ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಬೆಂಬಲಿಸಿ: ಪ್ರಸಾದ್
Team Udayavani, Apr 13, 2019, 3:00 AM IST
ತಿ.ನರಸೀಪುರ: ಚುನಾವಣೆ ಬೇಡವೆಂದು ನಿರ್ಧರಿಸಿ, ಪಕ್ಷದ ಸಂಘಟನೆಗೆ ದುಡಿಯುತ್ತೇನೆ. ಯಾವುದೇ ಚುನಾವಣೆ ಸ್ಪರ್ಧಿಸಲ್ಲವೆಂದರೂ ಬಿಡದೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರು ಒತ್ತಡ ಹೇರಿದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ತಾಲೂಕಿನ ಮೂಗೂರು ಗ್ರಾಮದಲ್ಲಿ ಶುಕ್ರವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣ ಸಾಕೆಂದು ನಿರ್ಧರಿಸಿ ವಿಶ್ರಾಂತಿ ಪಡೆಯಬೇಕಿಂದಿದ್ದೆ. ಪಕ್ಷದಲ್ಲಿ ಸುಮಾರು ಡಜನ್ಗೂ ಹೆಚ್ಚು ಸ್ಪರ್ಧಾ ಆಕಾಂಕ್ಷಿಗಳು ಇದ್ದರು. ಕ್ಷೇತ್ರದ ಜನರು ನೀವೇ ಸ್ಪರ್ಧಿಸಬೇಕೆಂಬ ಅಪೇಕ್ಷೆಯನ್ನು ವ್ಯಕ್ತಡಪಸಿದ್ದರಿಂದ ಹೈಕಮಾಂಡ್ ಕಣಕ್ಕಿಳಿಸಿದೆ. ಯಾವುದೇ ಅಧಿಕಾರದ ಆಸೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದರು.
11 ಚುನಾವಣೆ ಎದುರಿಸಿರುವೆ: ರಾಜಕಾರಣದಲ್ಲಿ ಒಂಬತ್ತು ಲೋಕಸಭೆ ಚುನಾವಣೆ ಸೇರಿದಂತೆ ಒಟ್ಟು ಹನ್ನೊಂದು ಚುನಾವಣೆಗಳಲ್ಲಿ ಸ್ಪರ್ಧಿಸಿ 5 ಬಾರಿ ಸಂಸದನಾಗಿ ಹಾಗೂ ಎರಡು ಬಾರಿ ಶಾಸಕನಾಗಿದ್ದೇನೆ. ಸಚಿವನಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ.
ರಾಷ್ಟ್ರದ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಸ್ಥಿರವಾದ ಸರ್ಕಾರ ಅಧಿಕಾರಕ್ಕೆ ಬರಬೇಕು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೆ ಅತಂತ್ರ ಲೋಕಸಭೆ ನಿರ್ಮಾಣವಾಗಿ, ಅಸ್ಥಿರತೆ ಎದುರಾಗಿ ಸಂಸತ್ತಿನ ಹಿಡಿತ ಜನಪ್ರತಿನಿಧಿಗಳ ಕೈತಪ್ಪಿ, ರಾಷ್ಟ್ರಪತಿಗಳ ಆಡಳಿತ ಬರುತ್ತದೆ. ಇದನ್ನು ತಪ್ಪಿಸಲು ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕೆಂದು ಕೋರಿದರು.
ಮತ್ತೂಮ್ಮೆ ಮೋದಿ: ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ರಾಷ್ಟ್ರದ ರಕ್ಷಣಾ ಸಾಮರ್ಥ್ಯವನ್ನು ಸದೃಢಗೊಳಿಸಿ, ಐದು ವರ್ಷಗಳ ಕಾಲ ಸುಸ್ಥಿರ ಆಡಳಿತವನ್ನು ನಡೆಸಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ.
ಇಂತಹ ದಕ್ಷ ಮತ್ತ ಪ್ರಾಮಾಣಿಕ ಪ್ರಧಾನಮಂತ್ರಿಯನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಬೇಕು. ಹಾಗೆಯೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಹಿರಿಯ ನಾಯಕ ಶ್ರೀನಿವಾಸ್ಪ್ರಸಾದ್ ಅವರನ್ನು ಬೆಂಬಲಿಸಿ, ಲೋಕಸಭೆಗೆ ಕಳುಹಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್, ಪ್ರಕಾಶ್ ರಾಜಶೇಖರಮೂರ್ತಿ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿ.ಪಂ ಸದಸ್ಯರಾದ ಕೈಯಂಬಳ್ಳಿ ಜಿ.ನಟರಾಜು, ಸದಾನಂದ, ಮೈಮುಲ್ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಕ್ಷೇತ್ರಾಧ್ಯಕ್ಷ ಎಚ್.ಎಂ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ದಯಾನಂದ ಪಟೇಲ್,
ಜಿಪಂ ಮಾಜಿ ಸದಸ್ಯೆ ಶಶಿಕಲಾ ನಾಗರಾಜು, ತಾಪಂ ಸದಸ್ಯರಾದ ಎಂ.ಚಂದ್ರಶೇಖರ್, ಶಿವಮ್ಮ ಮಹದೇವ, ಮಾಜಿ ಸದಸ್ಯ ಕೆ.ಜಿ.ವೀರಣ್ಣ, ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಬಾಬೂಜಿ ಸಂಘದ ಅಧ್ಯಕ್ಷ ಮೂಗೂರು ಸಿದ್ದರಾಜು, ಮುಖಂಡರಾದ ಪ್ರತಿಮಾ, ಎಂ.ಎಂ.ಜಯಣ್ಣ, ಮಾದಪ್ಪ, ಎಂ.ವೆಂಕಟರಮಣಶೆಟ್ಟಿ, ಎ.ಎನ್.ರಂಗುನಾಯಕ, ಕುಮಾರ, ಕುರುಬೂರು ಮಂಜುನಾಥ್ ಇತರರಿದ್ದರು.