ಪೊಗರು ಸಿನಿಮಾ ವಿರುದ್ಧ ಬ್ರಾಹ್ಮಣ ಸಂಘ ಪ್ರತಿಭಟನೆ
Team Udayavani, Feb 24, 2021, 12:57 PM IST
ಮೈಸೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡಿ ಜಾತಿ ನಿಂದನೆ ಮಾಡಿರುವ ದೃಶ್ಯಗಳನ್ನು ತೆಗೆಯಬೇಕು, ಅಲ್ಲಿಯವರೆಗೆ ಚಿತ್ರ ಪ್ರದರ್ಶನ ನಿಲ್ಲಿಸಬೇಕು ಎಂದು ಒತ್ತಾಯಿಸಿ ಬ್ರಾಹ್ಮಣ ಸಂಘ ಸಂಸ್ಥೆಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಸಮಾವೇಶಗೊಂಡ ಪ್ರತಿಭಟನಾಕಾರರು, ಚಿತ್ರ ತಂಡ ಹಾಗೂ ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ಪೊಗರು ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದಲ್ಲದೇ, ಕೀಳಾಗಿ ನಡೆಸಿಕೊಂಡಿದ್ದಾರೆ. ಅವಹೇಳನವಾಗಿರುವುದು ಬ್ರಾಹ್ಮಣ ಸಮುದಾಯಕ್ಕೆ, ಬ್ರಾಹ್ಮಣ ಸಮುದಾಯ ಮಾತ್ರವಲ್ಲ ಹಿಂದೂ ಸಮುದಾಯಕ್ಕೂ ಅವಮಾನ ವಾಗಿದೆ. ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲ, ಬ್ರಾಹ್ಮಣರಲ್ಲಿ ಶಕ್ತಿ ಇಲ್ಲ, ಹಾಗಾಗಿ ನಾವು ಏನು ಮಾಡಿದರೂ ನಡೆಯುತ್ತದೆ. ನಾವು ಹೋಗಿ ಅವರ ಬಳಿ ಕ್ಷಮಿಸಿ ಎಂದು ಕೇಳಿದರೆ ಬಿಟ್ಟು ಬಿಡುತ್ತಾರೆಂಬ ಕೆಟ್ಟ ಅಭಿ ಪ್ರಾಯ ಬಂದಿದೆ. ನಮ್ಮ ಸಮುದಾಯದವರನ್ನು ಹೇಗೆಂದರೆ ಹಾಗೆ ನಡೆಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ನಾವು ಸುಮ್ಮನಿರುವುದಿಲ್ಲ. ಚಿತ್ರ ಬ್ಯಾನ್ ಆಗಬೇಕು. ಅವಹೇಳನಕಾರಿ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಚಿತ್ರದಲ್ಲಿ ಜಾತಿನಿಂದನೆ ಒಂದೇ ಅಲ್ಲ ಅವ ಹೇಳನಕಾರಿ ಹೇಳಿಕೆಗಳು ಸಹ ಇವೆ. ಹೀಗಾಗಿ ಚಿತ್ರದಲ್ಲಿರುವ ಅವಹೇಳನಕಾರಿ ಹೇಳಿಕೆಯನ್ನು ತೆಗೆಯುವಂತೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಚಿತ್ರ ಪ್ರದರ್ಶನ ಮುಂದುವರಿದರೆ ಚಿತ್ರಮಂದಿರಗಳ ಬಳಿ ಮಾತ್ರವಲ್ಲದೆ ಎಲ್ಲ ತಾಲೂಕು, ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡುತ್ತೇವೆ. ಜತೆಗೆ ನಿರ್ಮಾಪಕ ಗಂಗಾಧರ್, ನಿರ್ದೇಶಕ ನಂದಕಿಶೋರ್ ಮೇಲೆ ಎಫ್ಐಆರ್ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ.ಕೆ ರಘುರಾಂ ವಾಜಪೇಯಿ, ನಂ ಶ್ರೀಕಂಠ ಕುಮಾರ್, ಸಿ.ವಿ.ಪಾರ್ಥ ಸಾರಥಿ, ಎಂ.ಕೆ.ಪುರಾಣಿಕ್, ಪಿ.ವಿ.ನಾಗೇಶ್, ಮೋಹನ್, ರಾಮ್ದಾಸ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮ್ ಪ್ರಸಾದ್, ಎಂ.ಸಿ.ರಮೇಶ್, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್.ಶ್ರೀಧರ್ ಮೂರ್ತಿ, ಸಂಘಟನೆಯ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಂ.ಡಿ.ಪಾರ್ಥ ಸಾರಥಿ, ಅಪೂರ್ವ ಸುರೇಶ್, ಪ್ರಶಾಂತ್, ಗುರುಪ್ರಸಾದ್, ಸುಮಂತ್ ಶಾಸ್ತ್ರಿ, ಜಯಸಿಂಹ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.