ಕ್ಯಾಂಟೀನ್ ತೆರೆದರೂ ಊಟ ತಿಂಡಿಯಿಲ್ಲ!
Team Udayavani, Mar 5, 2019, 7:47 AM IST
ಎಚ್.ಡಿ.ಕೋಟೆ: ಬಡವರು, ಕಾರ್ಮಿಕರು, ಶ್ರಮಿಕರ ಹಸಿವು ನೀಗಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಅನ್ನು ಪಟ್ಟಣದಲ್ಲಿ ಉದ್ಘಾಟಿಸಿದ್ದರೂ ಜನತೆಗೆ ಊಟ, ಉಪಾಹಾರ ಮಾತ್ರ ದೊರೆಯುತ್ತಿಲ್ಲ.
ಪಟ್ಟಣದ ಬಾಪೂ ಸರ್ಕಲ್ ಬಳಿ ತೆರೆದಿರುವ ಇಂದಿರಾ ಕ್ಯಾಂಟೀನ್ ಅನ್ನು ಕಳೆದ ನಾಲ್ಕು ದಿನಗಳ ಹಿಂದೆ, ಅಂದರೆ ಮಾರ್ಚ್ 1 ರಂದು ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಆರ್.ಧ್ರುವನಾರಾಯಣ, ಶಾಸಕ ಅನಿಲ್ ಚಿಕ್ಕಮಾದು ಕ್ಯಾಂಟೀನ್ ಉದ್ಘಾಟಿಸಿದ್ದರು. ಆದರೆ, ಕ್ಯಾಂಟೀನ್ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲೂ ಈ ರೀತಿ ನಿರ್ಲಕ್ಷ್ಯವಹಿಸಿದರೆ ಮುಂದೆ ಹೇಗೆ ಕಾರ್ಯನಿರ್ವಹಿಸಬಹುದು ಎಂಬ ಪ್ರಶ್ನೆ ಎದುರಾಗಿದೆ.
10 ರೂ.ಗೆ ಊಟ ಹಾಗೂ 5 ರೂ.ಗೆ ಉಪಾಹಾರ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂದು ಕನಸು ಕಂಡಿದ್ದ ಜನತೆ ಇದೀಗ ಇಂದಿರಾ ಕ್ಯಾಂಟೀನ್ ಭಾಗ್ಯ ಸಿಗದೆ ನಿರಾಶರಾಗಿದ್ದಾರೆ. ಕ್ಯಾಂಟೀನ್ ಉದ್ಘಾಟನೆ ಆದರೂ ಕ್ಯಾಂಟೀನ್ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಸಭೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕ್ಯಾಂಟೀನ್ ಸ್ಥಗಿತಗೊಂಡಿದೆ ಎಂದು ಪಟ್ಟಣದ ನಾಗರಿಕರು ಕಿಡಿಕಾರಿದ್ದಾರೆ.
ಕಳಪೆ ಕಾಮಗಾರಿ: ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಹಠಕ್ಕೆ ಬಿದ್ದ ಇಲ್ಲಿನ ಪುರಸಭೆ ಅಧಿಕಾರಿಗಳು ಕ್ಯಾಂಟೀನ್ ಸುತ್ತ ಸುಮಾರು 7 ಲಕ್ಷ ರೂ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ.
30 ರಿಂದ 40 ದಿನ ನಡೆಯಬೇಕಿದ್ದ ಕಾಮಗಾರಿಯನ್ನು ಮೂರೇ ದಿನದಲ್ಲಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಕಳೆಪ ಗುಣಮಟ್ಟದಿಂದ ಕೂಡಿದೆ. ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ತಾಲೂಕಿಗೆ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ತನಿಖೆ ನಡೆಸಿ: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡರೂ ಕಾರ್ಯನಿರ್ವಹಿಸದಿರುವ ಕುರಿತು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ವಿಜಯಕುಮಾರ್ ಅವರಿಗೆ ಸಾರ್ವಜನಿಕರು ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಗುತ್ತಿಗೆದಾರನ ಬಿಲ್ ಹಣ ತಡೆ ಹಿಡಿದು ಕಾಮಗಾರಿ ಗುಣಮಟ್ಟವನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆಗ್ರಹ: ಒಟ್ಟಾರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡರೂ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಯಾವುದೇ ಮಾಹಿತಿಯೂ ಸಿಗುತ್ತಿಲ್ಲ. ಅಗ್ಗದ ದರಲ್ಲಿ ಊಟ, ಉಪಾಹಾರ ಸಿಗುವ ಕನಸು ಕಂಡಿದ್ದ ಪಟ್ಟಣದ ಜನತೆಗೆ ನಿರಾಶೆಯಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಹಾಗೂ ಶಾಸಕರು ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ಸಮರ್ಪಕವಾಗಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಎಚ್.ಡಿ. ಕೋಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ದು, ಅಡುಗೆ ತಯಾರಿಸಲು ಮೈಸೂರು ಮೂಲದವರು ಟೆಂಡರ್ ಪಡೆದಿದ್ದಾರೆ. ಆಡುಗೆ ತಯಾರಿಕೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ಲಭ್ಯವಿದ್ದು, ಶೀಘ್ರದಲ್ಲೇ ಕ್ಯಾಂಟೀನ್ ಆರಂಭಿಸುತ್ತಾರೆ.
-ಸುರೇಶ್, ಕಂದಾಯಾಧಿಕಾರಿ, ಪುರಸಭೆ
ಬಡವರ, ಕೂಲಿ ಕಾರ್ಮಿಕರ ಹಸಿವು ನಿಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಪಟ್ಟಣದಲ್ಲಿ ಕ್ಯಾಂಟೀನ್ ಉದ್ಘಾಟಿಸಲು ತರಾತುರಿಯಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ. ಇದು ಕಳಪೆ ಗುಣಮಟ್ಟದಿಂದ ಕೂಡಿದೆ. ಅಲ್ಲದೇ ಉದ್ಘಾಟನೆಯಾದ ನಾಲ್ಕೇ ದಿನದಲ್ಲಿ ಸ್ಥಗಿತಗೊಂಡಿದೆ.
-ರವಿಚಂದ್ರ, ಕಾಂಗ್ರೆಸ್ ಯುವ ಮುಖಂಡ
* ಬಿ.ನಿಂಗಣ್ಣಕೋಟೆ