ಸಂಸ್ಕೃತಿ ಹೆಸರಿನಲ್ಲಿ ಸಂಕೋಲೆ: ವಿಷಾದ
Team Udayavani, Mar 24, 2017, 12:50 PM IST
ಎಚ್.ಡಿ.ಕೋಟೆ: ಕಲಿತ ಒಳ್ಳೆಯ ಗುಣಗಳು ಅಂಟುರೋಗ ಹರಡುವ ವೈರಸ್ ಮಾದರಿಯಲ್ಲಿ ಇತರರಿಗೂ ಹರಡಬೇಕು. ಅಂತೆಯೇ ಕೆಟ್ಟಗುಣಗಳು ಇತರಿಗೆ ಹರಡಬಾರದು ಆಗ ಮಾತ್ರ ದೇಶದ ಉದ್ಧಾರ ಸಾಧ್ಯ. ಸಂಸ್ಕೃತಿಯ ಹೆಸರಿನಲ್ಲಿ ಸಂಕೋಲೆಗಳಿಗೆ ಬಲಿಯಾಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ 3 ದಿನಗಳ ನಮ್ಮ ರಕ್ಷಣೆ ನಮ್ಮಿಂದಲೇ ಧೈರ್ಯ ಸ್ಥೈರ್ಯ ಆತ್ಮವಿಶ್ವಾಸಕ್ಕಾಗಿ ವಿದ್ಯಾರ್ಥಿನಿಯರಿಗೆ ಸ್ವಯಂ ತಕ್ಷಣಾ ತರಬೇತಿ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆತ್ಮರಕ್ಷಣೆಗಾಗಿ ಆರಂಭದಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೂ ತರಬೇತಿ ನೀಡುವ ಆಲೋಚನೆ ಇದೆ. ಕಿಡಿಗೇಡಿಗಳು ರಸ್ತೆಯಲ್ಲಿ ವಿದ್ಯಾರ್ಥಿನಿಯರನ್ನು ರೇಗಿಸುವ, ಅತ್ಯಾಚಾರಕ್ಕೆ ಯತ್ನಿಸುವ ಹಲವಾರು ಘಟನೆಗಳನ್ನು ನೋಡಿದ್ದೇವೆ. ಅಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ತಮ್ಮ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಾನ ಪ್ರಾಣ ಆತ್ಮರಕ್ಷಣೆಗೆ ನಡೆಸುವ ಹಲ್ಲೆ ಅಪರಾಧವಲ್ಲ, ಕಾನೂನು ಆತ್ಮರಕ್ಷಣೆ ವ್ಯಕ್ತಿತ್ವ ಇದರ ಬಗ್ಗೆ ಸಮುದಾಯಕ್ಕೆ ತಿಳಿಸಿದಾಗ ಅಪರಾಧಗಳನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳು ಪ್ರತಿದಿನ ಹೀಗೇ ಇರಬೇಕು ಅನ್ನುವ ತೀರ್ಮಾನದಂತೆ ನಡೆಯಬೇಕು. ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಭಗತ್ ಸಿಂಗ್ ಅವರ ಅದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾದರೆ ಬಹುತೇಕ ವಿದ್ಯಾರ್ಥಿಗಳು ಸಮಾಜ ಮುಖೀಯಾಗುತ್ತಾರೆ ಎಂದು ತಿಳಿಸಿದರು.
ಅತೀ ಶೀಘ್ರದಲ್ಲಿ ತಾಲೂಕಿನಲ್ಲಿ 10 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೆವೆ. ಬಂದೂಕು ತರಬೇತಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಕಲಿಕೆ ಸೇರಿದಂತೆ ಇನ್ನಿತರ ವಿಚಾರವಾಗಿ ತರಬೇತಿ ನೀಡಲಾಗುವುದು. ನಾಗರಿಕರು ಭಾಗವಹಿಸಿ ಯೋಜನೆಯ ಉಪಯೋಗ ಪಡೆದುಕೊಂಡು ಉತ್ತಮ ಗುಣಗಳು ಗುಣಮಟ್ಟದ ಸಾಧನೆಗಳ ಬಗ್ಗೆ ನೀವು ತಿಳಿದುಕೊಂಡು ಇತರರಿಗೂ ತಿಳಿಸುಬೇಕು.
ಎಲ್ಲಕ್ಕಿಂತ ಮಿಗಿಲಾಗಿ ಗಂಡು ಮಕ್ಕಳಷ್ಟೇ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೂ ಪೋಷಕರು ನೀಡುವಂತೆ ಪೋಷಕರಲ್ಲಿ ಮನವಿ ಮಾಡಿಕೊಂಡರು. ಕಾಲೇಜಿನ ಪ್ರಚಾರ್ಯ ಶಶಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಡಿ.ಕೋಟೆ ಮತ್ತು ಸರಗೂರು ಕಾಲೇಜಿನ ವಿದ್ಯಾರ್ಥಿನಿಯರು 3 ದಿನಗಳ ಕಲಿತ ತರಬೇತಿ ಪಡೆದ ಕರಾಟೆ ಪ್ರದರ್ಶನಗಳ ವಿವಿಧ ಭಂಗಿಗಳ ಪ್ರದರ್ಶನ ನೀಡಿದರು.
ಸರ್ಕಲ್ಇನ್ಸ್ಪೆಕ್ಟರ್ ಹರೀಶ್ಕುಮಾರ್, ಸಬ್ಇನ್ಸ್ಪೆಕ್ಟರ್ಗಳಾದ ಅಶೋಕ್, ಸುರೇಶ್, ತೋಟದ ಬೆಳೆಗಾರರ ಸಂಘದ ಅಧ್ಯಕ್ಷ ಮಲಾರಪುಟ್ಟಯ್ಯ, ಮಹದೇವಯ್ಯ, ತರಬೇತಿದಾರರಾದ ರವಿಶಂಕರ್, ಮನೋಜ್ಕುಮಾರ್, ಚಲಪತಿ, ಕಾಲೇಜಿನ ಉಪನ್ಯಾಸಕಿಯರಾದ ಉಷಾದೇವಿ, ಸವಿತ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.