ಗ್ರಾಪಂಗಳಿಗೆ ಕಟ್ಟಡ ನಿರ್ಮಾಣ : ಹುಣಸೂರು ಫಸ್ಟ್
Team Udayavani, Nov 16, 2020, 4:26 PM IST
ಹುಣಸೂರು: ಗ್ರಾಮ ಪಂಚಾಯ್ತಿಗಳಿಗೆ ಹೊಸ ಕಟ್ಟಡ ನಿರ್ಮಿಸುವಲ್ಲಿ ಜಿಲ್ಲೆಯಲ್ಲೇ ಹುಣಸೂರು ತಾಲೂಕು ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲಿ ನಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹುಸೇನ್ ಪುರ ಗ್ರಾಮ ಪಂಚಾಯ್ತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸೌಧದಂತೆ ಈ ಗ್ರಾಮಸೌಧ ಗಳು ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯ್ತಿ ಪುನರ್ ವಿಂಗಡಣೆ ವೇಳೆ ತಾಲೂಕಿನಲ್ಲಿ11 ಹೊಸ ಗ್ರಾಪಂಗಳು ಅಸ್ತಿತ್ವಕ್ಕೆ ಬಂದಿದ್ದು, ತಾಲೂಕಿಗೆ ಹೆಚ್ಚಿನ ಅನುದಾನ ಹಾಗೂ ಸವಲತ್ತುಗಳು ದೊರೆಯಲಿವೆ ಎಂದರು.
ಗ್ರಾಮ ಪಂಚಾಯ್ತಿಗಳು ಆಧುನಿಕ ದೇವಾಲಯವಿದ್ದಂತೆ. ಸ್ಥಳೀಯರಿಗೆ ನ್ಯಾಯ ಸಿಗುವಂತಾಗಬೇಕು, ಸರ್ಕಾರದ ಯೋಜನೆಗಳು, ಸವಲತ್ತುಗಳು ಅರ್ಹರಿಗೆ ದೊರೆಯಬೇಕು. ಇದೀಗ ಪ್ರತಿ ಗ್ರಾಪಂಗೆ 20 ಮನೆಗಳು ಮಂಜೂರಾಗಿದ್ದು, ಇನ್ನೆರಡು ತಿಂಗಳಲ್ಲಿ ಆಯ್ಕೆನಡೆಯಲಿದೆ.ಕೋವಿಡ್ ದಿಂದಾಗಿಕಳೆದೊಂದು ವರ್ಷದಿಂದಅಭಿವೃದ್ಧಿಕಾರ್ಯಗಳುಕುಂಠಿತವಾಗಿದ್ದು,ಮುಂದಿನ ದಿನಗಳಲ್ಲಿ ಅಭಿವೃದ್ಧಿ ಶಕೆ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಗ್ರಾಪಂ ಉತ್ತಮ ಕಾರ್ಯನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವುದು, ಇದಕ್ಕಾಗಿ ಹಿಂದಿನ ಪಿಡಿಒ ಛಾಯಾದೇವಿ ಮತ್ತವರ ತಂಡ ಹಾಗೂ ಅಂದಿನ ಆಡಳಿತ ಮಂಡಳಿಯ ಶ್ರಮವನ್ನು ಶಾಸಕ ಎಚ್.ಪಿ.ಮಂಜುನಾಥ್ ಪ್ರಶಂಸಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿ,ಕೇಂದ್ರ ಸರಕಾರ ನೇರವಾಗಿ ಗ್ರಾಪಂಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಎಲ್ಲೆಡೆ ಗ್ರಾಪಂ ಕಟ್ಟಡ ಸೇರಿದಂತೆ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತಿವೆ. ರಾಜೀವಗಾಂಧಿ ಸೇವಾಕೇಂದ್ರ ನಿರ್ಮಾಣಕ್ಕೆ
ಉದ್ಯೋಗಖಾತರಿ ಯೋಜನೆಯಡಿ 18.25 ಲಕ್ಷ ರೂ. ಹಾಗೂ 14 ನೇ ಹಣಕಾಸು ಯೋಜನೆಯಡಿ 1.75 ಲಕ್ಷ ರೂ. ಹಾಗೂ ಹಿಂದಿನ ಸಿದ್ದರಾಮಯ್ಯನವರ ಸರ್ಕಾರ ನೀಡಿದ್ದ 20 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಿದೆ ಎಂದರು.
ಗ್ರಾಮ ಪಂಚಾಯ್ತಿಯು ಕ್ರಿಯಾಯೋಜನೆ ರೂಪಿಸು ವಾಗ ಗ್ರಾಮಸ್ಥರು ಸೂಚಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಪಿಡಿಒ ನಾಗರಾಜ್ ಅವರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಸದಸ್ಯೆ ಶಕುಂತಲ, ತಾಪಂ ಇಒ ಗಿರೀಶ್, ತಹಶೀಲ್ದಾರ್ ಬಸವರಾಜ್, ಗ್ರಾಪಂ ಮಾಜಿ ಅಧ್ಯಕ್ಷೆ ಕಲ್ಯಾಣಮ್ಮ, ಉಪಾಧ್ಯಕ್ಷೆ ಧನ ಲಕ್ಷ್ಮೀ,ಮಾಜಿಸದಸ್ಯರು, ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಮಹಿಳಾ ಅಧ್ಯಕ್ಷೆ ವೆಂಕಟಮ್ಮ, ಯುವ ಮೋರ್ಚಾ ಅಧ್ಯಕ್ಷ ಕಿರಿಜಾಜಿ ಮಹದೇವ್, ಪಿಡಿಒ ನಾಗರಾಜ್, ಕಾರ್ಯದರ್ಶಿ ಅನ್ನಪೂರ್ಣ ಇತರರಿದ್ದರು. ಇದೇ ವೇಳೆ ಗ್ರಾಪಂವತಿಯಿಂದ ನಿರ್ಗಮಿತ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರನ್ನು ಗೌರವಿಸಲಾಯಿತು.