇಶ ಎಚ್ಚರಿಕೆ
ಬುಡಕಟ್ಟು ಕೃಷಿಕರ ಸಂಘದ ಪಿ.ಕೆ.ರಾಮು ಮತ್ತು ಗಿರಿಜರವರು ಮಾತನಾಡಿ ೭೫ನೇಅಮೃತ ಮಹೋತ್ಸವದಲ್ಲಿ ಜನಜಾತಿ ಗೌರವ ದಿವಸ್ ಘೋಷಿಸಿರುವುದು, ಆದಿವಾಸಿ ಮಹಿಳೆ ದ್ರೌಪತಿ ಮುರ್ಮುರನ್ನು ರಾಷ್ಟçಪತಿಯನ್ನಾಗಿಸಿರುವುದು ಆದಿವಾಸಿಗಳಿಗೆ ಗೌರವ ತಂದಿದೆ. ಆದಿವಾಸಿಗಳ ಪಾರಂಪರಿಕ ಅರಣ್ಯ ಹಕ್ಕುಗಳನ್ನು ಮಾನ್ಯಮಾಡಿ ಹಕ್ಕುಪತ್ರ ನೀಡದಿದ್ದರೆ ನಾವು ಕಾಡು ಪ್ರವೇಶ ಮಾಡುತ್ತೇವೆ. ನಮ್ಮ ಅರಣ್ಯ ಸಂಪತ್ತನ್ನು ನಾವೇ ಉಳಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಇದೇ ವೇಳೆ ಕಳೆದ ೪೨ವರ್ಷಗಳಿಂದ ಹೋರಾಟ ನಡೆಸಿರುವ ಭರತವಾಡಿ ಹಾಡಿಯ ಸಣ್ಣಮ್ಮ, ನೇರಳಕುಪ್ಪೆ ಹಾಡಿಯ ಕೆಂಪಮ್ಮರನ್ನು ಗೌರವಿಸಲಾಯಿತು. ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕೆಲಸಕಾರ್ಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಡೀಡ್ನ ತಾಲೂಕು ಸಂಯೋಜಕರಾದ ಪ್ರಕಾಶ್, ಜಯಪ್ಪ, ಬೊಮ್ಮಿ, ವಿಠಲ್, ರಕ್ಷಿತ, ಶಿಕ್ಷಕರು ಹಾಗೂ ವಿವಿಧ ಹಾಡಿ ಮಂದಿ ಭಾಗವಹಿಸಿದ್ದರು.