ಅರಮನೆ ನಗರಿಯಲ್ಲಿ ಬಟರ್ ಫ್ಲೈ ಚಿತ್ರೀಕರಣ
Team Udayavani, Apr 8, 2018, 12:53 PM IST
ಮೈಸೂರು: ನಟ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಹಿಂದಿಯ ಪ್ರಖ್ಯಾತ ಕ್ವೀನ್ ಚಿತ್ರದ ಕಥೆಯನ್ನು ಆಧರಿಸಿ ಏಕಕಾಲದಲ್ಲಿ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಟರ್ ಫ್ಲೈಸಿನಿಮಾ ಹೊರತರುವ ಮೂಲಕ ದಾಖಲೆ ಬರೆಯಲು ಚಿತ್ರತಂಡ ಮುಂದಾಗಿದೆ.
ಮೈಸೂರಿನ ಲಲಿತ್ ಮಹಲ್ ರಸ್ತೆಯ ಕೃಷ್ಣಪ್ರಸಾದ ನಿವಾಸದಲ್ಲಿ ನೃತ್ಯ ನಿರ್ದೇಶಕ ಸೀಸರ್ ಗೊನ್ಸಲ್ವಸ್ ನಿರ್ದೇಶನದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ನಾಯಕಿ ನಟಿ ಪಾರುಲ್ ಯಾದವ್, ಪೋಷಕ ಕಲಾವಿದರಾದ ಧರ್ಮೇಂದ್ರ ಅರಸ್, ಪದ್ಮಜಾರಾವ್, ಭಾರ್ಗವಿ ನಾರಾಯಣ್ ಮುಂತಾದವರು ಅಭಿನಯಿಸುತ್ತಿದ್ದಾರೆ.
ಕನ್ನಡ, ತಮಿಳು, ತೆಲಗು ಮತ್ತು ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಆಗಸ್ಟ್ ವೇಳೆಗೆ ಕನ್ನಡ ಮತ್ತು ತೆಲುಗು ಸಿನಿಮಾ ಬಿಡುಗಡೆಗೆ ಚಿತ್ರ ತಂಡ ಮುಂದಾಗಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಿಂದಾಗಿ ತಮಿಳು ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹೀಗಾಗಿ ತಮಿಳು ಮತ್ತು ಮಲಯಾಳಂ ಚಿತ್ರಗಳು ನಂತರದ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ರಮೇಶ್ ಅರವಿಂದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕನ್ನಡ ಸಿನಿಮಾದ ಚಿತ್ರೀಕರಣ ಬಹುಪಾಲು ಪೂರ್ಣಗೊಂಡಿದೆ. ನಾಯಕಿ ಪ್ರಧಾನವಾದ ಈ ಸಿನಿಮಾದಲ್ಲಿ ಪಾರುಲ್ ಯಾದವ್ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.
ದುಂಬಿಯೊಂದು ಹೇಗೆ ಚಿಟ್ಟೆಯಾಗುತ್ತದೋ ಹಾಗೆಯೇ ಮುಗª ಹುಡುಗಿಯೊಬ್ಬಳ ಮದುವೆ ನಿಗದಿಯಾಗಿ ಮದುವೆಯ ಹಿಂದಿನ ದಿನವೇ ಮದುವೆ ನಿಂತು ಹೋಗುತ್ತದೆ. ಇದರಿಂದ ಬೇಸತ್ತ ಆಕೆ ಇಡೀ ವಿಶ್ವವನ್ನೇ ಸುತ್ತುತ್ತಾಳೆ. ಕ್ವೀನ್ ಸಿನಿಮಾದ ಕಥೆಯಾದರೂ ವಿಭಿನ್ನ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ ಎಂದು ರಮೇಶ್ ಅರವಿಂದ್ ವಿವರಿಸಿದರು.
ಈ ಚಿತ್ರ ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ಮೂಡಿಬಂದರೂ ಪ್ರತಿಯೊಂದು ಚಿತ್ರಕ್ಕೂ ಸ್ವಲ್ಪ ಭಿನ್ನತೆ ಇರುತ್ತದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ನಾಲ್ಕು ಹಾಡನ್ನು ಜಯಂತ್ ಕಾಯ್ಕಿಣಿ, ಒಂದು ಹಾಡನ್ನು ಯೋಗರಾಜ್ ಭಟ್ ಮತ್ತು ಪ್ರದ್ಯುಮ್ನ ರಚಿಸಿದ್ದಾರೆ.
ನಾಯಕ ನಟಿ ಪಾರುಲ್ ಯಾದವ್ ಮಾತನಾಡಿ, ಈ ಸಿನಿಮಾ ಕಥೆ ಕೇಳಿಯೇ ತುಂಬಾ ಇಷ್ಟಪಟ್ಟೆ. ತೀರಾ ಸರಳ ಜೀವನವನ್ನು ಕಥೆ ಆಧರಿಸಿದೆ. ಇದೊಂದು ವಿಶಿಷ್ಟವಾದ ಕಥೆ. ಚಿತ್ರತಂಡದಲ್ಲಿ ನನಗೆ ಮನ್ನಣೆ ದೊರೆಯುತ್ತಿದೆ. ರಮೇಶ್ ಅರವಿಂದ್ ಅವರ ಬಳಿ ಕೆಲಸ ಮಾಡುವುದೇ ಹೆಮ್ಮೆಯ ಸಂಗತಿ ಎಂದು ಖುಷಿ ಹಂಚಿಕೊಂಡರು.
ಬಾಲ ನಟ ಪರಿಚಯ: ಶಿರಸಿಯ ಸಮರ್ಥ್ ಎಂಬ ಬಾಲ ಕಲಾವಿದನನ್ನು ಈ ಸಿನಿಮಾದಲ್ಲಿ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ಬಾಲಕನನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಮೂಲದಿಂದ ಬಂದ ಈ ಬಾಲಕನಿಗೆ ಸಿನಿಮಾ ರಂಗದಲ್ಲಿ ಒಳ್ಳೆ ಭವಿಷ್ಯವಿದೆ ಎಂದು ರಮೇಶ್ ಅರವಿಂದ್ ಹೇಳಿದರು. ಛಾಯಾಗ್ರಹಕ ಸತ್ಯ ಹೆಗಡೆ, ನಿರ್ಮಾಪಕ ಮನು ಕುಮಾರ್, ಕಲಾವಿದರಾದ ಪದ್ಮಜಾರಾವ್, ಭಾರ್ಗವಿ ನಾರಾಯಣ್, ನಾಗಸುಂದರ್ ಹಾಜರಿದ್ದರು.