ಆಯೋಗಕ್ಕೆ ದಾಖಲೆ ಸಹಿತ ಲೆಕ್ಕ ಕೊಡಿ
Team Udayavani, Mar 8, 2019, 7:17 AM IST
ಹುಣಸೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯ ಮುದ್ರಣಾಲಯ ಹಾಗೂ ಕಲ್ಯಾಣ ಮಂಟಪಗಳವರು ಚುನಾವಣಾ ವಿಭಾಗಕ್ಕೆ ಕಡ್ಡಾಯವಾಗಿ ಲೆಕ್ಕ ನೀಡಬೇಕೆಂದು ಮೈಸೂರು-ಕೊಡಗು ಕ್ಷೇತ್ರದ ಹುಣಸೂರು ತಾಲೂಕು ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರಯ್ಯ ಸೂಚಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಮಂಟಪ ಮತ್ತು ಪ್ರಿಂಟಿಂಗ್ ಪ್ರಸ್ ಮಾಲಿಕರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಚುನಾವಣೆಗೆ ಸಂಬಂಧಿಸಿದಂತ ಯಾವುದೇ ಕರಪತ್ರ, ಬ್ಯಾನರ್, ಫ್ಲೆಕ್ಸ್ನಲ್ಲಿ ಮುದ್ರಕರ ಹೆಸರು, ಪಕ್ಷ, ಅಭ್ಯರ್ಥಿ ಮತ್ತು ಎಷ್ಟು ಸಂಖ್ಯೆಯಲ್ಲಿ ಮುದ್ರಿಸಲಾಗಿದೆ ಎಂಬುದನ್ನು ನಮೂದಿಸುವುದು ಕಡ್ಡಾಯ ಹಾಗೂ ಕಲ್ಯಾಣ ಮಂಟಪದವರು ಯಾವುದೇ ಪಕ್ಷಗಳು, ಅಭ್ಯರ್ಥಿಗಳಿಗೆ ಬಾಡಿಗೆ ನೀಡಿದ್ದಲ್ಲಿ ಅಂತವರು ಚುನಾವಣಾ ವಿಭಾಗಕ್ಕೆ ದಾಖಲೆ ಸಹಿತ ಮಾಹಿತಿ ನೀಡಬೇಕು.
ಇದನ್ನು ಉಲ್ಲಂಘಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕಾನೂನು ಕ್ರಮಕ್ಕೆ ಒಳಗಾಗಬೇಕಾದೀತೆಂದು ಎಚ್ಚರಿಕೆ ನೀಡಿದರು. ತಾಲೂಕಿನಲ್ಲಿ ಒಟ್ಟು 16 ಪ್ರಿಂಟಿಂಗ್ ಪ್ರಸ್ ಹಾಗೂ 43 ಕಲ್ಯಾಣ ಮಂಟಪಗಳಿದ್ದು, ಪ್ರತಿಯೊಬ್ಬರೂ ದಾಖಲೆಯೊಂದಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ವೆಚ್ಚಕ್ಕೆ ವೀಕ್ಷಕರ ನೇಮಕ: ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ವೀಕ್ಷಕರು ನೇಮಕಗೊಳ್ಳಲಿದ್ದಾರೆ. ಪಕ್ಷದ ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ನಿತ್ಯ ಇ-ಮೇಲ್ ಮೂಲಕ ಮಾಹಿತಿ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್ ಬಸವರಾಜು, ತಾಪಂ ಇಒ ಕೃಷ್ಣಕುಮಾರ್, ಚುನಾವಣಾ ಶಿರಸ್ತೇದಾರ್ ಸಿದ್ದಪ್ಪ, ಗಣೇಶ್ ಹಾಗೂ ಮುದ್ರಣಾಲಯ ಮತ್ತು ಕಲ್ಯಾಣ ಮಂಟಪದ ಮಾಲಿಕರು ಉಪಸ್ಥಿತರಿದ್ದರು.