ಮದುವೆಗೆ ಪೋಷಕರ ವಿರೋಧ: ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಶರಣು
Team Udayavani, Dec 2, 2021, 1:05 PM IST
Representative Image used
ಮೈಸೂರು: ಮದುವೆಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸೆಂಟ್ ಫಿಲೋಮಿನಾ ಚರ್ಚ್ ಬಳಿಯ ಖಾಸಗಿ ಲಾಡ್ಜ್ನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಿ.ಜಿ.ಸತೀಶ್ (21) ಹಾಗೂ ವರಲಕ್ಷ್ಮೀ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಒಂದೇ ಊರಿನ ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ನಂಜನಗೂಡಿನಲ್ಲಿ ತಂಗಿದ್ದ ವರಲಕ್ಷ್ಮೀ, ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರೆ, ಸತೀಶ್ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿದ್ದರು. ಪ್ರೀತಿಯ ವಿಷಯ ಅರಿತ ವರಲಕ್ಷ್ಮೀ ಅವರ ತಂದೆ ಸಿದ್ದಲಿಂಗ ನಾಯಕ, ಸರ್ಕಾರಿ ಕೆಲಸ ತೆಗೆದುಕೊಂಡರೆ ಮದುವೆ ಮಾಡಿಕೊಡುವುದಾಗಿ ಷರತ್ತು ವಿಧಿಸಿದ್ದರು.
ಇದನ್ನೂ ಓದಿ:- ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ ; ಐಸಿಯುನಲ್ಲಿ ಚಿಕಿತ್ಸೆ
ಬಳಿಕ ಸತೀಶ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗಿರಲಿಲ್ಲ. ಇದರಿಂದ ತಮ್ಮ ಮದುವೆ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಇಬ್ಬರು ಮೈಸೂರಿಗೆ ಮಂಗಳವಾರ ಬಂದು ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದಾರೆ. ಕೋಣೆಯಲ್ಲಿ ಸತೀಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ ವರಲಕ್ಷ್ಮೀ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.