ಬಂಡಾಯ ಶಮನಕ್ಕೆ ಮುಂದಾದ ಬಿಜೆಪಿ ನಾಯಕರು
Team Udayavani, Aug 27, 2018, 11:51 AM IST
ಎಚ್.ಡಿ.ಕೋಟೆ: ಈ ಬಾರಿಯ ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ 6ನೇ ವಾರ್ಡಿನಲ್ಲಿ ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ಪಕ್ಷದಲ್ಲಿ ಉಂಟಾದ ಗೊಂದಲದಿಂದಾಗಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಾ ರಘು ಅವರಿಗೆ ಟಿಕೆಟ್ ಕೈತಪ್ಪಿತ್ತು. ಪರಿಣಾಮ ಬಂಡಾಯ ಉಂಟಾಗಿದ್ದು ಅದನ್ನು ಶಮನ ಮಾಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಕಚೇರಿಯಲ್ಲಿ ಇದೇ ಆ.31ರ ಪುರಸಭೆ ಚುನಾವಣೆ ಸಂಬಂಧ ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಅವರು ಅಭ್ಯರ್ಥಿಗಳ ಸಭೆ ನಡೆಸಿ, ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿವರವಾಗಿ ಪಾಠ ಮಾಡಿದ ಅವರು, ಪಕ್ಷದ ಅಭ್ಯರ್ಥಿಗೆ ನಮ್ಮ ಪಕ್ಷದವರಿಂದಲೇ ಕೆಲ ವಾರ್ಡ್ಗಳಲ್ಲಿ ಬಂಡಾಯವಿರುವ ಬಗ್ಗೆ ತಿಳಿದಿದೆ.
ಅವರನ್ನು ಮನವೊಲಿಸಿ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಪಕ್ಷದ ಗೆಲುವಿಗೆ ಹಿನ್ನಡೆಯಾಗದಂತೆ ಶ್ರಮಿಸಿ ಎಂದು ತಾಕೀತು ಮಾಡಿದರು. ನಂತರ 6ನೇ ವಾರ್ಡಿನಲ್ಲಿ ಸ್ವಪಕ್ಷದವರಿಂದಲೇ ಉಂಟಾಗಿರುವ ಬಂಡಾಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡರು ಸುಮಾ ರಘು ಅವರ ಮನೆಗೆ ತೆರಳಿ ಮನವೊಲಿಸಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಹೇಳಿದರು.
ಈ ವೇಳೆ ಸುಮಾ ಅವರ ಪತಿ ರಘು ಮಾತನಾಡಿ, ನಮ್ಮ ಕುಟುಂಬ ನಮ್ಮ ತಂದೆ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿದ್ದೇವೆ. ಮತದಾರರಿಗೆ ನಮ್ಮ ಕುಟುಂಬದ ಮೇಲೆ ಪ್ರೀತಿಯಿದೆ. ಅಡೆತಡೆ ಇಲ್ಲದೆ ಗೆಲ್ಲುವ ಅಭ್ಯರ್ಥಿಯಾಗಿದ್ದರೂ ನಮಗೆ ಟಿಕೆಟ್ ನೀಡದಿರುವುದು ಬೇಸರ ತಂದಿದೆ ಎಂದು ನುಡಿದರು.
ರಾಜಕೀಯ ಸ್ಥಾನಮಾನ: ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು ತಾಲೂಕು ಘಟಕದ ಮುಖಂಡರು ಮುಂಬರುವ ದಿನಗಳಲ್ಲಿ ಕುಟುಂಬದವರಿಗೆ ಪಕ್ಷದಿಂದ ರಾಜಕೀಯ ಸ್ಥಾನಮಾನಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿ, ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಇದಕ್ಕೆ ಕುಟುಂಬದವರು ಒಪ್ಪಿಗೆ ಸೂಚಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು. ಇದರಿಂದಾಗಿ 6ನೇ ವಾರ್ಡಿನಲ್ಲಿ ಟಿಕೆಟ್ ಹಂಚಿಕೆ ವೇಳೆ ಉಂಟಾಗಿದ್ದ ಬಂಡಾಯ ಶಮನ ಅದಂತಾಗಿದೆ.
ಪುರಸಭೆ ಚುನಾವಣೆ ಉಸ್ತುವಾರಿ ಗೋಪಾಲ್ರಾವ್, ಹಂಚೀಪುರ ಕ್ಷೇತ್ರದ ಜಿ.ಪಂ.ಸದಸ್ಯ ವೆಂಕಟಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಗಿರೀಶ್, ಟೌನ್ ಅಧ್ಯಕ್ಷ ವಿವೇಕಾನಂದ, ತಾಲೂಕು ಎಸ್ಟಿ ಮೋರ್ಚ ಅಧ್ಯಕ್ಷ ಡ್ರೀಪ್ ಸಿದ್ದನಾಯ್ಕ, ಹಿರಿಯ ಮುಖಂಡರಾದ ಜೆ.ಪಿ.ಚಂದ್ರಶೇಖರ್, ಮೊತ್ತ ಬಸವರಾಜಪ್ಪ ಇತರರು ಹಾಜರಿದ್ದರು.