ಬಾಲ ಪ್ರತಿಭೆಯ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ
Team Udayavani, Nov 15, 2020, 8:00 PM IST
ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ನಗರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಶನಿವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಲಾಯಿತು.
ನಗರದ ರಾಮಾನುಜ ರಸ್ತೆಯಲ್ಲಿನ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ನಡೆದ ಬಾಲಪ್ರತಿಭೆಯ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ನಟನೆ, ಯೋಗ, ಕರಾಟೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಬಾಲ ಪ್ರತಿಭೆಗಳಾಗಿ ಹೊರಹೊಮ್ಮಿರುವ ಶ್ರೇಷ್ಠ ಎಸ್.ಜುಪ್ತಿಮಠ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಬಾಲನಟಎಂ.ಮಹೇಂದ್ರ ಪ್ರಸಾದ್, ಚಿತ್ರಕಲೆ, ವನ್ಯಜೀವಿಛಾಯಾಗ್ರಹಣ, ಆನೆಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡಿರುವ ಜಿ.ಎಸ್.ನಂದೀಶ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆನೀಡಲಾಯಿತು. ಇವರ ಜೊತೆಗೆ ಸರ್ಕಾರಿಶಾಲೆಗಳಲ್ಲಿ ಓದುತ್ತಾ ಉತ್ತಮ ಅಂಕ ಪಡೆದ ಹಾಗೂ ವಿವಿಧ ಪ್ರತಿಭೆಗಳನ್ನು ಹೊಂದಿರುವ ಏಳು ವಿದ್ಯಾರ್ಥಿಗಳಿಗೆ ಕಿರುಕಾಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಬಿ.ಎಂ.ರಾಮಚಂದ್ರ ಉದ್ಘಾಟಿಸಿ, ಮಕ್ಕಳಿಗೆ ಮತ್ತಷ್ಟು ಸಾಧನೆ ಮಾಡುವಂತಾಗಿ ಎಂದು ಶುಭ ಹಾರೈಸಿದರು. ಇದೇ ವೇಳೆ ಸನ್ಮಾನಿತ ಜಿ.ಎಸ್.ನಂದೀಶ ರಚಿಸಿರುವಕಲಾಕೃತಿಗಳಎರಡುದಿನದ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಮೈಸೂರು ಆರ್ಟ್ ಗ್ಯಾಲರಿಯ ಅಧ್ಯಕ್ಷ ಎಸ್.ಶಿವಲಿಂಗಪ್ಪ, ನಾವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಓದಿನ ಬಗ್ಗೆ ಮಾತ್ರ ಗಮನ ಕೊಡುತ್ತಿದ್ದೆವು. ಆದರೆ ಈಗಿನ ಮಕ್ಕಳು ವಿವಿಧ ವಿದ್ಯೆಗಳನ್ನು ಕಲಿತು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ಇದನ್ನು ನೋಡಿದರೆ ಸಂತಸವಾಗುತ್ತದೆ ಎಂದರು.
ನಂತರ ಸನ್ಮಾನಿತ ಶ್ರೇಷ್ಠ ಎಸ್. ಜುಪ್ತಿಮಠ ಮಾತನಾಡಿ, ನಾನು ಚಿಕ್ಕ ವಯಸ್ಸಿನಲ್ಲಿಯೇ ಯೋಗ ಕಲಿತೆ. ನನ್ನೊಂದಿಗೆ ನನ್ನ ಪೋಷಕರು ಸಹ ಯೋಗಾಭ್ಯಾಸ ಮಾಡುತ್ತಾರೆ. ಶ್ರೀರಂಗಪಟ್ಟಣದ ತ್ರಿನೇತ್ರ ಮಹಂತ ಶೀವಯೋಗಿ ಸ್ವಾಮೀಜಿಯ ಬಳಿ ಜಲಯೋಗಕಲಿತೆ. ಈ ನಡುವೆ ನಟನ ಸಂಸ್ಥೆಗೆಸೇರಿ ಕಳೆದ 6 ವರ್ಷಗಳಿಂದ ಅಭಿನಯದಲ್ಲಿ ತೊಡಗಿಸಿಕೊಂಡಿದ್ದೇನೆ. ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಗಿದೆ. ದಿನವಿಡೀ ಓದುತ್ತಿದ್ದರೆ ಪಾಠಗಳು ಅಷ್ಟೇನೂ ಅರ್ಥವಾಗುವುದಿಲ್ಲ. ಆದರೆ ಬೇರೆ ಚಟುವಟಿಕೆಗಳ ನಡುವೆ ಸಮಯ ಮಾಡಿಕೊಂಡು ಓದಿದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಆದ್ದರಿಂದ ನನಗೆ ನನ್ನ ಚಟುವಟಿಕೆ ಗಳಿಂದ ಓದುವುದಕ್ಕೆ ಏನೂ ಸಮಸ್ಯೆಯಾಗಿಲ್ಲ ಎಂದು ತನ್ನ ಅನಿಸಿಕೆ ಹಂಚಿಕೊಂಡನು.